ಉಡುಪಿ: ರಾಜ್ಯ ಸರ್ಕಾರ ದೇವಸ್ಥಾನ ಹಾಗೂ ಹೋಟೆಲ್ಗಳನ್ನು ಸೋಮವಾರದಿಂದ ತೆರೆಯಲು ಅನುಮತಿ ಕೊಟ್ಟರೂ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ದೇವಸ್ಥಾನಗಳು ಹಾಗೂ ಹೋಟೆಲ್ಗಳು ತೆರೆದಿರಲಿಲ್ಲ.
ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಉಡುಪಿಯ ಕೃಷ್ಣಮಠದಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗಿಲ್ಲ. ನಗರದ ಉಳಿದ ದೇವಸ್ಥಾನಗಳು ಸಹ ಪೂರ್ಣ ತೆರೆದಿರಲಿಲ್ಲ. ಭಕ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರಲಿಲ್ಲ.
ಹೋಟೆಲ್ಗಳಲ್ಲಿ ಶೇ 20ರಷ್ಟು ವ್ಯವಹಾರ:
ಹೋಟೆಲ್ಗಳಲ್ಲಿ ಕುಳಿತು ಊಟ ಮಾಡಲು ಅನುಮತಿ ನೀಡಲಾಗಿದ್ದರೂ ಕೋವಿಡ್ ಭಯದಿಂದ ಗ್ರಾಹಕರು ಹೋಟೆಲ್ಗಳತ್ತ ಸುಳಿಯಲಿಲ್ಲ. ಸೋಂಕು ಹರಡುವ ಮುನ್ನ ದಿನಗಳಿಗೆ ಹೋಲಿಸಿದರೆ ಶೇ 20ರಷ್ಟು ಮಾತ್ರ ವ್ಯವಹಾರ ನಡೆಯಿತು ಎಂದು ಹೋಟೆಲ್ ಮಾಲೀಕರು ತಿಳಿಸಿದರು.
ಉಡುಪಿಯಲ್ಲಿ ಹೆಚ್ಚುತ್ತಿರುವ ಸೋಂಕಿನಿಂದ ಸಾರ್ವಜನಿಕರು ಆತಂಕದಲ್ಲಿದ್ದಾರೆ. ಹೋಟೆಲ್ ಉದ್ಯಮ ಚೇತರಿಸಿಕೊಳ್ಳಲು ಕನಿಷ್ಠ ಮೂರ್ನಾಲ್ಕು ತಿಂಗಳು ಬೇಕಾಗಬಹುದು. ಜತೆಗೆ, ವಲಸೆ ಕಾರ್ಮಿಕರ ಸಮಸ್ಯೆಯಿಂದಾಗಿ ಹೋಟೆಲ್ಗಳನ್ನು ನಡೆಸುವುದು ಕಷ್ಟವಾಗಿದೆ ಎಂದು ಮಾಲೀಕರು ಬೇಸರ ತೋಡಿಕೊಂಡರು.