ತಿಪಟೂರು: ನಗರದಲ್ಲಿ ಮೃತಪಟ್ಟವರನ್ನು ಸ್ಮಶಾನಕ್ಕೆ ಕೊಂಡೊಯ್ಯಲು ಇರುವ ಚಿರಶಾಂತಿ ವಾಹನ ಕೆಟ್ಟುನಿಂತು ತಿಂಗಳುಗಳೇ ಕಳೆದರೂ ದುರಸ್ತಿಯಾಗಿಲ್ಲ.
ನಗರದ 31 ವಾರ್ಡ್ಗಳಲ್ಲಿ ಯಾರಾದರೂ ನಿಧನರಾದರೆ ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯಲು ಅನುಕೂಲವಾಗಲೆಂದು 12 ವರ್ಷಗಳ ಹಿಂದೆಯೇ ವಾಹನ ಖರೀದಿಸಲಾಗಿತ್ತು. ಅಗತ್ಯವಿರುವವರು ₹ 300 ಪಾವತಿಸಿ ಇದನ್ನು ಬಳಸಿಕೊಳ್ಳಬಹುದು. ವಾಹನದ ನಿರ್ವಹಣೆ ಮಾಡಬೇಕಿದ್ದ ನಗರಸಭೆ ಈ ವಾಹನದದುರಸ್ತಿಗೆ ಆಸಕ್ತಿವಹಿಸಿಲ್ಲ. ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.
ಖಾಸಗಿ ಆಂಬುಲೆನ್ಸ್ ಲಾಬಿ: ನಗರಸಭೆಯ ಚಿರಶಾಂತಿ ವಾಹನ ಕೆಟ್ಟು ನಿಂತಿರುವುದನ್ನೇ ಬಂಡವಾಳ ಮಾಡಿಕೊಂಡ ಕೆಲ ಖಾಸಗಿ ಆಂಬುಲೆನ್ಸ್ಗಳು ನಿಧನರಾದವರನ್ನು ಸ್ಮಶಾನಕ್ಕೆ ಕೊಂಡೊಯ್ಯಲು ಸಾವಿರಾರು ರೂಪಾಯಿ ಕೇಳುತ್ತಾ, ಸಾವಿನ ಮನೆಯಲ್ಲೂ ಸುಲಿಗೆ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನೂತನ ವಾಹನ ಖರೀದಿಗೆ ಆಗ್ರಹ:
12 ವರ್ಷಗಳಿಂದ ವಾಹನ ಬಳಸಿಕೊಂಡಿದ್ದಾರೆ. ಆದರೆ ಸುಸ್ಥಿತಿಯಲ್ಲಿ ಇಟ್ಟುಕೊಂಡಿಲ್ಲ. ಈ ವಾಹನದ ಚಾಲಕನಿಗೆ ಯಾರಿಗೆ ಸಮಸ್ಯೆ ಹೇಳಿಕೊಳ್ಳುವುದು ಎಂಬುದೇ ಪ್ರಶ್ನೆಯಾಗಿದೆ. ತಿಂಗಳಿಗೆ ಎರಡು ಬಾರಿ ಕೆಟ್ಟು ನಿಲ್ಲುತ್ತದೆ. ಹಾಗಾಗಿ ನೂತನ ವಾಹನ ಖರೀದಿಸಬೇಕು ಎನ್ನುವುದು ನಗರವಾಸಿಗಳ ಒತ್ತಾಯ.