ಕಾರ್ಕಳ: ವಿಶ್ವ ಯೋಗದಿನಾಚರಣೆಯ ಅಂಗವಾಗಿ ತಾಲ್ಲೂಕಿನ ವಿವಿಧೆಡೆ ಯೋಗದಿನವನ್ನು ಆಚರಿಸಲಾಯಿತು.
ತಾಲ್ಲೂಕಿನ ಹಿರ್ಗಾನದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಆರೋಗ್ಯಕ್ಕಾಗಿ ಯೋಗ ಎಂಬ ಘೋಷವಾಕ್ಯದಡಿಯಲ್ಲಿ ವಿಶ್ವ ಯೋಗದಿನವನ್ನು ಆಚರಿಸಲಾಯಿತು.
ವಾಣಿಜ್ಯ ವಿಭಾಗದ ಉಪನ್ಯಾಸಕ ರಾಘವೇಂದ್ರ ರಾವ್ ಅವರು ಮಾತನಾಡಿ ಯೋಗ, ವ್ಯಾಯಾಮ ಮಾಡುವುದರಿಂದ ದೈಹಿಕ ದೃಢತೆ, ಮಾನಸಿಕ ಏಕಾಗ್ರತೆ ಗಳಿಸಲು ಸಾಧ್ಯ ಎಂದರು. ಸುಚಾಂಕ್ಷ್ ಯೋಗಾಸನ ಮಾರ್ಗದರ್ಶನ ನಡೆಸಿಕೊಟ್ಟರು. ವಿದ್ಯಾ ಸಂಸ್ಥೆಯ ಉಪನ್ಯಾಸಕ ಡಾ. ಆದಂ ಶೇಖ್, ರಾಜೇಶ್ ಶೆಟ್ಟಿ, ಶಿವಕುಮಾರ್ ಇದ್ದರು.
ಇಲ್ಲಿನ ಭುವನೇಂದ್ರ ಪ್ರೌಢಶಾಲೆಯಲ್ಲಿ ಆಯೋಜಿಸಿದ ವಿಶ್ವಯೋಗ ದಿನಾಚರಣೆಯನ್ನು ಸಂಸ್ಥೆಯ ಸಂಚಾಲಕ ಎಸ್. ನಿತ್ಯಾನಂದ ಪೈ ಉದ್ಘಾಟಿಸಿದರು. ವಿಶ್ವದ ಶಾಂತಿಗೆ ಆರೋಗ್ಯಕ್ಕೆ ಯೋಗವೊಂದು ರಾಮಬಾಣವೆನಿಸಿದೆ ಎಂದರು. ಹಿರಿಯ ಶಿಕ್ಷಕ ಆರ್. ನಾರಾಯಣ ಶೆಣೈ ಮಹತ್ವವನ್ನು ತಿಳಿಸಿದರು. ಶಿಕ್ಷಕ ಗಣೇಶ್ ಜಾಲ್ಸೂರು, ಶಾರೀರಿಕ ಶಿಕ್ಷಣ ಶಿಕ್ಷಕ ಸಂಜಯ ಕುಮಾರ ಮೊದಲಾದವರು ಇದ್ದರು.
ಮಂಜುನಾಥ ಪೈ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಿಶ್ವಯೋಗ ದಿನಾಚರಣೆಯಲ್ಲಿ ಅಂತರರಾಷ್ಟ್ರೀಯ ಯೋಗ ಪಟು ನಾಝಿಯಾ ಮಾರ್ಗದರ್ಶನ ನೀಡಿದರು. ಅವರು ಮಾತನಾಡಿ ಇಂದಿನ ಯುವಜನಾಂಗವು ನಿರಂತರ ಯೋಗವನ್ನು ಅಭ್ಯಸಿಸಿದರೆ ಯಶಸ್ಸನ್ನು ತಮ್ಮದಾಗಿಸಿಕೊಳ್ಳಲು ಸಾಧ್ಯ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಶ್ರೀವರ್ಮ ಅಜ್ರಿ ಎಂ, ಐ.ಕ್ಯೂ.ಎ.ಸಿ ಸಂಚಾಲಕ ಡಾ.ಕಿರಣ್ ಎಂ., ಸೌಮ್ಯಾ ಎಚ್ ಕೆ., ಭಾಗ್ಯಲಕ್ಷ್ಮಿ ಹಾಗೂ ಗ್ರಂಥಪಾಲಕ ವೆಂಕಟೇಶ್ ನಾಯಕ್, ಯುವ ರೆಡ್ಕ್ರಾಸ್ನ ಸದಸ್ಯ ಪ್ರೊ. ಮೈತ್ರಿ ಬಿ, ಕ್ರೀಡಾ ಸಂಚಾಲಕ ಪ್ರೊ. ಮಂಜುನಾಥ ಬಿ, ವಿದ್ಯಾರ್ಥಿನಿ ಶ್ರೀಮಾಲಾ ಇದ್ದರು.
ಇಲ್ಲಿನ ಕ್ರೈಸ್ಟ್ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ರಾಜ್ಯಮಟ್ಟದ ಯೋಗ ತರಬೇತುದಾರ ಸಂಜಯ್ ಕುಮಾರ್ ಮಾತನಾಡಿ ‘ಯೋಗವು ಮನುಷ್ಯನನ್ನು ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಸದೃಢನನ್ನಾಗಿಸುತ್ತದೆ’ ಎಂದರು. ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ಮೇರಿಯನ್ ಡಿಸೋಜ, ಪದವಿ ಪೂರ್ವ ವಿಭಾಗದ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಕಾಮತ್, ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ಡೊಮಿನಿಕ್ ಅಂದ್ರಾದೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್ ಮತ್ತಿತರರು ಇದ್ದರು.
ಕಾರ್ಕಳ ಎಸ್.ವಿ.ಟಿ ಸಭಾಂಗಣದಲ್ಲಿ ನಿರಂತ ಯೋಗ ಶಿಕ್ಷಣ ಕೇಂದ್ರ, ರಾಜ್ಯ ಯೋಗಾಸನ ಕ್ರೀಡಾ ಸಂಸ್ಥೆ ಮತ್ತು ಎಸ್ಎಸ್ಪಿವೈಎಸ್ಎಸ್ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಕಾರ್ಯಕ್ರಮ ಉದ್ಘಾಟಿಸಿದ ಎ.ನಿತ್ಯಾನಂದ ಪೈ ಮಾತನಾಡಿ
ಯೋಗ ಜೀವನದ ಅವಿಭಾಜ್ಯ ಅಂಗವಾದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಯೋಗ ಜೀವನದ ಪ್ರಗತಿಗೆ ದಾರಿ ದೀಪ ಎಂದರು. ಯೋಗ ಶಿಕ್ಷಕ
ಸಂಜಯ ಕುಮಾರ್ ಯೋಗ ತರಗತಿಯನ್ನು ನಡೆಸಿಕೊಟ್ಟರು. ಯೋಗ ಶಿಕ್ಷಕ ಅಶೋಕ ಕುಮಾರ್, ಶಿಕ್ಷಕಿ ರವಿಕಲಾ.ವಿ.ಹೆಗ್ಡೆ, ನಯನಾ ಪ್ರಭು, ದಿವ್ಯಾ ಡಿ. ಶೆಣೈ, ಶ್ವೇತಾ ವಿ.ಶೆಣೈ ಮತ್ತು ವಿನಾಯಕ ಕುಡ್ವ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.