ಕುಮಟಾ (ಉತ್ತರ ಕನ್ನಡ): ‘ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆ ಆಗದಿರಲು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಡಾ. ಕೆ.ಸುಧಾಕರ್ ಅವರ ನಿಷ್ಕ್ರೀಯತೆಯೂ ಒಂದು ಕಾರಣ’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.
ಪಟ್ಟಣದಲ್ಲಿ ಗುರುವಾರ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು ಸದ್ಯ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಡಾ. ಕೆ.ಸುಧಾಕರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
‘ಸಮಸ್ಯೆ ಪರಿಹರಿಸುವಂತೆ ಕೋರಿ ಬರುತ್ತಿದ್ದ ಜನರು, ಜನಪ್ರತಿನಿಧಿಗಳನ್ನು ಡಾ. ಕೆ.ಸುಧಾಕರ್ ಹತ್ತಿರ ಬಿಟ್ಟುಕೊಳ್ಳುತ್ತಿರಲಿಲ್ಲ. ಲೋಕಸಭೆ ಚುನಾವಣೆ ಮುಗಿದ ಬಳಿಕವೇ ಆಸ್ಪತ್ರೆ ಸ್ಥಾಪನೆಗೆ ಹೋರಾಟ ನಡೆಸಲು ಇಲ್ಲಿನ ಶಾಸಕರೊಂದಿಗೆ ಕೈಜೋಡಿಸಿ ಹೋರಾಡುವೆ’ ಎಂದು ಅವರು ತಿಳಿಸಿದರು.
‘ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲೂ ಮಹಾರಾಷ್ಟ್ರ ಮಾದರಿಯಲ್ಲೇ ಸರ್ಕಾರ ಪತನಗೊಳ್ಳುತ್ತದೆ. ಏಕನಾಥ ಶಿಂಧೆ, ಅಜಿತ್ ಪವಾರ್ ಪಾತ್ರಧಾರಿಗಳು ಕಾಂಗ್ರೆಸ್ನಲ್ಲಿ ಸಿದ್ಧರಾಗಿದ್ದಾರೆ’ ಎಂದರು.