ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾರ್ಥಿ ಪ್ರಣವ್ ಭಾರದ್ವಾಜ್, ‘ವಿವಿಧ ವಿಶ್ವವಿದ್ಯಾಲಯಗಳು ಬೇರೆ ಬೇರೆ ಸೆಮಿಸ್ಟರ್ ಅವಧಿ ಹೊಂದಿವೆ. ಪದವಿ ತರಗತಿಗಳು ನೂರಾರು ವಿಷಯ ಸಂಯೋಜನೆಯನ್ನು ಒಳಗೊಂಡಿವೆ. ಕೆಲವು ವಿಶ್ವವಿದ್ಯಾಲಯಗಳು ಪಠ್ಯಕ್ರಮ ಪೂರ್ಣಗೊಳಿಸಿದರೆ, ಇನ್ನು ಕೆಲವು ಪೂರ್ಣಗೊಳಿಸಿಲ್ಲ. ದಾಖಲೆಯಲ್ಲಿ ಮಾತ್ರ ಅವು ಪೂರ್ಣಗೊಂಡಿವೆ. ಇದು ವಿದ್ಯಾರ್ಥಿಗಳಿಗೆ ಮಾಡುವ ಅನ್ಯಾಯವಾಗಿದೆ. ಹೀಗಾಗಿ, ಹಿಂದಿನ ಸೆಮಿಸ್ಟರ್ಗಳ ಫಲಿತಾಂಶದ ಆಧಾರದ ಮೇಲೆ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಅಂಕ ನೀಡಬೇಕು. ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಮೊದಲಿನಂತೆಯೇ ಹಿಂದುಳಿದ ವಿಷಯಗಳ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು. ಹೆಚ್ಚುವರಿ ಅಂಕ ಪಡೆಯಬೇಕೆಂಬ ಆಸೆಯಿದ್ದವರಿಗೆ, ಎರಡು ಮತ್ತು ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದಂತೆ, ಪರೀಕ್ಷೆಯ ಅವಕಾಶ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು. ವಿದ್ಯಾರ್ಥಿಗಳಾದ ಸಂಧ್ಯಾ ಹೆಗಡೆ, ಆದರ್ಶ ಹೆಗಡೆ, ಯತೀಶ ಹೆಗಡೆ ಇದ್ದರು.