ಕಾರವಾರ: ತಿಂಗಳ ಹಿಂದಿನ ಘಟನೆ ಇದು. 22ರ ಹರೆಯ ತರುಣಿಯೊಬ್ಬಳು ತೀವೃ ಹೊಟ್ಟೆ ನೋವು, ವಾಂತಿಯಿಂದ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗೆ ತೆರಳಿದ್ದಳು. ಆರೋಗ್ಯವಂತಳಾಗಿದ್ದ ಆಕೆ ಏಕಾಏಕಿ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಅಸ್ವಸ್ಥಗೊಂಡವಳನ್ನು ಪರೀಕ್ಷಿಸಿದ ವೈದ್ಯರು ಚಿಕಿತ್ಸೆಗೆ ಹೊರ ಜಿಲ್ಲೆಯ ಆಸ್ಪತ್ರೆಗೆ ತೆರಳಲು ಸೂಚಿಸಿದ್ದರು. ಆರೋಗ್ಯವಂತಳಾಗಿದ್ದವಳನ್ನು ಏಕಾಏಕಿ ಕುಸಿಯುವಂತೆ ಮಾಡಿದ್ದು ‘ಹೊಟೆಲ್ನಲ್ಲಿ ತಯಾರಿಸಿದ್ದ ರುಚಿ ಆಹಾರ’ ಎಂಬುದು ನಂತರ ಪಾಲಕರ ಅರಿವಿಗೆ ಬಂದಿತ್ತು.
ಜಿಲ್ಲೆಯ ಪ್ರವಾಸಿ ತಾಣವೊಂದರ ಫುಡ್ ಕೋರ್ಟ್ನಲ್ಲಿ ಪಾನಿಪುರಿ, ಗೋಬಿ ಮಂಚೂರಿ ಸೇವಿಸಿದ್ದ ಬಾಲಕನ ಸ್ಥಿತಿಯೂ ಇದೇ ರೀತಿಯಾಗಿತ್ತು. ತೀವೃ ಹೊಟ್ಟೆ ನೋವು, ಬೇಧಿಯಿಂದ ಆತ ಅಸ್ವಸ್ಥಗೊಳ್ಳುವಂತಾಗಿತ್ತು.
ಈ ಮೇಲಿನಂತ ಹತ್ತಾರು ಘಟನೆಗಳು ನಮ್ಮ ಸುತ್ತಮುತ್ತ ನಡೆಯುತ್ತಲೇ ಇವೆ. ಮಕ್ಕಳ ಆರೋಗ್ಯ ಹದಗೆಡುತ್ತಿರುವುದಕ್ಕೆ ಪಾಲಕರು ಕಳವಳಗೊಳ್ಳುತ್ತಿದ್ದಾರೆ. ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ವಿಷಯುಕ್ತ ಆಹಾರ ಸೇವನೆಯಿಂದ ಅನರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಗೆ ಬರುವ ಹತ್ತಾರು ಪ್ರಕರಣಗಳು ನಿತ್ಯ ವರದಿಯಾಗುತ್ತಿವೆ. ಈ ಪೈಕಿ ಹೆಚ್ಚಿನವು ‘ಫಾಸ್ಟ್ ಫುಡ್’ ಮೋಹದ ಪ್ರಕರಣಗಳು ಎಂಬುದು ವೈದ್ಯರ ಅಭಿಪ್ರಾಯ.
ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ಜಿಲ್ಲೆಯಲ್ಲಿ, ಅದರಲ್ಲೂ ಕರಾವಳಿ ಭಾಗದಲ್ಲಿ ಫಾಸ್ಟ್ ಫುಡ್ ಸೆಂಟರ್, ಹೊಟೆಲ್ಗಳಿಗೆ ಕೊರತೆ ಇಲ್ಲ. ಗ್ರಾಹಕರನ್ನು ಸೆಳೆಯಲು ಬಹುತೇಕ ಹೊಟೆಲ್ಗಳು ಆಹಾರದ ರುಚಿ ಹೆಚ್ಚಿಸಲು ಒತ್ತು ನೀಡುತ್ತಿವೆ. ಇದಕ್ಕಾಗಿ ಸುವಾಸನೆ ವರ್ಧಕ ಮೊನೊಸೋಡಿಯಂ ಗ್ಲುಟಮೇಟ್ (ಅಜಿನಿಮೊಟೊ) ಬಳಕೆ ಹೆಚ್ಚಿಸಲಾಗುತ್ತಿರುವ ದೂರುಗಳಿವೆ. ಕೆಲವು ಹೊಟೆಲ್ಗಳು ಸಾಂಪ್ರದಾಯಿಕ ಪದಾರ್ಥಗಳ ಮೂಲಕವೇ ರುಚಿಕಟ್ಟಾದ ಆಹಾರ ತಯಾರಿಸಿದರೆ, ಬಹುತೇಕ ಕಡೆ ಕೃತಕ ರಾಸಾಯನಿಕಗಳ ಬಳಕೆ ಹೆಚ್ಚುತ್ತಿರುವ ದೂರುಗಳಿವೆ.
ಜಿಲ್ಲಾ ಕೇಂದ್ರ ಕಾರವಾರ ಸೇರಿದಂತೆ ಬಹುತೇಕ ಕಡೆ ಬೀದಿ ಬದಿಯಲ್ಲಿ ಫಾಸ್ಟ್ ಫುಡ್ ಕೇಂದ್ರ ದಿನಕ್ಕೊಂದರಂತೆ ತಲೆ ಎತ್ತುತ್ತಿವೆ. ಚೈನೀಸ್ ತಿನಿಸುಗಳ ತಯಾರಿಕೆ, ಕರಿದ ಪದಾರ್ಥಗಳ ಮಾರಾಟ ಇಂತಹ ಕೇಂದ್ರಗಳಲ್ಲಿ ಹೆಚ್ಚೆಚ್ಚು ನಡೆಯುತ್ತಿವೆ. ಆದರೆ ಇಲ್ಲಿ ತಯಾರಾಗುವ ತಿನಿಸುಗಳ ಗುಣಮಟ್ಟಗಳ ಪರೀಕ್ಷೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬುದು ಸಾರ್ವಜನಿಕ ವಲಯದಲ್ಲಿ ಗಂಭೀರ ಆರೋಪ ವ್ಯಕ್ತವಾಗುತ್ತಿದೆ.
‘ಹೊಟೆಲ್, ಫಾಸ್ಟ್ ಫುಡ್ ಸೆಂಟರ್ ಗಳಲ್ಲಿ ಆಹಾರದ ರುಚಿ ಹೆಚ್ಚಿಸುವ ಸಲುವಾಗಿ ಬಳಸಲಾಗುವ ಅಜಿನೊಮೊಟೊ, ವಿನೇಗರ್, ರಾಸಾಯನಿಕಯುಕ್ತ ಸಾಸ್ಗಳು ದೇಹಕ್ಕೆ ಒಗ್ಗದು. ಅವುಗಳನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಬಳಕೆ ಮಾಡುತ್ತಿರುವ ಪರಿಣಾಮ ಆಹಾರದ ರುಚಿ ಹೆಚ್ಚುತ್ತದೆ. ಆದರೆ ದೇಹಕ್ಕೆ ಮಾರಕವಾಗುತ್ತವೆ. ಇವುಗಳೇ ಉದರ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗುತ್ತಿದೆ’ ಎಂದು ವೈದ್ಯರೊಬ್ಬರು ಹೇಳಿದರು.
‘ರಸಾಯನಿಕ ಬಳಕೆ ಮಾಡಿ ಸಿದ್ಧಪಡಿಸಿದ ಆಹಾರವನ್ನು ಒಮ್ಮೆ ಸೇವಿಸಿದರೆ ಅವು ಮತ್ತೆ ಮತ್ತೆ ಬಾಯಿ ಚಪಲ ಹೆಚ್ಚಿಸುತ್ತವೆ. ಚಿಕ್ಕ ಮಕ್ಕಳು, ಯುವತಿಯರು ಇಂತಹ ಆಹಾರ ಸೇವನೆಗೆ ಹೆಚ್ಚು ಇಷ್ಟಪಡುತ್ತಿದ್ದಾರೆ. ದಿನವೊಂದಕ್ಕೆ ಜಿಲ್ಲೆಯಲ್ಲಿಯೇ ಸರಾಸರಿ 150 ಕೆ.ಜಿಗಿಂತ ಹೆಚ್ಚು ರಾಸಾಯನಿಕ ಪದಾರ್ಥಗಳು ಮನುಷ್ಯರ ಹೊಟ್ಟೆ ಸೇರುತ್ತಿವೆ’ ಎಂದೂ ಕಳವಳ ವ್ಯಕ್ತಪಡಿಸಿದರು.
ವೆಚ್ಚ ತಗ್ಗಿಸಲು ಬಹುತೇಕ ಬೀದಿಬದಿಯ ಅಂಗಡಿಕಾರರು, ಹೊಟೆಲ್ನವರು ತಿಇಸುಗಳನ್ನು ಪೊಟ್ಟಣದಲ್ಲಿ ಕಟ್ಟಿಕೊಡಲು ಹಳೆಯ ದಿನಪತ್ರಿಕೆಗಳನ್ನು ಬಳಸುವುವುದು ಹೆಚ್ಚು. ಎಣ್ಣೆಯಲ್ಲಿ ಕರಿದ ಪದಾರ್ಥ, ಇತರ ತಿನಿಸುಗಳನ್ನು ಪತ್ರಿಕೆಯಲ್ಲಿ ಕಟ್ಟಿಕೊಡುತ್ತಿರುವುದು ಅಪಾಯಕಾರಿ ಎಂಬುದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳ ಅನಿಸಿಕೆ.
‘ಪತ್ರಿಕೆಗಳನ್ನು ಮುದ್ರಿಸಲು ಬಳಸುವ ಇಂಕ್ಗಳಲ್ಲಿ ಕಾರ್ಬನ್ಯುಕ್ತ ರಾಸಾಯನಿಕಗಳಿರುತ್ತವೆ. ಪತ್ರಿಕೆಯಲ್ಲಿ ಎಣ್ಣೆಯಲ್ಲಿ ಕರಿದ ತಿನಿಸು, ಇತರ ಆಹಾರ ಪದಾರ್ಥ ಕಟ್ಟಿಕೊಡುವುದರಿಂದ ಈ ರಾಸಾಯನಿಕಗಳು ಆಹಾರದೊಂದಿಗೆ ಮಿಶ್ರಣಗೊಂಡು ಮನುಷ್ಯನ ಹೊಟ್ಟೆ ಸೇರುತ್ತವೆ. ಅಲ್ಲಿ ಜೀರ್ಣಾಂಗವ್ಯೂಹದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ’ ಎನ್ನುತ್ತಾರೆ ಪ್ರಾಧಿಕಾರದ ಅಂಕಿತ ಅಧಿಕಾರಿ ಡಾ.ರಾಜಶೇಖರ್.
ಅಜಿನೊಮೊಟೊ ಹೆಚ್ಚು ಬಳಕೆ ತಡೆಯುವ ಜತೆಗೆ ರಾಸಾಯನಿಕ ಬಣ್ಣಗಳನ್ನು ಆಹಾರ ಸಾಮಗ್ರಿಗಳಲ್ಲಿ ಬಳಸದಂತೆ ಎಚ್ಚವಹಿಸಲಾಗುತ್ತಿದೆ. ಹೊಟೆಲ್ ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿ ಇವುಗಳ ಪತ್ತೆ ಹಚ್ಚಲಾಗುತ್ತಿದೆ.ಡಾ.ರಾಜಶೇಖರ್ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ
ಕಲಬೆರಕೆ ಪದಾರ್ಥ ರಾಸಾಯನಿಕಯುಕ್ತ ಆಹಾರ ಸಾಮಗ್ರಿ ಮಾರಾಟ ತಡೆಗೆ ನಿರಂತರವಾಗಿ ದಾಳಿ ನಡೆಸಿದ ಪರಿಣಾಮ ಈಚೆಗೆ ಅವುಗಳ ಬಳಕೆ ಕಡಿಮೆಯಾಗಿದೆ.ಅರುಣಕಾಶಿ ಭಟ್, ಆಹಾರ ಸುರಕ್ಷತಾ ಅಧಿಕಾರಿ
ಆಹಾರ ಕೆಡದಂತೆ ಬಳಸುವ ಮತ್ತು ಅಲಂಕಾರಕ್ಕೆ ಬಳಸುವ ಕೆಲವು ಉತ್ಪನ್ನಗಳು ಆರೋಗ್ಯಕ್ಕೆ ಮಾರಕವಾಗಿವೆ. ಅವು ತಲೆನೋವಿನಂತ ಸಾಮಾನ್ಯ ಸಮಸ್ಯೆಯಿಂದ ಹಿಡಿದು ಹೃದಯ ಕಾಯಿಲೆಯಂತ ಗಂಭೀರ ಸಮಸ್ಯೆ ತಂದೊಡ್ಡಬಹುದು.- ಡಾ.ಗಜಾನನ ನಾಯಕ, ಕ್ರಿಮ್ಸ್ ನಿರ್ದೇಶಕ
ಹೊಟೆಲ್ ಫಾಸ್ಟ್ ಫುಡ್ ಸೆಂಟರ್ ಗಳಲ್ಲಿ ಈಚೆಗೆ ರುಚಿ ಹೆಚ್ಚಿಸಲು ಮಿತಿಮೀರಿ ರಾಸಾಯನಿಕ ಅಂಶ ಬೆರೆಸಲಾಗುತ್ತಿದೆ. ಇವುಗಳಿಗೆ ನಿಯಂತ್ರಣ ಹೇರದಿದ್ದರೆ ಗಂಭೀರ ಕಾಯಿಲೆಗಳು ಹೆಚ್ಚಬಹುದು.- ವಿನಾಯಕ ನಾಯ್ಕ ಸಾಮಾಜಿಕ ಕಾರ್ಯಕರ್ತ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.