ಉಡುಪಿ: ಸಮುದ್ರದಲ್ಲಿ ಭರಪೂರ ಮೀನು ಸಿಕ್ಕರೆ ಮೀನುಗಾರರು ಮಾತ್ರವಲ್ಲ; ಮತ್ಸ್ಯೋದ್ಯಮದ ಮೇಲೆ ಅವಲಂಬಿತವಾಗಿರುವ ಎಲ್ಲ ಉದ್ಯಮಗಳು ಚೇತರಿಕೆ ಕಾಣುತ್ತವೆ. ಆಳಸಮುದ್ರ ಮೀನುಗಾರಿಕೆಗೆ ಬಳಸುವ ಮಂಜುಗಡ್ಡೆ ತಯಾರಿಸುವ ಐಸ್ಪ್ಲಾಂಟ್ನ ಯಂತ್ರಗಳು ಸದ್ದು ಮಾಡುತ್ತವೆ. ಮೀನಿನ ತ್ಯಾಜ್ಯವನ್ನು ಕಚ್ಚಾವಸ್ತುವಾಗಿ ಬಳಸುವ ಫಿಶ್ಮೀಲ್ಗಳು ಆರಂಭವಾಗುತ್ತವೆ.ಮೀನುಗಾರಿಕೆ ಸಂಕಷ್ಟಕ್ಕೆ ಸಿಲುಕಿದರೆ ಎಲ್ಲ ಉದ್ಯಮಗಳೂ ಸೊರಗುತ್ತವೆ. ಈಗ ಕರಾವಳಿಯಲ್ಲಿಮೀನುಗಾರಿಕೆಗೆ ಕಷ್ಟದ ಕಾಲ.
ಸದ್ದುಮಾಡದ ಐಸ್ಪ್ಲಾಂಟ್, ಕೋಲ್ಡ್ ಸ್ಟೋರೆಜ್:ಕೊರೊನಾ ಲಾಕ್ಡೌನ್ನಿಂದಾಗಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಮಂಜುಗಡ್ಡೆ ತಯಾರಿಕಾ ಘಟಕಗಳು ಹಾಗೂ ಶೀತಲೀಕರಣ ಘಟಕಗಳು ಕಾರ್ಯನಿರ್ವಹಿಸಲಿಲ್ಲ. ಮೀನುಗಾರಿಕಾ ರಜಾ ಅವಧಿಯಲ್ಲೂ (ಜೂನ್–ಜುಲೈ) ಅವು ಬಂದ್ ಆಗಿದ್ದವು. ಸತತ ಐದು ತಿಂಗಳು ಉದ್ಯಮ ಬಂದ್ ಆಗಿದ್ದರಿಂದ ಐಸ್ಪ್ಲಾಂಟ್ ಹಾಗೂ ಕೋಲ್ಡ್ ಸ್ಟೋರೆಜ್ ಮಾಲೀಕರು ನಷ್ಟ ಅನುಭವಿಸಿದ್ದಾರೆ.
ಕೊರೊನಾ ಸೋಂಕಿನ ಭಯ, ಕಾರ್ಮಿಕರ ಅಲಭ್ಯ ಹಾಗೂ ಮೀನಿನ ಕ್ಷಾಮದಿಂದಾಗಿ ಕರಾವಳಿಯಲ್ಲಿ ಯಾಂತ್ರೀಕೃತ ಮೀನುಗಾರಿಕೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗದಿರುವ ಕಾರಣ, ಶೇ 50ರಷ್ಟು ಮಂಜುಗಡ್ಡೆ ಹಾಗೂ ಶೀತಲೀಕರಣ ಘಟಕಗಳು ಇನ್ನೂ ಬಾಗಿಲು ತೆರೆದಿಲ್ಲ.
ಕಾರ್ಮಿಕರ ಕೊರತೆ: ಮಲ್ಪೆ ಬಂದರಿಗೆ ಹೊಂದಿಕೊಂಡಂತೆ 50ಕ್ಕೂ ಹೆಚ್ಚು ಐಸ್ಪ್ಲಾಂಟ್ಗಳಿದ್ದು, ಕನಿಷ್ಠ 300 ಕಾರ್ಮಿಕರು ದುಡಿಯುತ್ತಿದ್ದಾರೆ. ಇವರಲ್ಲಿ ಅಸ್ಸಾಂ, ಜಾರ್ಖಂಡ್, ಛತ್ತೀಸ್ಗಡ ರಾಜ್ಯದವರೇ ಹೆಚ್ಚು. ಲಾಕ್ಡೌನ್ನಲ್ಲಿ ತವರಿಗೆ ಮರಳಿದ್ದ ಹೆಚ್ಚಿನವರು ವಾಪಸಾಗಿಲ್ಲ. ಹೀಗಾಗಿ ಕಾರ್ಮಿಕರ ಕೊರತೆ ಎದುರಾಗಿದೆ.
ವಿದ್ಯುತ್ ಬಿಲ್ ಹೊರೆ: ‘ಲಾಕ್ಡೌನ್ ಅವಧಿಯಲ್ಲಿ ವಿದ್ಯುತ್ ಶುಲ್ಕ ಪಾವತಿಗೆ ವಿನಾಯಿತಿ ಸಿಕ್ಕಿಲ್ಲ. ಐಸ್ಪ್ಲಾಂಟ್ಗಳು ಬಾಗಿಲು ಮುಚ್ಚಿದ್ದರೂ ಕನಿಷ್ಠ ಶುಲ್ಕ ಪಾವತಿಸಿದ್ದೇವೆ. ಸಣ್ಣ ಘಟಕಗಳ ಮಾಲೀಕರು ತಿಂಗಳಿಗೆ ಕನಿಷ್ಠ ₹ 5,000 ಕಟ್ಟಿದ್ದರೆ, ದೊಡ್ಡ ಐಸ್ಪ್ಲಾಂಟ್ ಮಾಲೀಕರು ₹ 30,000 ದಿಂದ ₹45,000 ಬಿಲ್ ಕಟ್ಟಿದ್ದಾರೆ. ಇದರಿಂದ ಉದ್ಯಮಕ್ಕೆ ಹೊರೆಯಾಗಿದೆ’ ಎನ್ನುತ್ತಾರೆ ಐಸ್ಪ್ಲಾಂಟ್ ಅಂಡ್ ಕೋಲ್ಡ್ ಸ್ಟೋರೆಜ್ ಮಾಲೀಕರ ಸಂಘದ ಅಧ್ಯಕ್ಷ ಶರತ್ ಕುಮಾರ್.
‘ಪ್ರತಿವರ್ಷ ಮೀನುಗಾರಿಕಾ ಋತು ಆರಂಭವಾಗುತ್ತಿದ್ದಂತೆ ಐಸ್ಪ್ಲಾಂಟ್ಗಳು ತೆರೆಯುತ್ತಿದ್ದವು. ಈ ವರ್ಷ ಮೀನಿನ ಕ್ಷಾಮದಿಂದಾಗಿ, ಉದ್ಯಮ ಮತ್ತೆ ನಷ್ಟ ಅನುಭವಿಸುವ ಆತಂಕ ಎದುರಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು ಶರತ್.
ಫಿಶ್ಮೀಲ್ ವ್ಯವಹಾರ ಶೇ 50 ಕುಸಿತ: ಮೀನುಗಾರಿಕೆ ಮೇಲೆ ಅವಲಂಬಿತವಾಗಿರುವ ಪ್ರಮುಖ ಉದ್ಯಮಗಳಲ್ಲಿ ಫಿಶ್ಮೀಲ್ಗಳು ಸಹ ಒಂದು. ದೇಶದ ಒಟ್ಟು ಫಿಶ್ಮೀಲ್ಗಳ ಪೈಕಿ ಅರ್ಧದಷ್ಟು ಕರಾವಳಿಯಲ್ಲಿದ್ದು, ರಾಜ್ಯವನ್ನು ಫಿಶ್ಮೀಲ್ ಹಬ್ ಎಂದೇ ಕರೆಯಲಾಗುತ್ತದೆ. ಕರಾವಳಿಯ ಮೂರು ಜಿಲ್ಲೆಗಳಲ್ಲಿ 23ಕ್ಕೂ ಹೆಚ್ಚು ಫಿಶ್ಮೀಲ್ಗಳಿವೆ.
ತಿನ್ನಲು ಯೋಗ್ಯವಾದ ಮೀನು ಮನುಷ್ಯನ ದೇಹ ಸೇರಿದರೆ, ಮೀನಿನ ತ್ಯಾಜ್ಯ, ಮಾರಾಟಕ್ಕೆ ಯೋಗ್ಯವಲ್ಲದ ಹಾಗೂ ಕೊಳೆತ ಮೀನುಗಳು ಫಿಶ್ಮೀಲ್ಗಳ ಪಾಲಿನ ಪ್ರಮುಖ ಕಚ್ಚಾವಸ್ತು. ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮೀನು ಸಿಗದೆ ಫಿಶ್ಮೀಲ್ಗಳ ವ್ಯವಹಾರ ಶೇ 50ರಷ್ಟು ಕುಸಿತ ಕಂಡಿದೆ.
‘ಲಾಕ್ಡೌನ್ ಅವಧಿ ಸೇರಿ 6 ತಿಂಗಳು ಫಿಶ್ಮೀಲ್ ಬಂದ್ ಆಗಿದ್ದವು. ಈ ಅವಧಿಯಲ್ಲಿ ಕಾರ್ಮಿಕರಿಗೆ ಅರ್ಧ ವೇತನ ಕೊಡಲಾಗಿದ್ದು, ಹೆಚ್ಚಿನ ಹೊರೆ ಬಿದ್ದಿದೆ. ಆಗಸ್ಟ್ನಿಂದ ಫಿಶ್ಮೀಲ್ಗಳು ಆರಂಭವಾದರೂ ಸಮುದ್ರದಲ್ಲಿ ಮೀನಿನ ಕೊರತೆಯಿಂದ ಫಿಶ್ಮೀಲ್ಗಳಿಗೆ ಮೀನು ಬರುತ್ತಿಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ ಮಾಲೀಕರು ಕಾರ್ಖಾನೆಗಳ ಬಾಗಿಲು ಹಾಕಬೇಕಾಗುತ್ತದೆ’ ಎನ್ನುತ್ತಾರೆ ಆಲ್ ಇಂಡಿಯಾ ಫಿಶ್ಮೀಲ್ ಎಕ್ಸ್ಪೋರ್ಟ್ ಅಸೋಸಿಯೇಷನ್ ಅಧ್ಯಕ್ಷ ಶೌಖತ್ ಶೌರಿ.
ಬೂತಾಯಿ ಕೊರತೆ: ಫಿಶ್ಮೀಲ್ಗಳಲ್ಲಿ ಮೀನಿನ ಆಹಾರ ತಯಾರಿಕೆಗೆ ಬೇಕಾಗುವ ಫಿಶ್ ಪೌಡರ್, ಮೀನಿನ ಎಣ್ಣೆ, ಫಿಶ್ ಸಾಲ್ಯುಬಲ್ ಪೇಸ್ಟ್ ತಯಾರಿಸಲಾಗುತ್ತದೆ. ಈ ಉತ್ಪನ್ನಗಳ ತಯಾರಿಕೆಗೆ ಬೂತಾಯಿ ಮೀನು ಪ್ರಮುಖ ಕಚ್ಚಾವಸ್ತು. ಈ ವರ್ಷ ಶೇ 10ರಷ್ಟು ಬೂತಾಯಿ ಕೂಡ ಘಟಕಗಳಿಗೆ ಬರುತ್ತಿಲ್ಲ ಎಂದಿದ್ದಾರೆ ಶೌಕತ್.
ಜಿಎಸ್ಟಿ ಹೆಚ್ಚಳ
‘ಮೊದಲು ಫಿಶ್ಮಿಲ್ಗಳ ಮೇಲೆ ಜಿಎಸ್ಟಿ ಇರಲಿಲ್ಲ. ಈಚೆಗೆ ಶೇ 5 ಜಿಎಸ್ಟಿ ಹಾಕಲಾಗುತ್ತಿದೆ. ಇದರಿಂದ ಸಂಕಷ್ಟದಲ್ಲಿರುವ ಫಿಶ್ಮಿಲ್ಗಳು ಬಾಗಿಲು ಮುಚ್ಚುವ ಹಂತಕ್ಕೆ ಬಂದಿವೆ. ಕೇಂದ್ರ ಸರ್ಕಾರ ಜಿಎಸ್ಟಿ ಹೊರೆ ಇಳಿಸಿದರೆ ಅನುಕೂಲ’ ಎನ್ನುತ್ತಾರೆ ಆಲ್ ಇಂಡಿಯಾ ಫಿಶ್ಮಿಲ್ ಎಕ್ಸ್ಪೋರ್ಟ್ ಅಸೋಸಿಯೇಷನ್ ಅಧ್ಯಕ್ಷ ಶೌಖತ್ ಶೌರಿ.
ಫಿಶ್ಮಿಲ್ಗಳ ಸಂಖ್ಯೆ
ದಕ್ಷಿಣ ಕನ್ನಡ–16
ಉಡುಪಿ–5
ಉತ್ತರ ಕನ್ನಡ–2
ವಾರ್ಷಿಕ ವಹಿವಾಟು– ₹ 5 ಕೋಟಿಯಿಂದ ರಿಂದ ₹ 10,000 ಕೋಟಿ
ಫಿಶ್ಮಿಲ್ಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು–5,000
ಉಡುಪಿಯಲ್ಲಿರುವ ಐಸ್ಪ್ಲಾಂಟ್ಗಳು –65
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.