ಹೊಸಪೇಟೆ (ವಿಜಯನಗರ): ಬುಧವಾರ (ಮೇ 19) ಬೆಳಿಗ್ಗೆಯಿಂದ ಸಂಪೂರ್ಣ ಲಾಕ್ಡೌನ್ ಜಾರಿಗೆ ಬರಲಿರುವ ಸುದ್ದಿ ಗೊತ್ತಾಗುತ್ತಿದ್ದಂತೆ ಮಂಗಳವಾರ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಸಂದಣಿ ಕಂಡು ಬಂತು.
ಬುಧವಾರ ಬೆಳಿಗ್ಗೆ ಹತ್ತು ಗಂಟೆಯ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಹೀಗಿದ್ದರೂ ಹೆಚ್ಚಿನ ಸಂಖ್ಯೆಯ ಜನ ಮಂಗಳವಾರ ಬೆಳಿಗ್ಗೆ ಖರೀದಿಗೆ ಹೊರ ಬಂದಿದ್ದರು. ರಾಮ ಟಾಕೀಸ್, ಟಿ.ಬಿ. ಡ್ಯಾಂ ರಸ್ತೆ, ಮೇನ್ ಬಜಾರ್, ಗಾಂಧಿ ವೃತ್ತದಲ್ಲಿ ಹೆಚ್ಚಿನ ಜನದಟ್ಟಣೆ ಕಂಡು ಬಂತು.
ಸೋಮವಾರವೇ ಹೂವಿನ ಮಾರುಕಟ್ಟೆ ಸಂಪೂರ್ಣ ಬಂದ್ ಮಾಡಲಾಗಿತ್ತು. ಆದರೆ, ಗ್ರಾಹಕರು ಅನೇಕ ದಿನಗಳ ಮೊದಲೇ ಬೇಡಿಕೆ ಸಲ್ಲಿಸಿದ್ದರಿಂದ ಹೂವಿನ ವ್ಯಾಪಾರಿಗಳು ಮಳಿಗೆ ಹೊರಗೆ ಕುಳಿತುಕೊಂಡು, ಹೂ, ಹೂವಿನ ಮಾಲೆ ಮಾರಾಟ ಮಾಡಿದರು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಅವರನ್ನು ಅಲ್ಲಿಂದ ಕಳುಹಿಸಿದರು.
ಇನ್ನು, ಡಿವೈಎಸ್ಪಿ ವಿ. ರಘುಕುಮಾರ ಅವರು ದುರ್ಗಾ ಪಡೆಯೊಂದಿಗೆ ನಗರದ ಪ್ರಮುಖ ಭಾಗಗಳಲ್ಲಿ ಸಂಚರಿಸಿದರು. ತರಕಾರಿ, ಹಣ್ಣು, ದಿನಸಿ ಖರೀದಿಗೆ ಮುಗಿಬಿದ್ದಿದ್ದ ಜನರಿಗೆ ಎಚ್ಚರಿಕೆ ನೀಡಿ, ಅಲ್ಲಿಂದ ಕಳುಹಿಸಿದರು. ವ್ಯಾಪಾರಿಗಳಿಗೆ ನಿಯಮ ಪಾಲಿಸಿ, ವ್ಯವಹಾರ ನಡೆಸುವಂತೆ ಸೂಚಿಸಿದರು.
ಒಂದೇ ಸ್ಥಳದಲ್ಲಿ ನಿಂತು, ಜನರನ್ನು ಸೇರಿಸಿಕೊಂಡು ಹಣ್ಣು, ತರಕಾರಿ ಮಾರಾಟ ಮಾಡುತ್ತಿದ್ದವರನ್ನು ದುರ್ಗಾ ಪಡೆಯವರು ಕಳುಹಿಸಿದರು. ಅವಧಿ ಮೀರಿದರೂ ಮಳಿಗೆಗಳನ್ನು ತೆರೆದಿದ್ದವರಿಗೆ ಎಚ್ಚರಿಕೆ ನೀಡಿ ಬಂದ್ ಮಾಡಿಸಿದರು.