ಉಡುಪಿ: ಮುಖ್ಯಮಂತ್ರಿ ಹೆಸರಿನಲ್ಲಿ ನಕಲಿ ಇಮೇಲ್ ಐಡಿ ಸೃಷ್ಟಿಸಿ ಮಣಿಪಾಲದ ಮಾಹೆ ರಿಜಿಸ್ಟ್ರಾರ್ ವಿಭಾಗಕ್ಕೆ ಈಚೆಗೆ ಬೆದರಿಕೆ ಇಮೇಲ್ ಕಳುಹಿಸಲಾಗಿದೆ. ಈ ಸಂಬಂಧ ಮಣಿಪಾಲದ ಮಾಹೆ ನಿರ್ದೇಶಕ ಡಾ.ನಾರಾಯಣ ಸಭಾಯಿತ್ ಸೆನ್ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ನ.1ರಂದು ಬೆಳಿಗ್ಗೆ 4.48ಕ್ಕೆ cm@karnataka.gov.in ಎಂಬ ಖಾತೆಯಿಂದ ಮಾಹೆಗೆ ಮೇಲ್ ಬಂದಿದ್ದು, ‘ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಸಂಸ್ಥೆಯು ಕಾಲೇಜುಗಳನ್ನು ಆರಂಭಿಸುತ್ತಿರುವ ಬಗ್ಗೆ ಪೋಷಕರು ಹಾಗೂ ವಿದ್ಯಾರ್ಥಿಗಳಿಂದ ದೂರುಗಳು ಬಂದಿವೆ. ಸದ್ಯದ ಪರಿಸ್ಥಿತಿಯಲ್ಲಿ ಕಾಲೇಜುಗಳನ್ನು ತೆರೆಯುವುದು ಸರಿಯಲ್ಲ. ಜ.1, 2021ರವರೆಗೆ ಕಾಲೇಜುಗಳನ್ನು ಆರಂಭಿಸಬಾರದು. ನಂತರ ತೆರೆಯಬೇಕಾದರೆ ಪೋಷಕರ ಹಾಗೂ ವಿದ್ಯಾರ್ಥಿಗಳ ಅಭಿಪ್ರಾಯ ಪಡೆಯಬೇಕು’ ಎಂದು ಇಮೇಲ್ ಕಳುಹಿಸಲಾಗಿದೆ.
ಸಂದೇಶದ ಕೊನೆಯಲ್ಲಿ ‘ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ, ಕೊಠಡಿ ಸಂಖ್ಯೆ 323 ‘ಎ’ ಮೂರನೇ ಮಹಡಿ, ವಿಧಾನಸೌಧ, ಬೆಂಗಳೂರು’ ಎಂದು ಬರೆಯಲಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.