ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗಿ ಭದ್ರತೆಯಲ್ಲಿ ಹೊಸಪೇಟೆಗೆ ಉಪರಾಷ್ಟ್ರಪತಿ ನಾಯ್ಡು ಆಗಮನ

Last Updated 20 ಆಗಸ್ಟ್ 2021, 15:01 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಭಾರಿ ಬಿಗಿ ಭದ್ರತೆಯಲ್ಲಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಶುಕ್ರವಾರ ಸಂಜೆ ನಗರಕ್ಕೆ ಬಂದಿಳಿದರು.

ತುಂತುರು ಮಳೆಯ ನಡುವೆ ವಾಯುಸೇನೆಯ ವಿಶೇಷ ಹೆಲಿಕ್ಯಾಪ್ಟರ್‌ನಲ್ಲಿ ನಗರದ ತಾಲ್ಲೂಕು ಕ್ರೀಡಾಂಗಣದ ಹೆಲಿಪ್ಯಾಡ್‌ಗೆ ಬಂದಿಳಿದ ವೆಂಕಯ್ಯ ನಾಯ್ಡು ಅವರನ್ನುಸಚಿವ ಆನಂದ್ ಸಿಂಗ್ ಬರಮಾಡಿಕೊಂಡರು. ಬಳಿಕ ರಸ್ತೆ ಮಾರ್ಗವಾಗಿ ತುಂಗಭದ್ರಾ ಜಲಾಶಯಕ್ಕೆ ತೆರಳಿದರು. ರಸ್ತೆಯ ಎರಡು ಬದಿಯಲ್ಲಿ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಸಾರ್ವಜನಿಕ ಸಂಚಾರ ನಿರ್ಬಂಧಿಸಿ, ಜೀರೋ ಟ್ರಾಫಿಕ್‌ ಮಾಡಲಾಗಿತ್ತು. ಇದರಿಂದಾಗಿ ಕೊಪ್ಪಳ, ವಿಜಯಪುರ ಹಾಗೂ ಆ ಜಿಲ್ಲೆಗಳಿಂದ ನಗರಕ್ಕೆ ಬರುವ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಉಪರಾಷ್ಟ್ರಪತಿಯವರ ಕಾರಿನೊಂದಿಗೆ ವಿವಿಧ ಇಲಾಖೆಯ ಅಧಿಕಾರಿಗಳು, ಭದ್ರತಾ ಅಧಿಕಾರಿಗಳ ವಾಹನಗಳ ದಂಡು ಹಿಂಬಾಲಿಸಿತು. ಜನ ರಸ್ತೆಬದಿಯಲ್ಲಿ ನಿಂತು ಸಾಲು ಸಾಲು ವಾಹನಗಳು ಹೋಗುತ್ತಿರುವುದನ್ನು ನೋಡಿದರು. ಕೆಲವರು ಮೊಬೈಲ್‌ನಲ್ಲಿ ಛಾಯಾಚಿತ್ರ ತೆಗೆದರು. ವಿಡಿಯೊ ಮಾಡಿದರು.

ಉಪರಾಷ್ಟ್ರಪತಿಯವರ ಭದ್ರತೆಗೆ ಎಸ್ಪಿ, ಆರು ಜನ ಡಿವೈಎಸ್ಪಿ, 24 ಇನ್‌ಸ್ಪೆಕ್ಟರ್‌, 600 ಕಾನ್‌ಸ್ಟೆಬಲ್‌ಗಳನ್ನು ಭದ್ರತೆಗೆ ನೇಮಕ ಮಾಡಲಾಗಿದೆ. ಹೀಗಾಗಿ ಎಲ್ಲೆಡೆ ಖಾಕಿ ಪಡೆ ಕಂಡು ಬಂತು.

ಉಪರಾಷ್ಟ್ರಪತಿ ಅವರು ನಿಗದಿತ ಸಮಯಕ್ಕಿಂತ 20 ನಿಮಿಷ ಮುಂಚೆ ಬಂದರು. 5.20ಕ್ಕೆ ಅವರ ಲ್ಯಾಂಡಿಂಗ್ ಸಮಯವಿತ್ತು. ಅವರು ಐದು ಗಂಟೆಗೆ ಲ್ಯಾಂಡ್ ಆದರು.

ತಾಲ್ಲೂಕಿನ ಕಮಲಾಪುರ ಸಮೀಪದ ಪ್ರವಾಸೋದ್ಯಮ ಇಲಾಖೆಗೆ ಸೇರಿದ ಮಯೂರ ಭುವನೇಶ್ವರಿ ಹೋಟೆಲ್‌ನಲ್ಲಿ ಕುಟುಂಬ ಸಮೇತ ಉಪರಾಷ್ಟ್ರಪತಿ ವಾಸ್ತವ್ಯ ಮಾಡುವರು. ಹೋಟೆಲ್‌ನಲ್ಲಿ ಉತ್ತರ ಕರ್ನಾಟಕ ಹಾಗೂ ಆಂಧ್ರ ಶೈಲಿಯ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ.

ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಅವರ ಪತ್ನಿ ಎಂ.ಉಷಾ ಅವರು ಶುಕ್ರವಾರ ಸಂಜೆ ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದರು
ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಅವರ ಪತ್ನಿ ಎಂ.ಉಷಾ ಅವರು ಶುಕ್ರವಾರ ಸಂಜೆ ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದರು

ವೆಂಕಯ್ಯ ನಾಯ್ಡು ಅವರ ಭೇಟಿ ವಿವರ

ಆ. 21ರಂದು ಬೆಳಿಗ್ಗೆ 10ಕ್ಕೆ ಹಂಪಿಗೆ ಭೇಟಿ ಕೊಟ್ಟು ಅಲ್ಲಿನ ಸ್ಮಾರಕಗಳನ್ನು ಕಣ್ತುಂಬಿಕೊಂಡು ಆ ದಿನ ರಾತ್ರಿ ಅಲ್ಲಿಯೇ ಉಳಿದುಕೊಳ್ಳುವರು. ಆ. 22ರಂದು ಬೆಳಿಗ್ಗೆ 8.25ಕ್ಕೆ ಕಮಲಾಪುರದಿಂದ ರಸ್ತೆ ಮಾರ್ಗವಾಗಿ ನಗರದ ತಾಲ್ಲೂಕು ಕ್ರೀಡಾಂಗಣದ ಹೆಲಿಪ್ಯಾಡ್‌ಗೆ ಬರುವರು. ಅಲ್ಲಿಂದ ಪುನಃ ಹೆಲಿಕ್ಯಾಪ್ಟರ್‌ನಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಪಯಣ ಬೆಳೆಸುವರು.

ಹಂಪಿ ಭೇಟಿ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಎಲ್ಲ ನೌಕರರು, ಬ್ಯಾಟರಿಚಾಲಿತ ವಾಹನ ಚಾಲಕರು, ಭದ್ರತಾ ಸಿಬ್ಬಂದಿ ಹಾಗೂ ವಿರೂಪಾಕ್ಷೇಶ್ವರ ದೇವಸ್ಥಾನದ ಅರ್ಚಕರಿಗೆ ಗುರುವಾರವೇ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ರಸ್ತೆಯ ಎರಡು ಬದಿ ಬೆಳೆದಿದ್ದ ಮುಳ್ಳು, ಕಂಟಿ ತೆರವುಗೊಳಿಸಿ, ಗುಂಡಿಗಳನ್ನು ಮುಚ್ಚಲಾಗಿದೆ. ನಗರದಿಂದ ಕಮಲಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT