ಅಂಕೋಲಾ (ಉತ್ತರ ಕನ್ನಡ): ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಹಾರವಾಡ ಕ್ರಾಸ್ ಬಳಿ ಗುರುವಾರ ಅಪರೂಪದ, ಹಿಮಾಲಯದ ದೊಡ್ಡ ರಣಹದ್ದು (ಹಿಮಾಲಯನ್ ಗ್ರಿಫೋನ್ ವಲ್ಚರ್) ಕಾಣಿಸಿಕೊಂಡಿದೆ. ನಿತ್ರಾಣಗೊಂಡಿದ್ದ ಅದನ್ನು ಸ್ಥಳೀಯ ಯುವಕರು ಉಪಚರಿಸಿದ್ದಾರೆ.
ಹಾರವಾಡದ ಅರಣ್ಯ ಪ್ರದೇಶದ ಸುತ್ತಮುತ್ತ ಹಾರಾಡುತ್ತಿದ್ದ ಈ ರಣಹದ್ದು ಬಳಿಕ ನಿತ್ರಾಣಗೊಂಡಂತಾಗಿ ರಸ್ತೆಯಂಚಿಗೆ ಬಂದು ಕುಳಿತಿತ್ತು. ಪಕ್ಷಿಯನ್ನು ಕಂಡ ಸ್ಥಳೀಯ ಯುವಕರಾದ ದಿಗಂಬರ ಗೌಡ, ಸುಧಾಕರ, ನಾಗರಾಜ, ಅಕ್ಷಯ ನೀರು ಕುಡಿಸಿ ಉಪಚರಿಸಿದ್ದಾರೆ. ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಅರಣ್ಯ ರಕ್ಷಕರೊಬ್ಬರು ನೆರವು ನೀಡಿದ್ದಾರೆ.
‘ಈ ರಣಹದ್ದು ಪ್ರಭೇದ ಅಳಿವಿನ ಅಂಚಿನಲ್ಲಿದೆ. ಇತ್ತೀಚಿನ ದಿನಗಳಲ್ಲಿ ಸ್ಥಳೀಯವಾಗಿ ಕಂಡುಬರುವುದು ಅಪರೂಪ. ನಿತ್ರಾಣಗೊಂಡ ಪಕ್ಷಿಯನ್ನು ಸ್ಥಳೀಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಉಪಚರಿಸಿ ಮಾನವೀಯತೆ ಮೆರೆದಿದ್ದಾರೆ’ ಎಂದು ಅಂಕೋಲಾ ವಲಯ ಅರಣ್ಯ ಅಧಿಕಾರಿ ವಿ.ಪಿ.ನಾಯ್ಕ ತಿಳಿಸಿದರು.
ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 66ರ ಹಾರವಾಡ ಕ್ರಾಸ್ ಬಳಿ ಗುರುವಾರ ಮಧ್ಯಾಹ್ನ ಅಪರೂಪದ ಹಿಮಾಲಯದ ದೊಡ್ಡ ರಣಹದ್ದು ನಿತ್ರಾಣ ಸ್ಥಿತಿಯಲ್ಲಿ ಕಂಡು ಬಂದಿದ್ದು, ಸ್ಥಳೀಯ ಯುವಕರು ನೀರು ಕುಡಿಸಿ ಉಪಚರಿಸಿದರು.
ಕಾರವಾರ ತಾಲ್ಲೂಕಿನ ಕಾಳಿ ನದಿಯ ಸುತ್ತಮುತ್ತ ಹಾರಾಡುತ್ತಿದ್ದ ಹಿಮಾಲಯದ ದೊಡ್ಡ ರಣಹದ್ದನ್ನು ಸ್ಥಳೀಯ ಪಕ್ಷಿ ವೀಕ್ಷಕರ ಗುಂಪು, ‘ಕೈಗಾ ಬರ್ಡರ್ಸ್’ ಇತ್ತೀಚೆಗೆ ಗುರುತಿಸಿತ್ತು. 2016ರ ಬಳಿಕ ಈ ವರ್ಷ ಮೊದಲ ಬಾರಿಗೆ ಕಾಣಿಸಿದ್ದಾಗಿ ಗುಂಪಿನ ಪ್ರಮುಖರು ತಿಳಿಸಿದ್ದರು.