‘ಸುಮಾರು 9 ಸಾವಿರ ಎಕರೆ ಪ್ರದೇಶದಲ್ಲಿ ಭತ್ತ, ಮೆಕ್ಕೆಜೋಳ, ಶುಂಠಿ, ಅನಾನಸ್, ಅಡಿಕೆ, ಬಾಳೆ ಇನ್ನಿತರ ಬೆಳೆ ಬೆಳೆಯುತ್ತಾರೆ. ಆದರೆ 2023-24ನೇ ಸಾಲಿನಲ್ಲಿ ಎದುರಾದ ಮಳೆ ಕೊರತೆ ಕೃಷಿಕರನ್ನು ಕಂಗಾಲಾಗಿಸಿದೆ. ಕೊಳವೆಬಾವಿಯಿಂದ ನೀರೆತ್ತಲು ಅಸಮರ್ಪಕ ವಿದ್ಯುತ್ ದೊಡ್ಡ ಸಮಸ್ಯೆಯಾಗಿದ್ದು, ನೀರಿದ್ದರೂ ಬೆಳೆಗಳಿಗೆ ಹಾಯಿಸಲಾಗದ ಅಸಹಾಯಕ ಸ್ಥಿತಿಯಲ್ಲಿ ಇಲ್ಲಿನ ರೈತರಿದ್ದಾರೆ. ಈ ಕಾರಣಕ್ಕೆ ಸೌರ ವಿದ್ಯುತ್ ಪಂಪ್ ಅಳವಡಿಸಿಕೊಂಡರೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಘಟಕ ಸ್ಥಾಪನೆಯತ್ತ ಹೊರಳಿದ್ದಾರೆ. ಆದರೆ ಇದಕ್ಕೆ ಸರ್ಕಾರದಿಂದ ಸಿಗಬೇಕಿದ್ದ ಸಹಾಯಧನ ಸಿಗುತ್ತಿಲ್ಲ. ಪ್ರಸಕ್ತ ಸಾಲಿನ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ತೋಟಗಾರಿಕೆ ಇಲಾಖೆಯಿಂದ ಸೌರ ವಿದ್ಯುತ್ ಯೋಜನೆಯಡಿ ಶೇ 50ರ ಸಹಾಯಧನ ಸಿಗಲಿದೆ. ಆದರೆ ಯೋಜನೆ ಈಗಾಗಲೇ ಮುಗಿದಿರುವುದರಿಂದ ರೈತರು ಪೂರ್ಣ ಹಣ ಪಾವತಿ ಮಾಡಿ, ಸರ್ಕಾರ ಗುರುತು ಮಾಡಿರುವ ಕಂಪನಿ ಮೂಲಕ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ರೈತ ಲಿಂಗಪ್ಪ ಗೌಡ ಹೇಳಿದರು.