ಯಲ್ಲಾಪುರ: ಆಕಸ್ಮಿಕವಾಗಿ ಸಂಭವಿಸಿದ ಅಗ್ನಿ ಅನಾಹುತಕ್ಕೆ ಪಟ್ಟಣದ ಬಾಳಗಿಯವರ ಕಾಂಪ್ಲೆಕ್ಸ್ 'ಕಾವೇರಿ ಫ್ಲಾಜಾ'ದಲ್ಲಿರುವ ಎಲೆಕ್ಟ್ರಿಕಲ್ ಅಂಗಡಿ ಸುಟ್ಟು ಹೋಗಿದೆ.
ಪಟ್ಟಣ ವ್ಯಾಪ್ತಿಯ ಡಿಟಿ ರಸ್ತೆಯಲ್ಲಿ ಪಟ್ಟಣ ಪಂಚಾಯ್ತಿ ಸಮೀಪದ ದಿನೇಶ ರೇವಣಕರ್ ಅವರಿಗೆ ಸೇರಿದ ಅನುರಾಗ ಎಲೆಕ್ಟ್ರಿಕಲ್ ಅಂಗಡಿಗೆ ಗುರುವಾರ ರಾತ್ರಿ 11:15 ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಅಗ್ನಿಶಾಮಕ ದಳದ ಪ್ರಭಾರ ಠಾಣಾಧಿಕಾರಿ ಭೀಮರಾವ್ ಉಪ್ಪಾರ್ ನೇತೃತ್ವದ ತಂಡ ಬೆಂಕಿ ನಂದಿಸಿದೆ.
ಪ್ರಮುಖ ಅಗ್ನಿಶಾಮಕ ಪದ್ಮನಾಭ ಕಾಂಚನ್, ಚಾಲಕ ತಂತ್ರಜ್ಞ ಜಯಸಿಂಹ ತೋಪನ್ನವರ್, ಚಾಲಕ ರವಿ ಹವಾಲ್ದಾರ್, ಅಗ್ನಿಶಾಮಕರಾದ ನಾಗೇಶ ದೇವಡಿಗ, ಅಡವೆಪ್ಪ ಪುಂಜದ್ ಬೆಂಕಿ ನಂದಿಸಿದರು.
ಬೆಂಕಿಯಿಂದಾಗಿ ಲಕ್ಷಾಂತರ ರೂಪಾಯಿ ಮೊತ್ತದ ಎಲೆಕ್ಟ್ರಾನಿಕ್ ಸಾಮಗ್ರಿಗಳು ಸುಟ್ಟು ಕರಕಲಾಗಿದ್ದು, ಸಾಕಷ್ಟು ಪ್ರಮಾಣದ ವಸ್ತುಗಳನ್ನು ಅಗ್ನಿ ಶಾಮಕದಳದವರು ರಕ್ಷಣೆ ಮಾಡಿದ್ದಾರೆ. ಇದರಿಂದ ಅದೇ ವಾಣಿಜ್ಯ ಸಂಕೀರ್ಣದಲ್ಲಿ ಇರುವ ಇನ್ನಿತರ ಅಂಗಡಿಗಳಿಗೆ ಬೆಂಕಿ ಹರಡುವುದು ತಪ್ಪಿದೆ.
ದೇವರ ಫೋಟೊ ಎದುರಿನ ದೀಪದ ಬತ್ತಿ ಉರಿಯುತ್ತಿರುವಾಗಲೇ ಎತ್ತಿಕೊಂಡು ಹೋದ ಪರಿಣಾಮ ಬೇರೆ ವಸ್ತುಗಳಿಗೆ ಬೆಂಕಿ ತಗುಲಿ ಅಗ್ನಿ ಅವಘಡ ಸಂಭವಿಸಿರಬಹುದು ಅಥವಾ ಬ್ಯಾಟರಿಗೆ ಶಾರ್ಟ್ ಸರ್ಕಿಟ್ ಆಗಿರಬಹುದು ಎಂದು ಅಂಗಡಿ ಮಾಲೀಕ ದಿನೇಶ ರೇವಣಕರ್ ತಿಳಿಸಿದ್ದಾರೆ.
ಒಂದು ತಿಂಗಳ ಅವಧಿಯಲ್ಲಿ ಬೆಂಕಿ ತಗುಲಿದ ಎರಡನೇ ಪ್ರಕರಣವಾಗಿದ್ದು, ಕೆಲವು ದಿನಗಳ ಹಿಂದೆ ದೇವಾರಾಮ್ ಸವಿಟ್ಸ್ ಮತ್ತು ಬೇಕರಿ ಬೆಂಕಿಗೆ ಆಹುತಿಯಾಗಿತ್ತು.
ಸಮುದ್ರದಲ್ಲಿ ಬಿದ್ದು ಸಾವು
ಕುಮಟಾ: ಸಮೀಪ ವನ್ನಳ್ಳಿಯ ಸಮುದ್ರದಲ್ಲಿ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬ ಗುರುವಾರ ಮೃತಪಟ್ಟಿದ್ದು, ಶುಕ್ರವಾರ ಮೃತದೇಹ ಸಿಕ್ಕಿದೆ.
ಕೊಪ್ಪಳ ತಾಲ್ಲೂಕಿನ ಹೊಸಲಿಂಗಾಪುರ ಗ್ರಾಮದ ಯುವಕ ಅಭಿಷೇಕ ಹನುಮಂತ ಬೋಯಾ (25) ಮೃತ ವ್ಯಕ್ತಿ. ಈತ ಕುಮಟಾ ಎಸ್.ಬಿ.ಐ ಶಾಖೆಯಲ್ಲಿ ಉದ್ಯೋಗಿಯಾಗಿರುವ ತನ್ನ ಅಕ್ಕ ಅನುಷಾ ಬೋಯಾ ಜೊತೆ ಕೆಲ ತಿಂಗಳಿಂದ ಕುಮಟಾದಲ್ಲಿ ವಾಸವಾಗಿದ್ದ.
ಗುರುವಾರ ವಾಹನದಲ್ಲಿ ಅಕ್ಕನನ್ನು ಬ್ಯಾಂಕಿಗೆ ಬಿಟ್ಟು ವನ್ನಳ್ಳಿ ಸಮುದ್ರ ತೀರಕ್ಕೆ ಹೋಗಿ ಬರುತ್ತೇನೆ ಎಂದು ತಿಳಿಸಿ ಹೋಗಿದ್ದ ಎಂದು ಅನುಷಾ ಬೋಯಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪಿ.ಎಸ್.ಐ ಆನಂದಮೂರ್ತಿ ಪ್ರಕರಣ ದಾಖಲಿಸಿದ್ದಾರೆ.
ಬಾಲಕಿ ಸಾವು
ಮುಂಡಗೋಡ: ಮನೆಯಲ್ಲಿದ್ದ ಕಳೆನಾಶಕ ಬಾಟಲಿಯ ಮುಚ್ಚಳದಲ್ಲಿ ಹಾಲನ್ನು ಹಾಕಿ ಕುಡಿದಿದ್ದ, ತಾಲ್ಲೂಕಿನ ಚವಡಳ್ಳಿ ಗ್ರಾಮದ ಆರು ವರ್ಷದ ಬಾಲಕಿ ದೀಕ್ಷಾ ಕೋಣನಕೇರಿ, ಚಿಕಿತ್ಸೆ ಫಲಕಾರಿ ಆಗದೇ ಹುಬ್ಬಳ್ಳಿ ಕಿಮ್ಸ್ ನಲ್ಲಿ ಶುಕ್ರವಾರ ಮೃತಪಟ್ಟಿದ್ದಾಳೆ.
ಜೂ. 6ರಂದು ಘಟನೆ ನಡೆದಿದ್ದು, ಆಗ ಇಲ್ಲಿನ ಖಾಸಗಿ ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಿದ್ದಾರೆ. ಕೆಲ ದಿನ ಇಲ್ಲಿಯೇ ಚಿಕಿತ್ಸೆ ಮುಂದುವರೆಸಿ, ಆನಂತರ ಹುಬ್ಬಳ್ಳಿ ಕಿಮ್ಸ್ ಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಮದ್ಯ ಪತ್ತೆ
ಸಿದ್ದಾಪುರ: ತಾಲ್ಲೂಕಿನ ದುಗಡಿಮನೆ ಗ್ರಾಮದ ಅಣ್ಣಪ್ಪ ಚೆನ್ನಯ್ಯ ನಾಯ್ಕ ಎಂಬವರು ತಮ್ಮ ಮನೆಯ ಮುಂಭಾಗದ ಶೆಡ್ನಲ್ಲಿ ಮಾರಾಟಕ್ಕಾಗಿ ಇಟ್ಟಿದ್ದ ಮದ್ಯವನ್ನು ಗುರುವಾರ ಪತ್ತೆ ಮಾಡಲಾಗಿದೆ.
ದಾಳಿ ಸಂದರ್ಭದಲ್ಲಿ ಆರೋಪಿ ಪರಾರಿಯಾಗಿದ್ದು, ಶೆಡ್ನಲ್ಲಿ ಇಡಲಾಗಿದ್ದ ವಿಸ್ಕಿಯ 90 ಎಂಎಲ್ನ , 28 ಟೆಟ್ರಾ ಪ್ಯಾಕ್ಗಳನ್ನು ಪತ್ತೆ ಮಾಡಲಾಗಿದೆ. ಅಬಕಾರಿ ಸಿಬ್ಬಂದಿ ಎನ್.ಕೆ.ವೈದ್ಯ ,ಈರಣ್ಣ ಗಾಳಿ, ಅಬ್ದುಲ್ ಮಕಾನದಾರ್ ದಾಳಿ ನಡೆಸಿದ್ದು, ಇನ್ಸ್ಪೆಕ್ಟರ್ ಮಹೇಂದ್ರ ನಾಯ್ಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನೇಣು ಹಾಕಿಕೊಂಡು ಆತ್ಮಹತ್ಯೆ
ಯಲ್ಲಾಪುರ: ಪಟ್ಟಣದ ಮಂಜುನಾಥ ನಗರದಲ್ಲಿ ವ್ಯಕ್ತಿಯೊಬ್ಬರು ಶುಕ್ರವಾರ ನಸುಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನೂತನನಗರ ಜಡ್ಡಿಯ ನಿವಾಸಿ ರವಿ ಮಸಲಣ್ಣನವರ್ (45) ಮಂಜುನಾಥ ನಗರದ ತಮ್ಮ ಇನ್ನೊಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡವರು.
ಕಳೆದ ಕೆಲವು ದಿನಗಳಿಂದ ಪತಿ, ಪತ್ನಿಯ ನಡುವೆ ತಕರಾರು ನಡೆಯುತ್ತಿತ್ತು. ಗುರುವಾರ ರಾತ್ರಿ ಕೂಡ ದೊಡ್ಡ ಪ್ರಮಾಣದಲ್ಲಿ ಜಗಳವಾಗಿತ್ತು. ಅಕ್ಕ, ಪಕ್ಕದ ಮನೆಯವರು ಇಬ್ಬರನ್ನು ಸಮಾಧಾನ ಮಾಡಿ ಬುದ್ಧಿವಾದ ಹೇಳಿದ್ದರು. ಪಿ.ಎಸ್.ಐ. ಮಂಜುನಾಥ ಗೌಡರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.
ಸಮುದ್ರದಲ್ಲಿ ಬಿದ್ದು ಸಾವು
ಕುಮಟಾ: ಸಮೀಪ ವನ್ನಳ್ಳಿಯ ಸಮುದ್ರದಲ್ಲಿ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬ ಗುರುವಾರ ಮೃತಪಟ್ಟಿದ್ದು, ಶುಕ್ರವಾರ ಮೃತದೇಹ ಸಿಕ್ಕಿದೆ.
ಕೊಪ್ಪಳ ತಾಲ್ಲೂಕಿನ ಹೊಸಲಿಂಗಾಪುರ ಗ್ರಾಮದ ಯುವಕ ಅಭಿಷೇಕ ಹನುಮಂತ ಬೋಯಾ (25) ಮೃತ ವ್ಯಕ್ತಿ. ಈತ ಕುಮಟಾ ಎಸ್.ಬಿ.ಐ ಶಾಖೆಯಲ್ಲಿ ಉದ್ಯೋಗಿಯಾಗಿರುವ ತನ್ನ ಅಕ್ಕ ಅನುಷಾ ಬೋಯಾ ಜೊತೆ ಕೆಲ ತಿಂಗಳಿಂದ ಕುಮಟಾದಲ್ಲಿ ವಾಸವಾಗಿದ್ದ.
ಗುರುವಾರ ವಾಹನದಲ್ಲಿ ಅಕ್ಕನನ್ನು ಬ್ಯಾಂಕಿಗೆ ಬಿಟ್ಟು ವನ್ನಳ್ಳಿ ಸಮುದ್ರ ತೀರಕ್ಕೆ ಹೋಗಿ ಬರುತ್ತೇನೆ ಎಂದು ತಿಳಿಸಿ ಹೋಗಿದ್ದ ಎಂದು ಅನುಷಾ ಬೋಯಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪಿ.ಎಸ್.ಐ ಆನಂದಮೂರ್ತಿ ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.