ಶಿರಸಿ: ನಗರದಲ್ಲಿ ವೀಳ್ಯದೆಲೆ, ತೆಂಗಿನಕಾಯಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ವ್ಯಾಪಾರಿಯೊಬ್ಬರು ಕೋವಿಡ್ 19 ಲಾಕ್ಡೌನ್ ನಂತರ ಹಳ್ಳಿಗಳಲ್ಲಿ ತರಕಾರಿ ಪೂರೈಕೆದಾರರಾಗಿದ್ದಾರೆ. ಲಾಕ್ಡೌನ್ನಲ್ಲಿ ಎಲ್ಲರೂ ಕೆಲಸವಿಲ್ಲದೇ ಕುಳಿತಿದ್ದರೆ, ಇವರು ಬಿಡುವಿಲ್ಲದೇ ಕೆಲಸ ಮಾಡುತ್ತಿದ್ದಾರೆ.
ತಾಲ್ಲೂಕಿನ ಆಲ್ಮನೆಯ ಮಹಾಬಲೇಶ್ವರ ಗೌಡ ಅವರು, ಶಿರಸಿಯ ಬಿಡಕಿಬೈಲಿನಲ್ಲಿ ಅಷ್ಟಿಷ್ಟು ವೀಳ್ಯದೆಲೆ, ತೆಂಗಿನಕಾಯಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಮಾರಿಕಾಂಬಾ ಜಾತ್ರೆಯ ನಂತರ ಬಿಡಕಿಬೈಲಿನಲ್ಲಿ ಅಂಗಡಿ ಹಂಚಿಕೆಯಾಗಿಲ್ಲ. ಅದೇ ಹೊತ್ತಿಗೆ ಲಾಕ್ಡೌನ್ ಘೋಷಣೆಯಾಗಿದ್ದರಿಂದ ವ್ಯಾಪಾರವೂ ಬಂದಾಯಿತು. ದುಡಿಮೆ ಇಲ್ಲವೆಂದು ಯೋಚಿಸುತ್ತಿದ್ದ ಗೌಡರಿಗೆ ಹೊಳೆದಿದ್ದು ತರಕಾರಿ ವ್ಯಾಪಾರ.
ಕಾನಗೋಡ ಗ್ರಾಮ ಪಂಚಾಯ್ತಿಯಿಂದ ಅವರು ಅನುಮತಿ ಪಡೆದು, ಕಾನಗೋಡ, ಕಬ್ನಳ್ಳಿ, ಗೋಳಗೋಡ, ಕಕ್ಕೋಡ, ಅಂಬ್ಲಿಹೊಂಡ ಮೊದಲಾದ ಹಳ್ಳಿಗಳಿಗೆ ತರಕಾರಿ ಪೂರೈಕೆ ಮಾಡುತ್ತಿದ್ದಾರೆ.
‘ತರಕಾರಿ ವ್ಯಾಪಾರ ಹೊಸ ಅನುಭವ ನೀಡಿದೆ. ಎರಡು ತಿಂಗಳುಗಳಿಂದ ಪ್ರತಿ ಮನೆ ಬಾಗಿಲಿಗೆ ಹೋಗುವುದರಿಂದ, ಸ್ಥಳೀಯರು ಇನ್ನು ಮುಂದೆ ಕಾಯಂ ಆಗಿ ತರಕಾರಿ ತಂದು ಕೊಡುವಂತೆ ಒತ್ತಾಯಿಸುತ್ತಿದ್ದಾರೆ. ಮನೆಯೆದುರೇ ಬೇಕಾದ ತರಕಾರಿ ಆರಿಸಿಕೊಳ್ಳುವ ಅವಕಾಶ ಸಿಕ್ಕಿದ್ದರಿಂದ ಮಹಿಳೆಯರೂ ಖುಷಿಯಾಗಿದ್ದಾರೆ. ಈ ಉದ್ಯೋಗವನ್ನೇ ಮುಂದುವರಿಸುವ ಯೋಚನೆಯಲ್ಲಿದ್ದೇನೆ’ ಎನ್ನುತ್ತಾರೆ ಮಹಾಬಲೇಶ್ವರ ಗೌಡ.
‘ಪೇಟೆಗೆ ತರಕಾರಿ ತರಲು ಅರ್ಧ ದಿನ ವ್ಯಯವಾಗುತ್ತಿತ್ತು. ಈಗ ತರಕಾರಿಗಾಗಿ ನಗರಕ್ಕೆ ಹೋಗಬೇಕಾಗಿಲ್ಲ. ಊರಿನಲ್ಲೇ ತಾಜಾ ತರಕಾರಿ, ಕಡಿಮೆ ದರಕ್ಕೆ ಸಿಗುತ್ತದೆ’ ಎನ್ನುತ್ತಾರೆ ಆಲ್ಮನೆಯ ವಿಮಲಾ ಹೆಗಡೆ.