ಉಡುಪಿ: ಶಿಕ್ಷಣ ಕೇವಲ ಮಾಹಿತಿ ಸಂಗ್ರಹವಲ್ಲ. ಅಂಕ ಗಳಿಕೆಯೊಂದೇ ಶಿಕ್ಷಣದ ಗುರಿಯಲ್ಲ. ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಮೌಲ್ಯ, ಕೌಶಲಗಳನ್ನು ಬೆಳೆಸಬೇಕು. ಈ ನಿಟ್ಟಿನಲ್ಲಿ ನಮ್ಮ ಅಧ್ಯಯನ ಸಾಗಬೇಕಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಸುಬ್ರಹ್ಮಣ್ಯ ಯಡಪಡಿತ್ತಾಯ ಇಲ್ಲಿ ತಿಳಿಸಿದರು.
ಇತ್ತೀಚೆಗೆ ನಡೆದ ಪೂರ್ಣಪ್ರಜ್ಞ ಪದವಿ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.ಇತ್ತೀಚಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳಲ್ಲಿ ಅಂಕ ಗಳಿಕೆ ಮಾತ್ರವೇ ಮುಖ್ಯವಾಗಿದ್ದು ಮೌಲ್ಯ, ಕೌಶಲಗಳ ಕಡೆಗೆ ಲಕ್ಷ್ಯ ಹರಿಯುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಆ ಬಗ್ಗೆ ಕೂಡ ಹೆಚ್ಚಿನ ಗಮನ ಹರಿಸಬೇಕು ಎಂದರು.
ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರೊ.ರಾಜ್ಮೋಹನ್, ಪ್ರೊ.ಬಿ.ಎಂ. ಹೆಗಡೆ ಮತ್ತು ಅಧೀಕ್ಷಕ ಗೋಪಾಲಕೃಷ್ಣ ಭಟ್ಟ ಅವರನ್ನು ಸನ್ಮಾನಿಸಲಾಯಿತು. ಅದಮಾರು ಮಠ ಶಿಕ್ಷಣ ಮಂಡಳಿ ಅಧ್ಯಕ್ಷ ವಿಶ್ವಪ್ರಿಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಕೆ. ಸದಾಶಿವ ರಾವ್, ವಿದ್ಯಾರ್ಥಿ ಪ್ರತಿನಿಧಿಗಳಾದ ಸುಪರ್ಣಾ, ಅಲ್ಫಿಯಾ ಬಾನು, ಕ್ಯಾಸ್ಟಲಿನೋ, ಆಡಳಿತ ಸಮಿತಿ ಕಾರ್ಯದರ್ಶಿ ಡಾ.ಜಿ.ಎಸ್. ಚಂದ್ರಶೇಖರ್ ಇದ್ದರು.