ಹೊಸಪೇಟೆ (ವಿಜಯನಗರ): ಜಲಾನಯನ ಪ್ರದೇಶದಲ್ಲಿ ಮಳೆ ನಿಂತಿರುವುದರಿಂದ ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು ಬುಧವಾರ ಭಾರಿ ಪ್ರಮಾಣದಲ್ಲಿ ತಗ್ಗಿದೆ.
ಸದ್ಯ ಅಣೆಕಟ್ಟೆಗೆ 70,000 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಮಂಗಳವಾರ 1,09,760 ಕ್ಯುಸೆಕ್ ಒಳಹರಿವು ಇತ್ತು. ಸೋಮವಾರ ಒಂದುವರೆ ಲಕ್ಷ ಕ್ಯುಸೆಕ್ ಇತ್ತು. ಎರಡು ದಿನಗಳಿಂದ ಸತತವಾಗಿ ಒಳಹರಿವು ಇಳಿಕೆಯ ಹಾದಿಯಲ್ಲಿದೆ.
ಒಳಹರಿವು ತಗ್ಗಿರುವುದರಿಂದ ನದಿಗೆ ನೀರು ಹರಿಸುವುದು ಕಡಿಮೆಯಾಗಿದೆ. ಸದ್ಯ 12 ಕ್ರಸ್ಟ್ಗೇಟ್ಗಳನ್ನು ಎರಡು ಅಡಿ ಮೇಲೆ ತೆಗೆದು 40,000 ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಮಂಗಳವಾರ 22 ಕ್ರಸ್ಟ್ಗೇಟ್ಗಳಿಂದ 70,000 ಕ್ಯುಸೆಕ್ ನೀರು ಹರಿಸಲಾಗಿತ್ತು. ಈಗಾಗಲೇ ಜಲಾಶಯ ಸಂಪೂರ್ಣ ತುಂಬಿದೆ.
ಮಳೆ ಮಾಯ: ನಾಲ್ಕೈದು ದಿನಗಳಿಂದ ಜಿಲ್ಲೆಯಾದ್ಯಂತ ಮಳೆ ಮಾಯವಾಗಿದೆ. ದಿನವಿಡೀ ಬಿಸಿಲು ಇರುತ್ತಿದೆ. ಆಗಾಗ ಕಾರ್ಮೋಡ ಕವಿದು, ಅಲ್ಲಲ್ಲಿ ಕೆಲ ನಿಮಿಷ ತುಂತುರು ಮಳೆಯಷ್ಟೇ ಆಗುತ್ತಿದೆ.