ಕಾನಹೊಸಹಳ್ಳಿ: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಇದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಅಗತ್ಯ ಸೌಲಭ್ಯ ಒದಗಿಸಿ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಬೇಕು ಎಂದು ಉದ್ಯಮಿ ಹಿ.ಮ.ಹರ್ಷ ಹೇಳಿದರು.
ಸಮೀಪದ ಗಡಿಗ್ರಾಮ ಹಿರೇಕುಂಬಳಗುಂಟೆ ಹಿ.ಮ.ನಾಗಯ್ಯ ಸರ್ಕಾರಿ ಪ್ರೌಢಶಾಲೆಗೆ ಮಂಗಳವಾರ ಭೇಟಿ ನೀಡಿ ಮಾತನಾಡಿದ ಅವರು, ಗ್ರಾಮದಲ್ಲಿ ಹಿ.ಮ.ನಾಗಯ್ಯ ಅವರಂತಹ ಸಾಹಿತಿ, ಎಚ್.ಎಂ.ಮರುಳಸಿದ್ದಯ್ಯ ಅವರಂತಹ ಚಿಂತಕರು ಶಿಕ್ಷಣದ ಪ್ರಗತಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದರು. ಅವರ ಮಾರ್ಗದರ್ಶನದಲ್ಲೇ ನಾನು ಶಾಲೆಯ ಮಕ್ಕಳಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂಬ ಉದ್ದೇಶದಿಂದ ಶಾಲೆಗೆ ₹10 ಲಕ್ಷ ಧನಸಹಾಯ ನೀಡಿರುವೆ ಎಂದರು.
ಶಾಲೆಯ ಶಿಕ್ಷಕರಿಂದ ಹಿ.ಮ.ಹರ್ಷ ಮತ್ತು ಮಮತಾ ದಂಪತಿಯನ್ನು ಸನ್ಮಾನಿಸಲಾಯಿತು.