ಹೂವಿನಹಡಗಲಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಸೋವೇನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ವ್ಯಾಪ್ತಿಯಲ್ಲಿ ಶುಕ್ರವಾರ ಆಲಿಕಲ್ಲು ಮಳೆಯಾಗಿದೆ.
ಸೋವೇನಹಳ್ಳಿ, ಸೋವೇನಹಳ್ಳಿ ತಾಂಡಾ, ಪುರ, ಕಂದಗಲ್ಲು, ಅಂಕ್ಲಿ, ಅಂಕ್ಲಿ ತಾಂಡಾ ವ್ಯಾಪ್ತಿಯಲ್ಲಿ ಮಳೆಯೊಂದಿಗೆ ಆಲಿಕಲ್ಲುಗಳು ಸುರಿದಿವೆ. ಹೊಲ ಗದ್ದೆ, ಮನೆಯ ಅಂಗಳದಲ್ಲಿ ದೊಡ್ಡ ದೊಡ್ಡ ಆಲಿಕಲ್ಲುಗಳು ಬಿದ್ದಿವೆ. ಮಳೆ ನಿಂತ ಮೇಲೆ ಜನರು ಆಲಿಕಲ್ಲುಗಳನ್ನು ಆಯ್ದುಕೊಂಡು ಸಂಭ್ರಮಿಸಿದರು.
ಬಿರುಗಾಳಿ ಸಹಿತ ಮಳೆ ಸುರಿದಿದ್ದರಿಂದ ಸೋವೇನಹಳ್ಳಿಯಲ್ಲಿ ಕಟಾವಿಗೆ ಬಂದಿರುವ ಕೆಲವು ರೈತರ ಭತ್ತದ ಫಸಲು ಹಾನಿಗೀಡಾಗಿದೆ. ಗೂರನವರ ಷಣ್ಮುಖಪ್ಪ ಎಂಬ ರೈತನ ಮೆಕ್ಕೆಜೋಳ ಬೆಳೆ ನೆಲಕ್ಕೆ ಒರಗಿದೆ. ಅಕಾಲಿಕ ಮಳೆಯಿಂದ ನದಿ ತೀರದ ಗ್ರಾಮಗಳಲ್ಲಿ ಭತ್ತದ ಬೆಳೆಗೆ ಹಾನಿಯಾಗಿದ್ದು, ಅಧಿಕಾರಿಗಳು ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.