ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನ, ಧ್ಯಾನ, ಗಾನದಿಂದ ಜೀವನದಲ್ಲಿ ಆನಂದ: ಶ್ರೀ ಶ್ರೀ ರವಿಶಂಕರ್‌

Last Updated 14 ಫೆಬ್ರುವರಿ 2023, 16:05 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಆರ್ಟ್‌ ಆಫ್‌ ಲಿವಿಂಗ್‌’ನ ರವಿಶಂಕರ್‌ ಗುರೂಜೀ ಅವರು ಮಂಗಳವಾರ ರಾತ್ರಿ ನಗರದ ಡಾ. ಪುನೀತ್‌ ರಾಜಕುಮಾರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಆನಂದ ವಿಜಯೋತ್ಸವದಲ್ಲಿ ಮಹಾಸತ್ಸಂಗ, ಯೋಗ, ಪ್ರಾಣಾಯಾಮ, ಸುದರ್ಶನ ಕ್ರಿಯೆಯ ಮಹತ್ವ ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ 15 ನಿಮಿಷ ಧ್ಯಾನ ಮಾಡಿಸಿದರು. ಯೋಗ, ಪ್ರಾಣಾಯಾಮ ಹಾಗೂ ಸುದರ್ಶನ ಕ್ರಿಯೆಯ ಮಹತ್ವ ವಿವರಿಸಿದರು. ಭಜನೆ ಹೇಳಿಕೊಟ್ಟರು. ಒತ್ತಡದ ಬದುಕಿನಿಂದ ಹೊರಬಂದು ನೆಮ್ಮದಿ, ಸಂತೋಷದಿಂದ ಜೀವನ ಹೇಗೆ ನಡೆಸಬಹುದು ಎಂದು ಹೇಳಿದರು.

‘ಪ್ರತಿಯೊಬ್ಬರ ಮನೆಯಲ್ಲೂ ಸಂತೋಷ, ನಗೆಯ ಸಂಭ್ರಮ ತರಬೇಕಿದೆ. ಜೀವನವನ್ನೇ ಒಂದು ಉತ್ಸವ ಮಾಡುವುದು ಜೀವನ ಕಲೆ (ಆರ್ಟ್‌ ಆಫ್‌ ಲಿವಿಂಗ್‌). ಜ್ಞಾನ, ಧ್ಯಾನ, ಗಾನ ಬದುಕಿನಲ್ಲಿ ಬಹಳ ಅಗತ್ಯ. ಈ ಮೂರು ಜೀವನದಲ್ಲಿದ್ದರೆ ಆನಂದ ತುಂಬಿ ಹರಿಯುತ್ತದೆ’ ಎಂದು ತಿಳಿಸಿದರು.

ಪ್ರತಿಯೊಬ್ಬರಲ್ಲೂ ಜ್ಞಾನದ ಪಿಪಾಸೆ ಇದೆ. ಅದನ್ನು ಹೆಚ್ಚಿಸಿಕೊಳ್ಳಬೇಕು. ನಾವೆಲ್ಲರೂ ಒಂದು ದಿನ ಈ ಜಗತ್ತಿನಿಂದ ಹೋಗುತ್ತೇವೆ. ಆದರೆ, ಪ್ರಪಂಚ ಹಾಗೆಯೇ ಇರುತ್ತದೆ. ನಶ್ವರ ಜೀವನದಲ್ಲಿ ಶಾಶ್ವತ ತತ್ವ ಅರಿಯಬೇಕಿದೆ. ಅದು ಧ್ಯಾನದಿಂದ ಸಾಧ್ಯ. ಭಾರತದಲ್ಲಿ ಅಪಾರವಾದ ಜ್ಞಾನದ ಪರಂಪರೆ ಇದೆ. ಆದರೆ, ಹಿತ್ತಲ ಗಿಡ ಮದ್ದಲ್ಲ ಎಂಬಂತೆ ನಾವು ಅದನ್ನು ಉಪೇಕ್ಷಿಸಿದ್ದೇವೆ ಎಂದು ಹೇಳಿದರು.

ಸತ್ಸಂಗ ಅಂದರೆ ಸಂಕೋಚ ಬಿಟ್ಟು ಆತ್ಮೀಯವಾಗಿ ಎಲ್ಲರೊಂದಿಗೆ ಬೆರೆಯುವುದು. ಮುಕ್ತ ಮನಸ್ಸು, ಸಹಜವಾಗಿ ಎಲ್ಲರೊಂದಿಗೆ ಬೆರೆಯಬೇಕು. ಹಳ್ಳಿಗಳಲ್ಲಿ ಹರಿಕಥೆ, ಜಾನಪದ ಕಾರ್ಯಕ್ರಮ, ಜಾತ್ರೆಗಳಲ್ಲಿ ಜನ ಹೇಗೋ ಸೇರುತ್ತಾರೋ ಅದೇ ರೀತಿ ಸೇರಬೇಕು. ಇದರಿಂದ ಮನಸ್ಸು ಒತ್ತಡದಿಂದ ಹೊರಬರುತ್ತದೆ. ಇಡೀ ಜಗತ್ತಿನಲ್ಲಿ ಮಾನಸಿಕ ಸಮಸ್ಯೆ ಹೆಚ್ಚಾಗಿದೆ. ಪ್ರಪಂಚದ ಪ್ರತಿ ನಾಲ್ವರಲ್ಲಿ ಒಬ್ಬರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಅಮೆರಿಕದ 108 ವಿಶ್ವವಿದ್ಯಾಲಯಗಳಲ್ಲಿ ಯೋಗಕ್ಕೆ ಅಂಕ ನಿಗದಿಪಡಿಸಲಾಗಿದೆ. ಯೋಗದ ಮಹತ್ವ ಇದರಿಂದ ಅರಿಯಬಹುದು ಎಂದರು.

ದೇಶದ ಅನೇಕ ಕಡೆಗಳಲ್ಲಿ ಮಾದಕದ್ರವ್ಯ ಸೇವನೆ ಹೆಚ್ಚಾಗಿದೆ. ನೆರೆಯ ಮಹಾರಾಷ್ಟ್ರಕ್ಕೂ ಬಂದಿದೆ. ನಮ್ಮ ರಾಜ್ಯಕ್ಕೆ ಬರದಂತೆ ನೋಡಿಕೊಳ್ಳಬೇಕಿದೆ. ನಮ್ಮ ಮಕ್ಕಳನ್ನು ಅದರಿಂದ ದೂರ ಇಡಬೇಕಿದೆ. ಸಾರಾಯಿ, ಸಿಗರೇಟು ದುಶ್ಚಟಗಳ ದಾಸರಾಗದಂತೆ ಮಕ್ಕಳನ್ನು ನೋಡಿಕೊಳ್ಳಲು ನಾವು ಪ್ರಯತ್ನಿಸಬೇಕು. ಪ್ರತಿಯೊಂದು ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ಹಾಗೂ ಸಂತೋಷ ಇರಬೇಕು. ಆಗ ನಾವು ಜೀವನದಲ್ಲಿ ಗೆದ್ದಿದ್ದೇವೆ ಎಂದರ್ಥ ಎಂದರು.

‘ಸಹಜ ಕೃಷಿ ಬಹಳ ಅಗತ್ಯ’

‘ರೈತರು ನೆಲದಲ್ಲಿ ಆರೋಗ್ಯಕರ ಬೆಳೆ ಬೆಳೆಯಬೇಕು. ಅದರಲ್ಲೂ ಈ ಭಾಗದ ರೈತರು ಒಟ್ಟು ಜಮೀನಿನ ಪೈಕಿ ಕೆಲವು ಭಾಗದಲ್ಲಾದರೂ ಸಹಜ ಕೃಷಿಯಲ್ಲಿ ಭತ್ತ ಬೆಳೆಯಬೇಕು. ರಸಾಯನಿಕ ಗೊಬ್ಬರದ ಮಿತಿ ಮೀರಿದ ಬಳಕೆಯಿಂದ ನೆಲ ವಿಷಪೂರಿತವಾಗಿದೆ’ ಎಂದು ರವಿಶಂಕರ್‌ ಗುರೂಜೀ ಹೇಳಿದರು.

ನಮ್ಮ ಆಹಾರ ನಮ್ಮ ಶರೀರಕ್ಕೆ ಒಗ್ಗುತ್ತಿಲ್ಲವೆಂದರೆ ಅದು ವಿಷಪೂರಿತವಾಗಿದೆ ಎಂದರ್ಥ. ಪ್ರತಿಯೊಬ್ಬರೂ ನಾವು ವಾಸಿಸುವ ಜಾಗದಲ್ಲೇ ಸ್ವಲ್ಪ ಪ್ರಮಾಣದಲ್ಲಾದರೂ ತರಕಾರಿ ಬೆಳೆಸಬೇಕು. ಉತ್ತಮ ಆಹಾರ ಸೇವಿಸಬೇಕು. ಇದರ ಜೊತೆಗೆ ಯೋಗ, ಪ್ರಾಣಾಯಾಮ, ಧ್ಯಾನ ಮಾಡಬೇಕು. ನಿತ್ಯ ಒಂದೆರಡು ಕಿ.ಮೀ ನಡೆದರೆ ಆರೋಗ್ಯವಂತರಾಗಿ ಬಾಳಬಹುದು ಎಂದು ತಿಳಿಸಿದರು.

‘ಇಂಗ್ಲಿಷ್‌ನಲ್ಲಿ ಸಂಸ್ಕೃತ ಪದಗಳಿವೆ’

‘ಇಂಗ್ಲಿಷ್‌ ಭಾಷೆಯ ಅನೇಕ ಪದಗಳು ಸಂಸ್ಕೃತ ಪದಗಳನ್ನು ಒಳಗೊಂಡಿವೆ. ನವೆಂಬರ್‌ ಅಂದರೆ ಒಂಬತ್ತನೇ ಅಂಬರ ಅಥವಾ ಆಕಾಶ ಎಂದರ್ಥ. ಅಲ್ಲದೇ ಹೆಚ್ಚಿನ ರಾಷ್ಟ್ರಗಳಲ್ಲಿ ಮಾರ್ಚ್‌ನಲ್ಲಿ ಹೊಸ ವರ್ಷ ಆಚರಿಸಲಾಗುತ್ತದೆ. ಮಾರ್ಚ್‌ ಅಂದರೆ ಮುಂದೆ ನಡೆ ಎಂದರ್ಥ. ಈಗಲೂ ಇರಾನ್‌ನಲ್ಲಿ ಮಾರ್ಚ್‌ನಲ್ಲಿ ಹೊಸ ವರ್ಷ ಆಚರಿಸಲಾಗುತ್ತದೆ. ಇದನ್ನು ತಪ್ಪಿಸಲು ಏಪ್ರಿಲ್‌ನಲ್ಲಿ ‘ಫೂಲ್ಸ್‌ ಡೇ’ ಆರಂಭಿಸಲಾಯಿತು. ಇಷ್ಟೇ ಅಲ್ಲ ಜಗತ್ತಿಗೆ ಶೂನ್ಯ, ಗಣಿತ, ಖಗೋಳ ವಿಜ್ಞಾನದ ಜ್ಞಾನ ಕೊಟ್ಟಿದ್ದು ಭಾರತ’ ಎಂದು ರವಿಶಂಕರ್‌ ಗುರೂಜೀ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT