ಶಿರಸಿ: ಇಲ್ಲಿನ ಮಾರಿಕಾಂಬಾ ಜಾತ್ರೆ ಸಂದರ್ಭದಲ್ಲಿ ಟೆಂಟ್ ಹಾಕಿರುವ ಐದು ನಾಟಕ ಕಂಪನಿಗಳು ಸರ್ಕಾರದ ನಿರ್ದೇಶನದಂತೆ ಪ್ರದರ್ಶನ ಸ್ಥಗಿತಗೊಳಿಸಿವೆ. ಟೆಂಟ್ ಬಿಚ್ಚಲು ಕೆಲಸಗಾರರಿಲ್ಲದೇ ಕಂಗಾಲಾಗಿರುವ ಕಂಪನಿ ಮಾಲೀಕರಿಗೆ, ಈಗ ನಗರಸಭೆ ನೀಡಿರುವ ನೋಟಿಸ್, ಇನ್ನಷ್ಟು ಕಂಗಾಲು ಮಾಡಿದೆ.
‘ಜಿಲ್ಲೆಯಲ್ಲಿ 144ನೇ ಸೆಕ್ಷನ್ ಜಾರಿಯಲ್ಲಿರುವ ಕಾರಣ ಈ ಹಿಂದೆ ನೀಡಿದ್ದ ನಿರಾಕ್ಷೇಪಣಾ ಪತ್ರವನ್ನು ವಾಪಸ್ ಪಡೆಯಲಾಗಿದೆ. ನೋಟಿಸ್ ತಲುಪಿದ ತಕ್ಷಣ ಟೆಂಟ್ ಅನ್ನು ಖಾಲಿಮಾಡಬೇಕು’ ಎಂದು ನಗರಸಭೆ ಮಾ.23ರಂದು ನೀಡಿರುವ ನೋಟಿಸ್ನಲ್ಲಿ ಹೇಳಿದೆ.
‘ಎಲ್ಲ ಕಲಾವಿದರನ್ನು ಅವರ ಊರಿಗೆ ಕಳುಹಿಸಲಾಗಿದೆ. ಸಂಸ್ಥೆಗೆ ಸಂಬಂಧಪಟ್ಟಿರುವ ಕೆಲವರು ಮಾತ್ರ ಟೆಂಟ್ ಕಾವಲು ಕಾಯಲು ಇದ್ದಾರೆ. ಟೆಂಟ್ ತೆಗೆಲು ಹೊರ ಊರುಗಳಿಂದ ಜನರು ಬರಬೇಕು. ಅವರಿಗೆ ಬರಲು ಬಸ್ಸು, ರೈಲು ಇಲ್ಲ. ಒಂದು ನಾಟಕ ಕಂಪನಿಯ ಟೆಂಟ್ ಸಾಮಗ್ರಿಗಳು ಮೂರು ಲಾರಿಯಷ್ಟಿರುತ್ತವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಅಧಿಕಾರಿಗಳು ದಯೆ ತೋರಿದರೆ ನಾವು ಬದುಕುತ್ತೇವೆ. ಇಲ್ಲವಾದಲ್ಲಿ ಲಕ್ಷಾಂತರ ರೂಪಾಯಿ ಸಾಮಗ್ರಿಗಳು ಹಾಳಾಗುತ್ತವೆ’ ಎಂದು ಕಂಪನಿ ಪ್ರಮುಖರು ಹೇಳಿದ್ದಾರೆ.