ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಸ್ಥಾನಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಹೆಸರನ್ನು ಶನಿವಾರ ಅಧಿಕೃತವಾಗಿ ಘೋಷಿಸಿದೆ.
ಇದರಲ್ಲಿ ಇಬ್ಬರು ಹಾಲಿ ಹಾಗೂ ಒಬ್ಬ ಮಾಜಿ ಶಾಸಕನಿಗೆ ಟಿಕೆಟ್ ನೀಡಿದೆ. ಇನ್ನೆರಡು ಕ್ಷೇತ್ರಗಳಿಗೆ ಯಾವುದೇ ಹೆಸರು ಘೋಷಿಸಿಲ್ಲ.
ಹಗರಿಬೊಮ್ಮನಹಳ್ಳಿ ಹಾಗೂ ಹೂವಿನಹಡಗಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಿಗೆ ಪಕ್ಷವು ಕ್ರಮವಾಗಿ ಹಾಲಿ ಶಾಸಕರಾದ ಭೀಮ ನಾಯ್ಕ ಹಾಗೂ ಪಿ.ಟಿ. ಪರಮೇಶ್ವರ ನಾಯ್ಕ ಅವರಿಗೆ ಟಿಕೆಟ್ ಘೋಷಿಸಿದೆ. ಇಬ್ಬರು ಕಳೆದೆರಡು ಚುನಾವಣೆಗಳಲ್ಲಿ ಜಯ ಗಳಿಸಿದ್ದಾರೆ.
ಈಗ ಪುನಃ ಟಿಕೆಟ್ ಸಿಕ್ಕಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಭೀಮ ನಾಯ್ಕ ಹಾಗೂ ಪಿ.ಟಿ. ಪರಮೇಶ್ವರ ಇಬ್ಬರು ಲಂಬಾಣಿ ಸಮುದಾಯದವರು. ಎರಡು ಕ್ಷೇತ್ರಗಳ ಪೈಕಿ ಒಂದರಲ್ಲಿ ಮಾದಿಗ ಸಮಾಜದವರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇತ್ತು. ಆದರೆ, ಪಕ್ಷ ಅದಕ್ಕೆ ಮನ್ನಣೆ ನೀಡಿಲ್ಲ.
ಇನ್ನು, ವಿಜಯನಗರ ಸಾಮಾನ್ಯ ಕ್ಷೇತ್ರದ ಟಿಕೆಟ್ ಮಾಜಿ ಶಾಸಕ ಎಚ್.ಆರ್. ಗವಿಯಪ್ಪ ಅವರಿಗೆ ನೀಡಲಾಗಿದೆ. ಕ್ಷೇತ್ರದ ಟಿಕೆಟ್ಗೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಒಟ್ಟು ಹನ್ನೆರಡು ಜನ ಅರ್ಜಿ ಸಲ್ಲಿಸಿದ್ದರು. ಮಾಜಿಶಾಸಕ ಸಿರಾಜ್ ಶೇಖ್, ಕೊಪ್ಪಳ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರ್ ಹಿಟ್ನಾಳ್, ಬಳ್ಳಾರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವೆಂಕಟರಾವ ಘೋರ್ಪಡೆ ಸೇರಿದಂತೆ ಇತರರಿದ್ದರು. ಆದರೆ, ಪಕ್ಷವು ಅಂತಿಮವಾಗಿ ಗವಿಯಪ್ಪ ಅವರಿಗೆ ಟಿಕೆಟ್ ನೀಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.