ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಟ್ಕಳ| ‘ಅನ್ನದ ಬಟ್ಟಲು’ ತುಂಬ ಕಲ್ಲು, ಮಣ್ಣು

ಭಟ್ಕಳ: ದಾಖಲೆ ಪ್ರಮಾಣದ ಮಳೆಯಲ್ಲಿ ಸಂಪೂರ್ಣವಾಗಿ ನಾಶವಾದ ಕೃಷಿ ಭೂಮಿ
Last Updated 8 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಭಟ್ಕಳ: ತಾಲ್ಲೂಕಿನಲ್ಲಿ ಆ.2ರಂದು ಸುರಿದ ಭಾರಿ ಮಳೆಯಿಂದ ಉಂಟಾದ ಅತಿವೃಷ್ಟಿಯು ರೈತರಿಗೆ ಶಾಪವಾಗಿ ಪರಿಣಮಿಸಿದೆ. ಭಾರಿ ಮಳೆಗೆ ಹಳ್ಳಕೊಳ್ಳಗಳು ಉಕ್ಕೇರಿ ಬಂದ ಪರಿಣಾಮ ಕೃಷಿ ಭೂಮಿ, ತೋಟಗಳು ಸಂಪೂರ್ಣ ನಾಶವಾಗಿವೆ.

ಜುಲೈ ಮೊದಲ ವಾರದಲ್ಲಿ ಸುರಿದ ಜೋರಾದ ಮಳೆಯು, ಶಿರಾಲಿ, ಮಣ್ಕುಳಿ, ಮುಂಡಳ್ಳಿ ಹಾಗೂ ಬೆಂಗ್ರೆ ಭಾಗಗಳಲ್ಲಿ ಸಾಕಷ್ಟು ಹಾನಿ ಸೃಷ್ಟಿಸಿದೆ. ರೈತರು ಬಿತ್ತನೆ ಮಾಡಿದ ಸಸಿಗೆ ಹಾನಿ ಮಾಡಿತ್ತು. ಅನೇಕ ಕಡೆ ಭತ್ತದ ಸಸಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಹಾನಿಯಾಗಿತ್ತು. ಅದನ್ನು ರೈತರು ಸುಧಾರಿಸಿಕೊಳ್ಳುವ ಸಮಯದಲ್ಲೇ ಆ.2ರಂದು ಸುರಿದ ರಣಭೀಕರ ಮಳೆಯು, ರೈತರ ಗಾಯದ ಮೇಲೆ ಬರೆ ಎಳೆದಿದೆ.

ಅನಿರೀಕ್ಷಿತ ನೆರೆಯಿಂದ ಉಕ್ಕಿಬಂದ ನೀರು ಮಲ್ಲಿಗೆ ತೋಟ, ಬಾಳೆತೋಟ, ಭತ್ತದ ಕೃಷಿ ಭೂಮಿಯಲ್ಲಿ ನುಗ್ಗಿದೆ. ಇದರ ಪರಿಣಾಮ ನೀರು ನಿಂತ ಮೇಲೆ ಮಣ್ಣಿನ ರಾಶಿ ನೆಲೆ ನಿಂತು ಬೆಳೆಗಳು ಸಂಪೂರ್ಣ ನಾಶವಾಗಿವೆ. ಗದ್ದೆಗಳಿಗೆ ಹಾಗೂ ತೋಟಗಳಿಗೆ ನುಗ್ಗಿದ ಮಣ್ಣು ಹಾಗೂ ಸಣ್ಣಸಣ್ಣ ಕಲ್ಲುಗಳನ್ನು ತೆರವು ಮಾಡುವುದೇ ರೈತರಿಗೆ ಸವಾಲಾಗಿ ಪರಿಣಮಿಸಿದೆ. ಗ್ರಾಮೀಣ ಭಾಗದಲ್ಲಿ ಗುಡ್ಡದ ಮಣ್ಣು ಕುಸಿದು ಅಡಿಕೆ ಹಾಗೂ ತೆಂಗಿನ ತೋಟಗಳಿಗೂ ಹಾನಿಯಾಗಿದೆ.

ಪ್ರಗತಿ ಕಾಣದ ಸಮೀಕ್ಷೆ: ಮಳೆಯಿಂದ ಹಾನಿಯಾದ ಕೃಷಿ ಭೂಮಿ ಸಮೀಕ್ಷೆ ಮಾಡಲು ಕೃಷಿ ಹಾಗೂ ತೋಟಗಾರಿಕೆ ಎರಡೂ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ರೈತರ ದೂರಿನ ಮೇರೆಗೆ ಸ್ಥಳಕ್ಕೆ ತೆರಳಿ ಸಮೀಕ್ಷೆ ಕಾರ್ಯ ನಡೆಸಲಾಗುತ್ತಿದೆ ಎನ್ನುವುದು ರೈತರ ಆರೋಪವಾಗಿದೆ.

ಗ್ರಾಮೀಣ ಭಾಗದಲ್ಲಿ ತೀವ್ರ ಹಾನಿಯಾಗಿ ಏಳು ದಿನಗಳು ಕಳೆದರೂ ಸಮೀಕ್ಷಾ ತಂಡ ಸ್ಥಳಕ್ಕೆ ಬರಲಿಲ್ಲ ಎನ್ನುವುದು ಹಲವು ರೈತರ ಆಪಾದನೆಯಾಗಿದೆ. ತೋಟಗಾರಿಕೆ ಇಲಾಖೆಯಿಂದ 30 ಹೆಕ್ಟೇರ್ ಹಾನಿ ಹಾಗೂ ಕೃಷಿ ಇಲಾಖೆಯಿಂದ 15.5 ಹೆಕ್ಟೇರ್ ಕೃಷಿ ಭೂಮಿ ಹಾನಿಯ ಬಗ್ಗೆ ಇಲ್ಲಿಯವರೆಗೆ ಸಮೀಕ್ಷೆ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಪರಿಹಾರಕ್ಕೆ ಆಗ್ರಹ: ‘ತಾಲ್ಲೂಕಿನಲ್ಲಿ ಉಂಟಾದ ನೆರೆಹಾವಳಿಯಿಂದ ಹಾನಿಗೀಡಾದ ಕೃಷಿ ಹಾಗೂ ತೋಟಗಳಿಗೆ ಸರ್ಕಾರ ನೀಡುವ ಅತ್ಯಲ್ಪ ಪರಿಹಾರ ಮೊತ್ತ ಎಲ್ಲಿಗೂ ಸಾಕಾಗುವುದಿಲ್ಲ. ಕಳೆದ ವಾರ ಸುರಿದ ಮಳೆಗೆ ಗುಡ್ಡ ಮೇಲಿಂದ ಮಣ್ಣು ಕುಸಿದು ಬಿದ್ದು ಅಂದಾಜು 20 ಎಕರೆ ಕೃಷಿ ತೋಟಗಳಿಗೆ ಹಾನಿಯಾಗಿದೆ. ಸರ್ಕಾರವು ನಿಗದಿ ಪಡಿಸಿದ ಪರಿಹಾರ ಮೊತ್ತವು ಮಣ್ಣು ಎತ್ತಲೂ ಸಾಕಾಗದು. ಸರ್ಕಾರವು ಪರಿಹಾರ ಮೊತ್ತ ಹೆಚ್ಚಿಸಲು ಕ್ರಮ ವಹಿಸಬೇಕು’ ಎಂದು ಬೆಟ್ಕೂರು ನಿವಾಸಿ ಗಜಾನನ ಭಟ್ ಒತ್ತಾಯಿಸುತ್ತಾರೆ.

ಗುಂಟೆಗೆ ₹ 136 ಪರಿಹಾರ!

ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆ ಮಳೆಗೆ ಆಹುತಿಯಾದರೂ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ರೈತರು ಮುಂದೆ ಬರುತ್ತಿಲ್ಲ. ಭಟ್ಕಳ ತಾಲ್ಲೂಕಿನಲ್ಲಿ ಸಣ್ಣ ಹಿಡುವಳಿದಾರರು ಅಧಿಕ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ರೈತರು ಎಕರೆ ಜಾಗದ ಬದಲಾಗಿ ಗುಂಟೆ ಜಾಗವನ್ನು ಹೊಂದಿದ್ದಾರೆ. ಸರ್ಕಾರ ಪ್ರತಿ ಗುಂಟೆ ಕೃಷಿ ಭೂಮಿಗೆ ಘೋಷಣೆ ಮಾಡಿರುವ ಮೊತ್ತ ₹ 136 ರೂಪಾಯಿ. ಈ ಅತ್ಯಲ್ಪ ಪರಿಹಾರ ಮೊತ್ತ ದಾಖಲೆಗಳ ಹೊಂದಾಣಿಕೆಗೂ ಸಾಕಾಗುವುದಿಲ್ಲ ಎನ್ನುವುದು ರೈತರ ಅಳಲಾಗಿದೆ.

***

* ಕೃಷಿ ಹಾನಿಯನ್ನು ಖುದ್ದು ಪರಿಶೀಲಿಸಿದ್ದೇನೆ.‌ ಸಮೀಕ್ಷೆಯ ಸಂಪೂರ್ಣ ವರದಿ ಬಂದ ನಂತರ ಪರಿಹಾರದ ಮೊತ್ತ ಹೆಚ್ಚಿಸುವ ಬಗ್ಗೆ ಸಚಿವರು, ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು.

– ಸುನೀಲ‌ ನಾಯ್ಕ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT