ಕಾರವಾರ: ಸರ್ಕಾರಿ ಸಾರಿಗೆ ಸಂಸ್ಥೆಯ ನೌಕರರು ನಡೆಸುತ್ತಿರುವ ಮುಷ್ಕರದ ಎರಡನೇ ದಿನವಾದ ಗುರುವಾರವೂ ಪ್ರಯಾಣಿಕರು ಪರದಾಡಿದರು. ಪ್ರಯಾಣಕ್ಕೆ ಬಸ್ಗಳು ಸಿಗದೇ ಖಾಸಗಿ ವಾಹನಗಳಲ್ಲಿ ಅನಿವಾರ್ಯವಾಗಿ ಪ್ರಯಾಣಿಸಿದರು.
ಇಡೀ ದಿನದಲ್ಲಿ ಕಾರವಾರ– ಅಂಕೋಲಾ ನಡುವೆ ಕೇವಲ ಒಂದು ಬಸ್ ಸಂಚರಿಸಿತು. ಪೊಲೀಸ್ ಭದ್ರತೆಯಲ್ಲಿ ಸಾಗಿ, ಪುನಃ ಕಾರವಾರಕ್ಕೆ ಬಂದು ಡಿಪೊದಲ್ಲಿ ನಿಂತಿತು ಎಂದು ಕಾರವಾರ ಘಟಕ ವ್ಯವಸ್ಥಾಪಕ ರವೀಂದ್ರ ಪಾತ್ರಪೇಕರ್ ತಿಳಿಸಿದರು.
ಉಳಿದಂತೆ ಎಲ್ಲಿಗೂ ಬಸ್ ಸಂಚಾರ ಇರಲಿಲ್ಲ. ಗೋವಾದ ಪಣಜಿ, ಮಡಗಾಂವ್ ಮುಂತಾದ ನಗರಗಳಿಂದ ಕಾರವಾರಕ್ಕೆ ಆ ರಾಜ್ಯದ ಸರ್ಕಾರಿ ಬಸ್ಗಳ ಸಂಚಾರ ಎಂದಿನಂತೆ ಇತ್ತು.
ಈ ನಡುವೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕ್ವಾರ್ಟರ್ಸ್ ಸೌಲಭ್ಯ ಪಡೆದು, ಕರ್ತವ್ಯಕ್ಕೆ ಹಾಜರಾಗದ ಸಾರಿಗೆ ಸಂಸ್ಥೆಯ ನೌಕರರಿಗೆ ತೆರವು ಮಾಡುವಂತೆ ನೋಟಿಸ್ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಕುಮಟಾದಲ್ಲಿ ಮಾತ್ರ ಕ್ವಾರ್ಟರ್ಸ್ಗಳಿವೆ.
‘ಕರ್ತವ್ಯಕ್ಕೆ ಗೈರು ಹಾಜರಾದ ಸಿಬ್ಬಂದಿಗೆ ನೋಟಿಸ್ ನೀಡುವಂತೆ ಸೂಚನೆ ಬಂದಿಲ್ಲ. ನಮ್ಮ ಘಟಕದಿಂದ ಯಾರಿಗೂ ನೋಟಿಸ್ ಕೊಟ್ಟಿಲ್ಲ. ಕ್ವಾರ್ಟರ್ಸ್ಗಳನ್ನು ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಯಿಂದ ಹಂಚಿಕೆ ಮಾಡಲಾಗುತ್ತದೆ. ಹಾಗಾಗಿ ಎಷ್ಟು ಸಿಬ್ಬಂದಿ ಇದ್ದಾರೆ ಎಂಬ ಮಾಹಿತಿ ಲಭ್ಯವಿಲ್ಲ’ ಎಂದು ಕುಮಟಾ ಘಟಕ ವ್ಯವಸ್ಥಾಪಕಿ ಸೌಮ್ಯಾ ನಾಯಕ ತಿಳಿಸಿದರು.