ಹೆಬ್ರಿ: ರಾಜ್ಯ ಸರ್ಕಾರ ಕಳೆದ ಸಾಲಿನಲ್ಲಿ ಮುಜರಾಯಿ ಇಲಾಖೆ ಮೂಲಕ 2000 ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳಿಗೆ ದಾಖಲೆಯ 199 ಕೋಟಿ ಬಿಡುಗಡೆ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಮುಜರಾಯಿ ಸಚಿವ ಡಾ. ವಿ.ಎಸ್ ಆಚಾರ್ಯ ಹೇಳಿದರು.
ಭಾನುವಾರ ಸಂಜೆ ಶಿವಪುರ ಕುಬ್ರಿ ದುರ್ಗಾಪರಮೇಶ್ವರಿ ದೇವಿ ಸನ್ನಿಧಿಯಲ್ಲಿ ಶಿವಪುರ ಗ್ರಾ.ಪಂಮತ್ತು ಸ್ಥಳೀಯ ಮರಾಠಿ ಸೇವಾ ಸಂಘದ ಆಶ್ರಯದಲ್ಲಿ ನಡೆದ 10 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಕುಬ್ರಿ ಮರಾಠಿ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದರು.
ಕಳೆದ ಮೂರು ವರ್ಷಗಳಿಂದ ಸರ್ಕಾರ ದೇವಸ್ಥಾನಗಳಿಗೆ ನೀಡುವ ವಾರ್ಷಿಕ ತಸ್ತೀಕು ರೂ 10 ಸಾವಿರದಿಂದ 12 ಸಾವಿರ ರೂಗಳಿಗೆ ಏರಿಸಿದ್ದು ಇದೀಗ ರಾಜ್ಯದ 32ಸಾವಿರ ದೇವಸ್ಥಾನಗಳಿಗೆ ವರ್ಷಕ್ಕೆ 59 ಕೋಟಿ ತಸ್ತೀಕು ನೀಡುತ್ತಿದೆ ಎಂದರು.
ಶಿವಪುರ ಕುಬ್ರಿ ಮರಾಠಿ ಸಮುದಾಯ ಭವನದ ನಿರ್ಮಾಣಕ್ಕೆ ಸರ್ಕಾರ 5 ಲಕ್ಷ ಅನುದಾನ ನೀಡಿದ್ದು ಮುಂದೆ ಪಾಕಶಾಲೆ, ಭೋಜನ ಶಾಲೆಗಳ ನಿರ್ಮಾಣಕ್ಕೆ ಅನುದಾನ ನೀಡಲು ಪ್ರಯತ್ನಿಸುವುದಾಗಿ ತಿಳಿಸಿ ಸಮಾಜದ ಸ್ವಾಸ್ಥ್ಯಕ್ಕೆ ದೇವಸ್ಥಾನಗಳ ಅಭಿವೃದ್ಧಿ ಪೂರಕ ಎಂದರು.
ಮಾಜಿ ಶಾಸಕ ವಿ.ಸುನೀಲ್ ಕುಮಾರ್ ಮಾತನಾಡಿ, `ಉದ್ದೇಶಿತ ಶಿವಪುರ ಬಟ್ಟಂಬಳ್ಳಿ ಅಣೆಕಟ್ಟಿಗೆ ರೂ 1.3 ಕೋಟಿ ಹಣ ಬಿಡುಗಡೆಯಾಗಿದ್ದು ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮುಗಿದಿದೆ ಎಂದರು.
ಜಿ.ಪಂ ಸದಸ್ಯ ಎಂ.ಮಂಜುನಾಥ ಪೂಜಾರಿ, ತಾ.ಪಂ ಅಧ್ಯಕ್ಷ ಜಯರಾಮ ಸಾಲ್ಯಾನ್, ಸದಸ್ಯೆ ವಿಶಾಲಾಕ್ಷಿ ಶೆಟ್ಟಿ, ಶಿವಪುರ ಗ್ರಾ.ಪಂಅಧ್ಯಕ್ಷೆ ಹೇಮಾವತಿ ಆಚಾರ್ಯ, ಸದಸ್ಯ ಸುರೇಶ್ ಶೆಟ್ಟಿ, ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸಂಜೀವ ನಾಯ್ಕ, ಕುಬ್ರಿ ದೇವಸ್ಥಾನದ ಮೊಕ್ತೇಸರ ಕಿಟ್ಟ ನಾಯ್ಕ, ಶಿವಪುರ ಪಿಡಿಓ ಅನಿಲ್ ಕುಮಾರ್, ಮಧುಸೂಧನ ಪ್ರಸಾದ್, ಪಂತಿ ಕಾರ್ಯದರ್ಶಿ ಅಮರೇಶ್ ಇದ್ದರು.