ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಿ ನದಿ ನೀರು ಹರಿಸುವ ಖಾಸಗಿ ಪ್ರಸ್ತಾವ: ‘ಮೊದಲು ನಮಗೆ, ನಂತರ ಬೇರೆಯವರಿಗೆ’

ಮಲಪ್ರಭಾ, ಘಟಪ್ರಭಾ ನದಿಗಳಿಗೆ ನೀರು ಹರಿಸುವ ಪ್ರಸ್ತಾವಕ್ಕೆ ಭಾರಿ ವಿರೋಧ
Last Updated 7 ಮೇ 2019, 19:45 IST
ಅಕ್ಷರ ಗಾತ್ರ

ಕಾರವಾರ:ಕಾಳಿನದಿಯನ್ನು ಘಟಪ್ರಭಾ ಮತ್ತು ಮಲಪ್ರಭಾ ನದಿಗೆ ಜೋಡಿಸಲು ನಿರಾಣಿ ಫೌಂಡೇಷನ್ ಸಿದ್ಧಪಡಿಸಿರುವ ಪ್ರಾಥಮಿಕ ವರದಿಗೆ ಜಿಲ್ಲೆಯಲ್ಲಿ ಮತ್ತಷ್ಟು ವಿರೋಧ ವ್ಯಕ್ತವಾಗುತ್ತಿದೆ.ಒಂದುವೇಳೆ ಸರ್ಕಾರವು ಯೋಜನೆ ಜಾರಿಗೆ ಮುಂದಾದರೆ ಹೋರಾಟ ನಡೆಸುವುದಾಗಿ ಸಂಘಟನೆಗಳು, ಪರಿಸರಪ್ರಿಯರು ಎಚ್ಚರಿಕೆ ನೀಡಿದ್ದಾರೆ.

ನಿರಾಣಿ ಫೌಂಡೇಷನ್‌ನ ನಿರ್ದೇಶಕ ಸಂಗಮೇಶ ನಿರಾಣಿ ನೇತೃತ್ವದಲ್ಲಿ ಸಿದ್ಧಪಡಿಸಲಾಗಿರುವ ‘ಅಮೃತಧಾರೆ’ ಯೋಜನೆಯ ವರದಿಯನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆಈಗಾಗಲೇ ನೀಡಲಾಗಿದೆ. ಸುಮಾರು ₹ 5,400 ಕೋಟಿ ವೆಚ್ಚದಲ್ಲಿ ಇದನ್ನು ಅನುಷ್ಠಾನ ಮಾಡಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. ಆದರೆ, ಈ ಯೋಜನೆಯನ್ನು ಹೇಗೆ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂಬುದು ಪರಿಸರ ಬರಹಗಾರ ಶಿವಾನಂದ ಕಳವೆ ಅವರ ಅನಿಸಿಕೆ.

‘ಕಾಳಿ ನದಿಗೆ ಐದು ಅಣೆಕಟ್ಟೆಗಳಿದ್ದು, ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಕೈಗಾ ಅಣು ವಿದ್ಯುತ್ ಸ್ಥಾವರವೂ ಇದನ್ನೇ ಅವಲಂಬಿಸಿದೆ. ಕಾಳಿ ಹುಲಿ ಸಂರಕ್ಷಿತ ವಲಯ, ವನ್ಯಜೀವಿ ವಲಯವೂ ಇಲ್ಲಿವೆ. 184 ಕಿ.ಮೀ ಉದ್ದದ ಕಾಳಿ ನದಿಯು ಈಗ ಅಡೆತಡೆಯಿಲ್ಲದೇಕೇವಲ 40 ಕಿ.ಮೀ ಹರಿಯುತ್ತಿದೆ. ಹೀಗಿರುವಾಗ ಎಲ್ಲಿಂದ ನೀರು ತೆಗೆದುಕೊಂಡು ಹೋಗುತ್ತಾರೆ’ ಎಂದು ಅವರು ಪ್ರಶ್ನಿಸುತ್ತಾರೆ.

‘ಕಾಳಿ ನದಿಯ ಪಕ್ಕದಲ್ಲೇ ಇರುವಜೊಯಿಡಾ ತಾಲ್ಲೂಕಿನಲ್ಲಿ ಕುಣಬಿಜನಾಂಗದ 40 ಸಾವಿರ ಜನರುಇಂದಿಗೂ ತಮ್ಮ ದೈನಂದಿನ ಬದುಕಿಗೆ ಹೋರಾಡುತ್ತಿದ್ದಾರೆ. ಅವರ ಜಮೀನು,ವನ್ಯಜೀವಿ ವಲಯದಲ್ಲೇ ಪೈಪ್‌ಲೈನ್ ಸಾಗಬೇಕು. ದೂರದ ನದಿಯ ನೀರನ್ನು ನೋಡಿಕೊಂಡುಈ ರೀತಿಏನೇನೋ ಮಾತುಗಳನ್ನಾಡುವುದು ಹೊಸದಲ್ಲ. ನೀರಿನ ನಿಜವಾದ ಸತ್ಯಗಳನ್ನು ಅರ್ಥ ಮಾಡಿಕೊಳ್ಳದವರಿಂದ ಇಂಥ ಮಾತುಗಳು ಬರುತ್ತವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಇತ್ತ ಕರಾವಳಿಯಲ್ಲೇ ನೀರಿನ ಸಮಸ್ಯೆಯಿದೆ. ಮಲ್ಲಾಪುರದ ಸಮೀಪದವರೆಗೂ ಜಲಮೂಲಗಳಲ್ಲಿ ಉಪ್ಪು ನೀರು ಬರುತ್ತದೆ. ನೀರಿನ ಸಮರ್ಥ ಬಳಕೆಯೇ ಸಮಸ್ಯೆಗೆ ಪರಿಹಾರ. ಹೆಚ್ಚು ನೀರು ಬಯಸುವ ಬೆಳೆಗಳನ್ನು ಬೆಳೆಯುವ ಬದಲು ಮಿಶ್ರ ಬೆಳೆಗಳತ್ತ ಗಮನಹರಿಸಬೇಕು. ಅವರು ತಮ್ಮ ಹತ್ತಿರದ ಕೆರೆಗಳನ್ನು ಅಭಿವೃದ್ಧಿ ಮಾಡಲಿ’ ಎಂದುಸಲಹೆ ನೀಡಿದ್ದಾರೆ.

ಜೊಯಿಡಾದ ಕಾಳಿ ಬ್ರಿಗೇಡ್‌ನ ಸಂಚಾಲಕರವಿ ರೇಡ್ಕರ್ ಕೂಡ ಇದೊಂದು ಅವೈಜ್ಞಾನಿಕ ಯೋಜನೆ ಎನ್ನುತ್ತಾರೆ.

‘ಕಾಳಿ ನದಿಯ ನೀರನ್ನು ಬೇರೆಡೆಗೆ ಹರಿಸಿದರೆ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹಲವು ಬೃಹತ್ ಯೋಜನೆಗಳನ್ನು ತಂದು ಇಡೀ ತಾಲ್ಲೂಕನ್ನೇ ಲೂಟಿ ಮಾಡಿದ್ದಾಯ್ತು. ಹಳಿಯಾಳ ಬಿಟ್ಟರೆ ದಾಂಡೇಲಿ, ರಾಮನಗರ, ಜೊಯಿಡಾ ಭಾಗದ ಹಳ್ಳಿಗಳಲ್ಲಿ ನೀರಿಲ್ಲ. ಬೇರೆ ಜಿಲ್ಲೆಗಳಿಗೆ ಕೊಡುವ ಮೊದಲು ನಮ್ಮವರಿಗೇ ನೀರುಕೊಡಲಿ. ಒಂದುವೇಳೆ, ಯೋಜನೆಯನ್ನು ಸರ್ಕಾರ ಮುಂದುವರಿಸಲು ಮುಂದಾದರೆ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಒಂದು ವಾರದಲ್ಲಿ ಸಂಪೂರ್ಣ ವರದಿ’:‘ಕಾಳಿ ನದಿಯ ಸಂಪೂರ್ಣ ನೀರನ್ನು ನಾವು ಕೇಳುತ್ತಿಲ್ಲ. ಮಳೆಗಾಲದಲ್ಲಿ ತುಂಬಿ ಹರಿಯುವ ಸಂದರ್ಭದಲ್ಲಿ, ಬೇಸಿಗೆಯಲ್ಲಿ ವಿದ್ಯುತ್ ಉತ್ಪಾದನೆ ಮಾಡಿ ಹೊರಬಿಟ್ಟ ನೀರನ್ನು ಕುಡಿಯಲು ಮತ್ತುಕೆರೆ ತುಂಬಲು ಕೇಳುತ್ತಿದ್ದೇವೆ’ ಎಂದು ಸಂಗಮೇಶ ನಿರಾಣಿ ಪ್ರತಿಪಾದಿಸಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಇನ್ನೊಂದು ವಾರದಲ್ಲಿ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಧಾರವಾಡ ಮತ್ತು ಗದಗ ಜಿಲ್ಲೆಗಳು, ಭಾಗಶಃ ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಬೇಕಿದೆ’ ಎಂದರು.

‘20–25 ಟಿಎಂಸಿ ಅಡಿ ನೀರು ಸಾಗಿಸಲಾಗುತ್ತದೆ. ದಾಂಡೇಲಿಯಿಂದ ನೀರನ್ನು26 ಮೆಗಾವಾಟ್ ವಿದ್ಯುತ್ ಬಳಸಿ ಅಳ್ನಾವರಕ್ಕೆಸಾಗಿಸಬೇಕು. ಅಲ್ಲಿನ ಜಲಾಗಾರದಿಂದ ಸುಮಾರು 70 ಮೆಗಾವಾಟ್ ವಿದ್ಯುತ್ ಬಳಸಿ ವಿವಿಧೆಡೆಗೆ ಪೂರೈಸಲಾಗುತ್ತದೆ’ ಎಂದು ತಮ್ಮ ಯೋಜನೆಯನ್ನು ವಿವರಿಸಿದರು.

ಸೂಪಾ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ (ಏ.30ರಂದು)

ಗರಿಷ್ಠ ಮಟ್ಟ: 564 ಮೀಟರ್, 147 ಟಿಎಂಸಿ ಅಡಿ

ವರ್ಷ; ಮೀಟರ್‌ಗಳಲ್ಲಿ; ಟಿಎಂಸಿ ಅಡಿ

2015; 538.76; 61.26

2016; 527.07; 35.0

2017; 534.08; 49.85

2018; 536.20; 54.93

2019; 537.20; 57.38

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT