ಭಟ್ಕಳ: ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಕಡ್ಡಾಯವಲ್ಲ ಎಂಬ ಹೈಕೋರ್ಟ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿ, ಭಟ್ಕಳದ ತಂಝೀಂ ಸಂಸ್ಥೆಯಿಂದ ನೀಡಿದ ಸ್ವಯಂಪ್ರೇರಿತ ಬಂದ್ ಕರೆಗೆ ಬುಧವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಸ್ಲಿಂ ವರ್ತಕರು ತಮ್ಮ ವಹಿವಾಟು ಸ್ಥಗಿತಗೊಳಿಸಿ ಬೆಂಬಲ ಸೂಚಿಸಿದ್ದಾರೆ.
ಪಟ್ಟಣದ ಪ್ರಮುಖ ವ್ಯಾಪಾರ ವಹಿವಾಟು ಪ್ರದೇಶವಾದ ಬರ್ಮಾ ಬಝಾರ್, ಮುಖ್ಯರಸ್ತೆ, ನವಾಯತ್ ಕಾಲೊನಿ ಹಾಗೂ ಮದೀನಾ ಕಾಲೊನಿ ಪ್ರದೇಶಗಳಲ್ಲಿ ಬಂದ್ಗೆ ಬೆಂಬಲ ಸೂಚಿಸಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ್ದಾರೆ. ಮುಸ್ಲಿಂ ಆಟೊ ಚಾಲಕರು ತಮ್ಮ ದಿನನಿತ್ಯದ ಕೆಲಸದಲ್ಲಿ ನಿರತರಾಗಿದ್ದಾರೆ.
ಬಂದ್ನಿಂದ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಪಟ್ಟಣದಾದ್ಯಂತ ಗಸ್ತು ತಿರುಗುತ್ತಿದ್ದಾರೆ. ನಿಷೇಧಾಜ್ಞೆ ಜಾರಿಯಲ್ಲಿರುವ ಕಾರಣ ಜನ ಗುಂಪುಗೂಡದಂತೆ ಎಚ್ಚರಿಕೆ ನೀಡುತ್ತಿದ್ದಾರೆ.
ಕರ್ಪ್ಯೂ ಉಲ್ಲಂಘನೆ ಕೇಸ್ ದಾಖಲು:ನಿಷೇಧಾಜ್ಞೆ ಉಲ್ಲಂಘಿಸಿ ಪಟ್ಟಣದ ಮಾರಿಕಟ್ಟೆ ಬಳಿ ಮಂಗಳವಾರ ಗುಂಪೂಗೂಡಿದ್ದವರ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.