ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಮಳೆ ಅಬ್ಬರ- ಮನೆಗಳಿಗೆ ಹಾನಿ

100 ವಿದ್ಯುತ್ ಕಂಬಗಳಿಗೆ ಹಾನಿ; ಹೆಬ್ರಿಯಲ್ಲಿ ಅತಿ ಹೆಚ್ಚು ಮಳೆ
Last Updated 16 ಜುಲೈ 2021, 5:03 IST
ಅಕ್ಷರ ಗಾತ್ರ

ಉಡುಪಿ: ಕರಾವಳಿಯಲ್ಲಿ ವರುಣನ ಅಬ್ಬರ ಹೆಚ್ಚಾಗಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಹಲವು ಮನೆಗಳು ಕುಸಿದು ಬಿದ್ದಿವೆ. ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ.

ಕುಂದಾಪುರ ತಾಲ್ಲೂಕಿನ ಬಸ್ರೂರು ಗ್ರಾಮದ ಗಣಪಯ್ಯ ಗಾಣಿಗ ಅವರ ಮನೆಯ ಮೇಲೆ ಮರಬಿದ್ದಿದ್ದು, ವಾರಿಜ ಹಾಗೂ ವೆಂಕಮ್ಮಗೆ ಗಾಯಗಳಾಗಿವೆ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಂದಾಪುರ ತಾಲ್ಲೂಕಿನ ಉಪ್ಪಿನಕುದ್ರು ಗ್ರಾಮದಲ್ಲಿ ಲಕ್ಷ್ಮೀ ಎಂಬುವರ ಮನೆಯ ಮೇಲೆ, ಶಂಕರನಾರಾಯಣದ ಯೋಗೇಂದ್ರ ಬಳೆಗಾರ, ವಕ್ವಾಡಿ ಗ್ರಾಮದ ವನಜಾಕ್ಷಿ ಶೆಟ್ಟಿಗಾರ್‌, ಬಸ್ರೂರು ಗ್ರಾಮದ ಗಣಪಯ್ಯ ಗಾಣಿಗ ಅವರ ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಬೈಂದೂರು ತಾಲ್ಲೂಕಿನ ಕಂಬದಕೋಣೆ ಗ್ರಾಮದಲ್ಲಿ ಮುಕಾಂಬು ಆಚಾರಿ ಅವರ ಮನೆಗೆ, ಶಿರೂರು ಗ್ರಾಮದಲ್ಲಿ ಮಹಮ್ಮದ್‌ ಗೌಸ್‌, ಲಕ್ಷ್ಮಣ ಮೊಗವೀರ ಅವರ ಮನೆಗೆ ಹಾನಿಯಾಗಿದೆ. ಕಾರ್ಕಳ ತಾಲ್ಲೂಕಿನ ಮುಲ್ಲಡ್ಕ ಗ್ರಾಮದಲ್ಲಿ ವಸಂತಿ ಅವರ ಮನೆಯ ಮೇಲೆ ಮರ ಬಿದ್ದಿದೆ.

ಬ್ರಹ್ಮಾವರ ತಾಲ್ಲೂಕಿನ ಹೇರಾಡಿ ಗ್ರಾಮದಲ್ಲಿ ಕೃಷ್ಣ ನಾಯ್ಕ, ಆರೂರು ಗ್ರಾಮದ ರಾಧಾಬಾಯಿ ಅವರ ನಿವಾಸ, ವಡ್ಡರ್ಸೆ ಗ್ರಾಮದ ಜಯ ಪೂಜಾರ್ತಿ ಅವರ ಮನೆಗಳು ಗಾಳಿಮಳೆಯಿಂದ ಹಾನಿಯಾಗಿದೆ.

ಕಾಪು ತಾಲ್ಲೂಕಿನ ಮೂಡಬೆಟ್ಟು ಗ್ರಾಮದಲ್ಲಿ ಲೀಲಾ ಅವರ ಮನೆ, ಶಿರ್ವ ಗ್ರಾಮದ ಎಂ.ಎಚ್.ಹುಸೇನ್, ಪಲಿಮಾರು ಗ್ರಾಮದ ಮಾಧವ ದೇವಾಡಿಗ, ಎಲ್ಲೂರು ಗ್ರಾಮದ ಬಶೀರ್ ಸಾಹೇಬ್, ಯೇಣಗುಡ್ಡೆ ಗ್ರಾಮದ ಅಮ್ಮಾಬಿ, ಕೋಟೆ ಗ್ರಾಮದ ಜಲಜ ಮರಕಾಲ್ತಿ, ಮೂಡಬೆಟ್ಟು ಗ್ರಾಮದ ವೆಂಕಟ ರಮಣ ಶೆಣೈ, ಕೋಟೆ ಗ್ರಾಮದ ಕಾಂಚನ ಅವರ ಮನೆಗಳಿಗೂ ಹಾನಿಯಾಗಿದೆ. ಕಾಪು ತಾಲ್ಲೂಕಿನ ಕೋಟೆ ಗ್ರಾಮದಲ್ಲಿರುವ ಗ್ರಾಮ ಕರಣಿಕರ ಕಚೇರಿ ಮೇಲೆ ಮರ ಬಿದ್ದಿದೆ.

100 ವಿದ್ಯುತ್ ಕಂಬಗಳು ಧರೆಗೆ: ಬುಧವಾರ ಹಾಗೂ ಗುರುವಾರ ಸುರಿದ ಮಳೆಗೆ ಜಿಲ್ಲೆಯಲ್ಲಿ 100 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಉಡುಪಿಯಲ್ಲಿ 74 ಹಾಗೂ ಕುಂದಾಪುರದಲ್ಲಿ 26 ಕಂಬಗಳಿಗೆ ಹಾನಿಯಾಗಿದೆ. 2.15 ಕಿ.ಮೀ ವಿದ್ಯುತ್ ಮಾರ್ಗ ಹಾಳಾಗಿದ್ದು, ₹ 10.55 ಲಕ್ಷ ಹಾನಿಯಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕುಂದಾಪುರ ತಾಲ್ಲೂಕಿನ ಕುಳಂಜೆ ಗ್ರಾಮದ ಶಂಕರ ನಾಯ್ಕ ಅವರ ಅಡಿಕೆ ತೋಟಕ್ಕೆ ನೀರು ನುಗ್ಗಿ ಗಿಡಗಳಿಗೆ ಹಾನಿಯಾಗಿದೆ. ಹಲವು ಕಡೆ ಭತ್ತದ ನೇಜಿ ಮಳೆನೀರಿಗೆ ಕರಗುತ್ತಿದ್ದು, ರೈತರು ಆತಂಕದಲ್ಲಿದ್ದಾರೆ. ಕಳೆದ 24 ಗಂಟೆಗಳಲ್ಲಿ ಉಡುಪಿ ತಾಲ್ಲೂಕಿನಲ್ಲಿ 3.3 ಸೆಂ.ಮೀ, ಬ್ರಹ್ಮಾವರ ತಾಲ್ಲೂಕಿನಲ್ಲಿ 5 ಸೆಂ.ಮೀ, ಕಾಪು ತಾಲ್ಲೂಕಿನಲ್ಲಿ 2.8 ಸೆಂ.ಮೀ, ಕುಂದಾಪುರ ತಾಲ್ಲೂಕಿನಲ್ಲಿ 5.3 ಸೆಂ.ಮೀ, ಬೈಂದೂರು ತಾಲ್ಲೂಕಿನಲ್ಲಿ 4.7 ಸೆಂ.ಮೀ, ಕಾರ್ಕಳ ತಾಲ್ಲೂಕಿನಲ್ಲಿ 3.5 ಸೆಂ.ಮೀ, ಹೆಬ್ರಿ ತಾಲ್ಲೂಕಿನಲ್ಲಿ 11 ಸೆಂ.ಮೀ ಮಳೆ ಬಿದ್ದಿದ್ದು, ಜಿಲ್ಲೆಯಲ್ಲಿ ಒಟ್ಟಾರೆ 5.2 ಸೆಂಮೀ ಮಳೆಯಾಗಿದೆ.

ಕಾರ್ಕಳ: ಮರಬಿದ್ದು ಸಂಚಾರ ದುಸ್ತರ

ಕಾರ್ಕಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಕರಿಯಕಲ್ಲು ಹಿಂದೂ ಸ್ಮಶಾನದ ಎದುರು ಗುರುವಾರ ಮರ ಬಿದ್ದು ಎರಡು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಪಡುಬಿದ್ರಿ, ಧರ್ಮಸ್ಥಳ, ಶೃಂಗೇರಿ, ಕುದುರೆಮುಖ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದ್ದು, ಕರಿಯಕಲ್ಲು ಹಿಂದೂ ಸ್ಮಶಾನದ ವ್ಯವಸ್ಥಾಪನಾ ಸಮಿತಿ ಸಂಚಾಲಕ ಪ್ರಕಾಶ್‌ ರಾವ್ ನೇತೃತ್ವದಲ್ಲಿ ಸಮಿತಿ ಪದಾಧಿಕಾರಿಗಳು, ಸಾರ್ವಜನಿಕರು ಮರ ತೆರವಿಗೆ ಸಹಕಾರ ನೀಡಿದರು.

ಹೆಬ್ರಿ: ಮಳೆಗೆ ತುಂಬಿದ ಸೀತಾನದಿ

ಹೆಬ್ರಿ: ಇಲ್ಲಿನ ಪರಿಸರದಲ್ಲಿ ಬುಧವಾರ ದಿಂದ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ಸೀತಾನದಿ ತುಂಬಿ ಹರಿಯುತ್ತಿದೆ.

ಹೆಬ್ರಿಯ ಕುಚ್ಚೂರು ಕುಡಿಬೈಲಿನ ಭತ್ತ ಕೃಷಿ ಮಾಡಿದ ಗದ್ದೆ ನೀರಿನಲ್ಲಿ ಮುಳುಗಿದೆ. ವಿವಿಧೆಡೆ ಗದ್ದೆಗಳಲ್ಲಿ ನೀರು ತುಂಬಿಕೊಂಡಿದೆ. ನದಿ, ಹಳ್ಳ ತೋಡುಗಳು ತುಂಬಿ ಹರಿಯುತ್ತಿವೆ. ಗಾಳಿಯಿಂದಾಗಿ ಹಲವೆಡೆ ಮರಗಳು ಉರುಳಿ ಬಿದ್ದಿವೆ. ಕಳೆದ ಎರಡು ದಿನಗಳಿಂದ ವಿದ್ಯುತ್‌ ವ್ಯತ್ಯಯ ಉಂಟಾಗಿದೆ ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಯಾವುದೆ ಹಾನಿ ಆಗಿರುವ ಬಗ್ಗೆ ವರದಿಯಾಗಿಲ್ಲ.

ಈ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ಪುರಂದರ್‌ ಕೆ ಅವರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಸ್ತೆ ಮೇಲೆ ನದಿ ನೀರು ಹರಿದು ಬರುವ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತದೆ. ಪೊಲೀಸ್‌, ಗ್ರಾಮ ಪಂಚಾಯಿತಿ ಮತ್ತು ಅರಣ್ಯ ಇಲಾಖೆಗೆ ಇಲ್ಲಿನ ಸ್ಥಿತಿಯ ಬಗ್ಗೆ ಮಾಹಿತಿ ಇದ್ದು ಸೂಕ್ತಕ್ರಮ ಕೈಗೊಳ್ಳಲಾಗುತ್ತದೆ ಎಂದು ತಹಶೀಲ್ದಾರ್‌ ಪುರಂದರ್‌ ತಿಳಿಸಿದರು.

ಬಸ್ರೂರು: ಉರುಳಿ ಬಿದ್ದ ಮರ– ಇಬ್ಬರಿಗೆ ಗಾಯ

ಕುಂದಾಪುರ: ಸಮೀಪದ ಬಸ್ರೂರಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಯೊಂದರ ಮೇಲೆ ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಭಾರಿ ಗಾತ್ರದ ಮರ ಉರುಳಿ ಬಿದ್ದು ಹಾನಿ ಸಂಭವಿಸಿದೆ. ಮನೆಯಲ್ಲಿ ಇದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

ಬಸ್ರೂರಿನ ಮಕ್ಕಿಮನೆ ನಿವಾಸಿ ಗಣಪಯ್ಯ ಗಾಣಿಗ ಅವರ ಮನೆ ಚಾವಣಿ ಮೇಲೆ ರಾತ್ರಿ ಸುರಿದ ಗಾಳಿ ಮಳೆಗೆ ಮನೆ ಸಮೀಪದಲ್ಲಿ ಇದ್ದ ಎರಡು ತೆಂಗಿನ ಮರ ಹಾಗೂ ದೂಪದ ಮರ ಬಿದ್ದು ಹಾನಿಯಾಗಿದೆ. ಈ ವೇಳೆ
ಮನೆಯಲ್ಲಿದ್ದ ಗಣಪಯ್ಯ ಗಾಣಿಗ ಅವರ ಪತ್ನಿ ವಾರಿಜಾ ಹಾಗೂ ಅತ್ತೆ ವೆಂಕಮ್ಮ ಅವರ ತಲೆಗೆ ಗಂಭೀರ ಗಾಯಗಳಾಗಿವೆ. ಸ್ಥಳೀಯರ ಸಹಕಾರದಿಂದ ಕುಂದಾ ಪುರದ ಖಾಸಗಿ ಆಸ್ಪತ್ರೆಗೆ ದಾಖಲಾಸಲಾಗಿದ್ದು, ಇಬ್ಬರು ಚೇತರಿಸಿಕೊಳ್ಳುತ್ತಿದ್ದಾರೆ. ಗುರುವಾರ ಬೆಳಿಗ್ಗೆ ಸ್ಥಳೀಯರು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಅವರ ನೇತೃತ್ವದಲ್ಲಿ ಮರ ತೆರವು ಕಾರ್ಯ ನಡೆಯಿತು. ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಇಲಾಖೆ ಅಧಿಕಾರಿಗಳು ₹ 5 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಕಟಪಾಡಿ: ಮನೆಯ ಮೇಲೆ ಬಿದ್ದ ಮರ

ಕಟಪಾಡಿಯ ವಿಶ್ವನಾಥ ದೇವಸ್ಥಾನ ಎದುರಿಗಿದ್ದ ಬೃಹತ್ ಮರವೊಂದು ಬುಡಸಹಿತ ಮನೆಯ ಮೇಲೆ ಬಿದ್ದಿದೆ. ಪರಿಣಾಮ ಕಾಪೌಂಡ್‌ ಹಾಗೂ ಮನೆಯ ಒಂದು ಭಾಗಕ್ಕೆ ಹಾನಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ಯಾರಿಗೂ ಪೆಟ್ಟಾಗಿಲ್ಲ.

ಕಾಪು: ಮಳೆಗೆ ₹ 3.95 ಲಕ್ಷ ನಷ್ಟ

ಕಾಪು (ಪಡುಬಿದ್ರಿ): ರಾಜ್ಯದಲ್ಲಿ ನೈಋತ್ಯ ಮುಂಗಾರು ಚುರುಕಾಗಿದ್ದು, ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಎಲ್ಲೆಡೆ ಬುಧವಾರ ರಾತ್ರಿಯಿಂದ ಭಾರಿ ಮಳೆಯಾಗಿದೆ. ಮಳೆಯಿಂದ ವಿವಿದೆಢೆ ಕೆಲವು ಮನೆಗಳಿಗೆ ಹಾನಿ ಸಂಭವಿಸಿದ್ದು, ₹ 3.95 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಮೂರು ದಿನಗಳಿಂದ ಜೋರಾಗಿ ಮಳೆ ಸುರಿಯುತಿದ್ದು, ಗಾಳಿ ವೇಗಕ್ಕೆ ಕೆಲವೆಡೆ ಮರಗಳು ಧರೆಗುರುಳಿದೆ, ವಿದ್ಯುತ್ ಕಂಬಗಳ ಮತ್ತು ಮನೆಗಳಿಗೆ ಹಾನಿ ಉಂಟಾಗಿದೆ. ರಸ್ತೆ ಪಕ್ಕದಲ್ಲಿ ಚರಂಡಿ ವ್ಯವಸ್ಥೆಗಳಿಲ್ಲದೆ ರಸ್ತೆಯ ಮಧ್ಯ ಭಾಗದಲ್ಲೇ ನೀರು ಹರಿದು ಹೋಗುತ್ತಿದೆ. ತಗ್ಗು ಪ್ರದೇಶಗಳಲ್ಲಿ ನೆರೆ ಭೀತಿ ಉಂಟಾಗಿದೆ. ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಸಮುದ್ರ ಕೊರೆತದ ಭೀತಿ ಉಂಟಾಗಿದೆ.

ಹಾನಿ: ಮಳೆಯಿಂದ ಮೂಡಬೆಟ್ಟು ಗ್ರಾಮದ ಲೀಲಾ ಬಿನ್ ಗೋಪಿ ಅವರ ಮನೆ ಗಾಳಿ ಮಳೆಗೆ ಭಾಗಶಃ ಹಾನಿಯಾಗಿದ್ದು, ಶಿರ್ವ ಗ್ರಾಮದ ಎಂ. ಎಚ್. ಹುಸೇನ್‌ ಅವರ ವಾಸ್ತವ್ಯದ ಮನೆ ಮೇಲೆ ಮರ ಬಿದ್ದು, ಭಾಗಶಃ ಹಾನಿ ಉಂಟಾಗಿದ್ದು ₹1 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಫಲಿಮಾರು ಗ್ರಾಮದ ಮಾಧವ ದೇವಾಡಿಗ ಅವರ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿ ಉಂಟಾಗಿದ್ದು ₹ 20 ಸಾವಿರ ಎಲ್ಲೂರು ಗ್ರಾಮದ ಬಶೀರ್ ಸಾಹೇಬ್‌ರವರ ಮನೆಗೆ ಭಾಗಶಃ ಹಾನಿಯಾಗಿದೆ. ಯೇಣಗುಡ್ಡೆ ಗ್ರಾಮದ ಅಮ್ಮಾಬಿ ಮನೆಗೆ ₹ 50 ಸಾವಿರ ನಷ್ಟ ಉಂಟಾಗಿದೆ. ಕೋಟೆ ಗ್ರಾಮದ ಜಲಜ ಮರಕಾಲ್ತಿ ಮನೆ ಮೇಲೆ ಮರ ಬಿದ್ದು₹ 50 ಸಾವಿರ ನಷ್ಟ ಉಂಟಾಗಿದೆ.

ಮೂಡಬೆಟ್ಟು ಗ್ರಾಮದ ವೆಂಕರಮಣ ಮತ್ತು ಶೆಣೈ ಅವರ ಮನೆಗೆ ಸಂಪೂರ್ಣ ಹಾನಿಯಾಗಿದ್ದು, ₹ 1 ಲಕ್ಷ, ಕೋಟೆ ಗ್ರಾಮದ ಕಾಂಚನ, ಗೋಪಾಲ ಸಾಲ್ಯಾನ್ ಮನೆಗೆ ಮರ ಬಿದ್ದು ₹ 15 ಸಾವಿರ,ಕೋಟೆ ಗ್ರಾಮದ ಗ್ರಾಮಕರಣಿಕರ ಕಚೇರಿಯ ಮೇಲೆ ಕೂಡ ಮರ ಬಿದ್ದು ₹ 30 ಸಾವಿರ ನಷ್ಟ ಉಂಟಾಗಿದೆ ಎಂದು ತಾಲ್ಲೂಕು ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT