ಕಾರವಾರ: ‘ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಶಿಲ್ಪಕಲೆಗೆ ಹೆಚ್ಚಿನ ಮಹತ್ವವಿದೆ. ಅಮರಶಿಲ್ಪಿ ಜಕಣಾಚಾರಿ ಅವರು ಬೇಲೂರು ಹಳೆಬೀಡಿನಲ್ಲಿ ಕೆತ್ತಿರುವ ಶಿಲ್ಪಕಲೆಯ ಮೂಲಕ ಇಡೀ ವಿಶ್ವವೇ ವೀಕ್ಷಿಸುವಂತೆ ಮಾಡಿದ್ದಾರೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ರಜಪೂತ್ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಮರ ಶಿಲ್ಪಿ ಜಕಣಾಚಾರಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಶಿಲ್ಪಕಲೆ ಎನ್ನುವುದು ಅತ್ಯಂತ ನಾಜೂಕಾದ ಕೆತ್ತನೆಯ ಕಲೆ ಇಂತಹ ವಿಶೇವಾದಂತಹ ಕಲೆಯ ಮೂಲಕ ಅಮರಶಿಲ್ಪಿ ಜಕಣಾಚಾರಿ ನಾಡಿನ ಶಿಲ್ಪಕಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ವಿಶ್ವಕರ್ಮ ಸಮುದಾಯದ ಬೇಡಿಕೆಗಳಿದ್ದಲ್ಲಿ ಗಮನಕ್ಕೆ ತರಬೇಕು. ಅವುಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದರು.
ಉಪನ್ಯಾಸ ನೀಡಿದ ಭಾರತೀಯ ವಿಶ್ವಕರ್ಮ ಸೇವಾ ಪರಿಷತ್ನ ರಾಜ್ಯ ಘಟಕದ ಉಪಾಧ್ಯಕ್ಷ ರಾಘವೇಂದ್ರ ಆಚಾರ್ಯ, ‘ಅಮರಶಿಲ್ಪಿ ಜಕಣಾಚಾರಿ ಅತ್ಯಂತ ಶ್ರೇಷ್ಠ ಶಿಲ್ಪಿ. ಶಿಲ್ಪಕಲೆಗೆ ಪರ್ಯಾಯ ಹೆಸರೇ ಜಕಣಾಚಾರಿ. ಅವರು ತಮ್ಮ ಜೀವನವನ್ನು ಕಲೆಗಾಗಿ ಮುಡಿಪಾಗಿಟ್ಟಿದ್ದರು’ ಎಂದರು.
ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಗೋಪಾಲ ಆಚಾರ್ಯ, ‘ವಿಶ್ವಕರ್ಮ ಸಮಾಜದವರು ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕಲೆಗಳ ಪ್ರದರ್ಶನಕ್ಕೆ ಅವಕಾಶ ಮಾಡಬೇಕು. ಜಿಲ್ಲೆಯಲ್ಲಿ ಒಂದು ಸಮುದಾಯ ಭವನ ನಿರ್ಮಾಣ ಮಾಡಬೇಕು’ ಎಂದರು.
ವಿವಿಧ ವೃತ್ತಿ ಕೌಶಲ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವಿಶ್ವಕರ್ಮ ಸಮಾಜದ ಮಂಜುನಾಥ ಆಚಾರ್ಯ, ಗಂಗಾಧರ ಆಚಾರ್ಯ, ಗಣಪತಿ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಮಚಂದ್ರ ಕೆ.ಎಂ, ವಿಶ್ವಕರ್ಮ ಸಮಾಜದ ಮುಖಂಡ ಜಗದೀಶ ಆಚಾರ್ಯ, ಇತರರು ಪಾಲ್ಗೊಂಡಿದ್ದರು.