ಉಡುಪಿ: ಶೀಬ್ರ ಸಿದ್ಧಿ ವಿನಾಯಕ ದೇವಸ್ಥಾನ ಬಳಿಕ ಕೃಷ್ಣಾಂಗಾರಕ ಸ್ನಾನಘಟ್ಟದಲ್ಲಿ ಮಂಗಳವಾರ ಕೃಷ್ಣಾಂಗಾರಕ ಚತುರ್ದಶಿ ಅಂಗವಾಗಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮಿಜಿ, ಶೀರೂರು ಮಠದ ವೇದವರ್ಧನ ತೀರ್ಥ ಸ್ವಾಮೀಜಿ ಸ್ವರ್ಣಾ ನದಿಯಲ್ಲಿ ಮಿಂದು ಸ್ವರ್ಣೆಗೆ ಆರತಿ ಬೆಳಗಿದರು.
ಮಂಗಳವಾರ ಕೃಷ್ಣಾಂಗಾರಕ ಚತುರ್ದಶಿ ಅಂಗವಾಗಿ ಸ್ವರ್ಣಾ ನದಿಯಲ್ಲಿ ನೂರಾರು ಮಂದಿ ಪವಿತ್ರ ಸ್ನಾನ ಮಾಡಿದರು. ಬೆಂಗಳೂರು, ಹುಬ್ಬಳ್ಳಿ ಧಾರವಾಡ, ಮೈಸೂರು, ಮಂಗಳೂರು, ಆಂಧ್ರದ ಚಿತ್ತೂರಿನಿಂದ ಭಕ್ತರು ಬಂದಿದ್ದರು.
ಪಿಂಡ ಪ್ರದಾನ ಕಾರ್ಯ ಶ್ಲಾಘನೀಯ: ಪೇಜಾವರ ಶ್ರೀ
ರಾಜ್ಯದಲ್ಲಿ ಕೊರೊನಾದಿಂದ ಮೃತರಾದ 1,130 ಮಂದಿಗೆ ಸದ್ಗತಿ ಸಿಗಲಿ ಎಂಬ ಆಶಯದೊಂದಿಗೆ ಕಂದಾಯ ಸಚಿವ ಅಶೋಕ್ ಪಿಂಡ ಪ್ರದಾನ ಮಾಡಿರುವುದು ಶ್ಲಾಘನೀಯ ಕಾರ್ಯ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಸನಾತನ ನಂಬಿಕೆಯಂತೆ ಮೃತರಿಗೆ ಔರ್ಧ್ವದೈಹಿಕ ಕ್ರಿಯೆ ನಡೆಸಿ ಸದ್ಗತಿಗೆ ಪ್ರಾರ್ಥಿಸುವುದು ಅವಶ್ಯವಾದ ಕರ್ತವ್ಯ. ವಿಧಿಗಳನ್ನು ನೆರವೇರಿಸಲು ಕುಟುಂಬದವರು ಹಿಂದೇಟು ಹಾಕಿದಾಗ ಸರ್ಕಾರದ ಪರವಾಗಿ ಜವಾಬ್ದಾರಿ ನಿಭಾಯಿಸಿದ್ದು ಸಂತಸ ತಂದಿದೆ ಎಂದು ಶ್ರೀಗಳು ತಿಳಿಸಿದ್ದಾರೆ.