ಶಿರಸಿ: ತಾಲ್ಲೂಕಿನ ಜಾನ್ಮನೆ ಅರಣ್ಯ ವಲಯ ವ್ಯಾಪ್ತಿಯ ಶಿರಗುಣಿ ಗ್ರಾಮದಲ್ಲಿ ತಂತಿಬೇಲಿಗೆ ಸಿಲುಕಿಕೊಂಡಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ರಕ್ಷಣೆ ಮಾಡಿದ್ದಾರೆ.
ಸುಮಾರು ಎರಡೂವರೆ ವರ್ಷದ ಗಂಡು ಚಿರತೆ ಗ್ರಾಮದ ಹೊರ ವಲಯದಲ್ಲಿರುವ ಅರಣ್ಯದಂಚಿನ ಪ್ರದೇಶದಲ್ಲಿ ಬೇಲಿಗೆ ಸಿಲುಕಿ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ್ದ ಸ್ಥಳೀಯರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದರು.
ಸುಮಾರು ಐದು ತಾಸಿಗೂ ಹೆಚ್ಚು ಕಾಲ ಜೀವನ್ಮರಣದ ಸ್ಥಿತಿಯಲ್ಲಿ ಒದ್ದಾಡುತ್ತಿದ್ದ ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿಯಲು ಶಿವಮೊಗ್ಗದ ವನ್ಯಜೀವಿ ವಿಭಾಗದ ಅರಿವಳಿಕೆ ತಜ್ಞರನ್ನು ಕರೆಯಿಸಲಾಯಿತು. ಅರವಳಿಕೆ ಚುಚ್ಚುಮದ್ದು ನೀಡಿ ಚಿರತೆಯನ್ನು ಸುರಕ್ಷಿತವಾಗಿ ಬೇಲಿಯಿಂದ ಬೇರ್ಪಡಿಸಲಾಯಿತು.
‘ಚಿರತೆ ಪ್ರಾಣಾಪಾಯದಿಂದ ಪಾರಾಗಿದೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಸಲಹೆ ಪಡೆದು ಚಿರತೆಯನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಗುತ್ತದೆ’ ಎಂದು ಶಿರಸಿ ವಿಭಗದ ಡಿಸಿಎಫ್ ಎಸ್.ಜಿ.ಹೆಗಡೆ ತಿಳಿಸಿದ್ದಾರೆ.