ಹೊನ್ನಾವರ: ತಾಲ್ಲೂಕಿನ ಗೇರುಸೊಪ್ಪ ಸಮೀಪ ರಾಷ್ಟ್ರೀಯ ಹೆದ್ದಾರಿ 69ರಲ್ಲಿನ ಸೂಳೆಮುರ್ಕಿ ಇಳಿಜಾರಿನ ತಿರುವಿನಲ್ಲಿ ಶುಕ್ರವಾರ ಬಸ್ ಪಲ್ಟಿಯಾಗಿ ಇಬ್ಬರು ಮೃತಪಟ್ಟು, ಬಸ್ ಚಾಲಕ ಸೇರಿದಂತೆ 49 ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ.
ಗೌರಿಬಿದನೂರು ತಾಲ್ಲೂಕಿನ ಹಿರೇಬಿದನೂರಿನ ರುದ್ರೇಶ ಗಂಗಾಧರಯ್ಯ(38) ಹಾಗೂ ಮಧುಗಿರಿ ತಾಲ್ಲೂಕು ಕೈಮಾರದ ಲೋಕೇಶ ರಂಗಮಯ್ಯ (26) ಮೃತಪಟ್ಟಿದ್ದಾರೆ.
ಬಸ್ನಲ್ಲಿ ಜನರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದ ರುದ್ರೇಶ ಘಟನಾ ಸ್ಥಳದಲ್ಲೇ ಮೃತಪಟ್ಟರೆ, ಚಾಲಕ ವೃತ್ತಿ ಮಾಡುತ್ತಿದ್ದ ಲೋಕೇಶ ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟರು.
ಘಟನೆಗೆ ಸಂಬಂಧಿಸಿದಂತೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ರವೀಂದ್ರ ರೆಡ್ಡಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಗೌರಿಬಿದನೂರು ಕುಂಟಚಿಕ್ಕನಳ್ಳಿಯಿಂದ ಹೊರಟಿದ್ದ ಬಸ್ನಲ್ಲಿ ಜನರು ಗೋಕರ್ಣ, ಮುರುಡೇಶ್ವರ ಹಾಗೂ ಧರ್ಮಸ್ಥಳಕ್ಕೆ ಪ್ರವಾಸಕ್ಕೆ ಹೊರಟ್ಟಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಬಸ್ ಚಾಲಕ ತುಮಕೂರು ಹೊಸಳ್ಳಿಯ ಆನಂದ ರಾಜಣ್ಣ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.