ಕಾರ್ಕಳ: ‘ದೇಶದಲ್ಲಿ ಲೆಕ್ಕಪರಿಶೋಧಕರ ಕೊರತೆ ಇದ್ದು ಪ್ರತಿವರ್ಷ ಬೆರಳೆಣಿಕೆಯಷ್ಟೇ ಜನರು ಲೆಕ್ಕಪರಿಶೋಧಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುತ್ತಿದ್ದಾರೆ. ವಿದ್ಯಾರ್ಥಿಗಳು ಲೆಕ್ಕಪರಿಶೋಧಕ ಕ್ಷೇತ್ರದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು’ ಎಂದು ತ್ರಿಶಾ ಕ್ಲಾಸ್ನ ಪ್ರವರ್ತಕ ಗೋಪಾಲಕೃಷ್ಣ ಭಟ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹಿರ್ಗಾನದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ‘ಲೆಕ್ಕಪರಿಶೋಧಕ ಪರೀಕ್ಷೆ ಕಷ್ಟವಲ್ಲ. ಅದೊಂದು ವಿಶೇಷ ಅಧ್ಯಯನ. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಲ್ಲಿ ವಾಣಿಜ್ಯ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳಿವೆ. ಹೊಸ ಉದ್ದಿಮೆಗಳನ್ನು ಸ್ಥಾಪಿಸಲು ಸಹ ಸರ್ಕಾರದಿಂದ ಪ್ರೋತ್ಸಾಹ ದೊರೆಯುತ್ತಿದೆ. ಇಂತಹ ಸಂಸ್ಥೆಗಳಿಗೆ ಕೌಶಲ ಹೊಂದಿರುವ ಅಭ್ಯರ್ಥಿಗಳ ಅವಶ್ಯಕತೆಯಿದೆ’ ಎಂದರು.
ಪ್ರಾಂಶುಪಾಲ ಗಣಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕ ಸದಸ್ಯ ಅಶ್ವತ್ಥ ಎಸ್. ಎಲ್ ಮಾತನಾಡಿದರು. ಉಪನ್ಯಾಸಕ ರಾಘವೇಂದ್ರ ರಾವ್, ಉಮೇಶ್, ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು. ಆದಿತ್ಯ ಸ್ವಾಗತಿಸಿದರು. ತ್ರಿಶಾ ನಿರೂಪಿಸಿದರು. ಶೆರಿಲ್ ವಂದಿಸಿದರು.