<p><strong>ಹೊಸಪೇಟೆ</strong> (ವಿಜಯನಗರ): ಮೈಸೂರು ದಸರಾದ ಬೇರುಗಳು ಹರಡಿರುವುದು ಹಂಪಿಯಲ್ಲಿ. ಗತಕಾಲದ ಆಚರಣೆ ಹೇಗಿದ್ದಿರಬಹುದು ಎಂಬುದನ್ನು ಮತ್ತೆ ನೆನಪಿಸುವಂತಹ ದೇವರೇ ಬನ್ನಿ ಮುಡಿಯುವ ಆಚರಣೆ ಹಂಪಿ ಸಮೀಪದ ನಾಗೇನಹಳ್ಳಿಯ ಧರ್ಮದಗುಡ್ಡದಲ್ಲಿ ಬುಧವಾರ ಸಂಜೆ ಸಂಭ್ರಮದಿಂದ ನಡೆಯಿತು.</p><p>ಧರ್ಮದಗುಡ್ಡದ ಚನ್ನಬಸವೇಶ್ವರ ದೇವಸ್ಥಾನ ವಿಜಯನಗರ ಕಾಲದಲ್ಲೇ ಸ್ಥಾಪನೆಯಾದ ದೇವಾಲಯವಾಗಿದ್ದು, ಮಹಾನವಮಿಯ ದಿನದಂದೇ ದೇವಸ್ಥಾನದ ಜಾತ್ರೆ ನಡೆಯುತ್ತದೆ. ಅದೇ ವೇಳೆಗೆ ಹೊಸಪೇಟೆ ಮತ್ತು ಕಮಲಾಪುರ ಭಾಗದಿಂದ ಪಲ್ಲಕ್ಕಿಗಳಲ್ಲಿ ಬರುವ ದೇವತೆಗಳು ಚನ್ನಬಸವೇಶ್ವರನ ಜತೆಯಲ್ಲಿ ಶಮೀವೃಕ್ಷಕ್ಕೆ ಐದು ಬಾರಿ ಸುತ್ತು ಹಾಕಿ ಬನ್ನಿ ಮುಡಿಯುವುದು ಇಲ್ಲಿ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದ್ದು, ಬುಧವಾರ 20 ಸಾವಿರಕ್ಕೂ ಅಧಿಕ ಭಕ್ತರ ಸಮ್ಮುಖದಲ್ಲಿ ಈ ಆಚರಣೆ ವೈಭವದಿಂದ ನೆರವೇರಿತು.</p><p>ವಿಜಯನಗರ ಕಾಲದಲ್ಲಿ ಮಹಾನ್ ಶೂರ ಸೇನಾನಿಗಳಾಗಿದ್ದ ಬೇಡ ನಾಯಕರು ಮಹಾನವಮಿ ದಿಬ್ಬದ ಮೇಲೆ ಕುಳಿತು ವೀಕ್ಷಿಸುತ್ತಿದ್ದ ರಾಜರ ಮುಂದೆ ತಮ್ಮ ಶಕ್ತಿ ಪ್ರದರ್ಶನ ಮಾಡಿ ಮುಂದಕ್ಕೆ ಸಾಗಿ ಬನ್ನಿ ಸ್ವೀಕರಿಸುತ್ತಿದ್ದರು. ಅದೇ ಪರಂಪರೆ ಈಗ ಕೊಂಚ ಬದಲಾವಣೆಗೊಂಡು ಕೇರಿಗಳ ದೇವತೆಗಳನ್ನು ಪಲ್ಲಕ್ಕಿಯಲ್ಲಿ ಹೊತ್ತು ಧರ್ಮದಗುಡ್ಡಕ್ಕೆ ತರುವ ರೂಪದಲ್ಲಿ ನಡೆಯುತ್ತದೆ. ದೇವತೆಗಳ ಅಣ್ಣನೆಂದೇ ಪರಿಗಣಿಸಲಾದ ಚನ್ನಬಸವೇಶ್ವರ, ಆತನ ತಂಗಿ ನಿಜಲಿಂಗಮ್ಮ ಅವರು ಮೊದಲಿಗೆ ಬನ್ನಿ ಮುಡಿದು, ಬಳಿಕ ಕೇರಿಗಳ ದೇವತೆಗಳು ಬನ್ನಿ ಮುಡಿಯುತ್ತವೆ. ಈ ಸಂಪ್ರದಾಯಕ್ಕೆ ‘ಅಮ್ಮನವರ ಬನ್ನಿ’ ಎಂದು ಹೆಸರು. ಬುಧವಾರ ಈ ಸಂಪ್ರದಾಯ ಕೇರಿಗಳ ಯಜಮಾನರ ಸಮ್ಮುಖದಲ್ಲಿ ಶ್ರದ್ಧೆಯಿಂಧ ನಡೆಯಿತು.</p><p>ಸಂಜೆಯಿಂದ ಸಂಭ್ರಮ: ಹೊಸಪೇಟೆಯ ಏಳು ಕೇರಿಗಳಿಂದ ಪಲ್ಲಕ್ಕಿಗಳು ಮಧ್ಯಾಹ್ನದ ನಂತರ ಸುಮಾರು 5 ಕಿ.ಮೀ.ದೂರದ ನಾಗೇನಹಳ್ಳಿಯ ಧರ್ಮದಗುಡ್ಡದತ್ತ ಧಾವಿಸಿದವು. ಪಲ್ಲಕ್ಕಿಗಳನ್ನು ಹೊತ್ತ ಯುವಕರು ಬಹುತೇಕ ಓಡುತ್ತಲೇ ಧರ್ಮಗುಡ್ಡದತ್ತ ಸಾಗುವುದು ಇಲ್ಲಿ ವಿಶೇಷವಾಗಿ ಕಾಣಿಸುತ್ತದೆ. ಚನ್ನಬಸವೇಶ್ವರನ ಉತ್ಸವ ಮೂರ್ತಿಯನ್ನು ದೇವಸ್ಥಾನದಲ್ಲಿ ಸಜ್ಜುಗೊಳಿಸಿದ ಪಲ್ಲಕ್ಕಿಯಲ್ಲಿ ಇರಿಸಲಾಗಿದ್ದರೆ, ಅದರ ಪಕ್ಕದಲ್ಲಿ ಬಾಣದಕೇರಿಯ ನಿಜಲಿಂಗಮ್ಮ, ಅದರ ಪಕ್ಕದಲ್ಲಿ ಮ್ಯಾಸಕೇರಿಯ ಹುಲಿಗೆಮ್ಮ, ಕೊಂಗಮ್ಮ ಪಲ್ಲಕ್ಕಿ ಇರಿಸಲಾಯಿತು. ಇನ್ನೊಂದು ಬದಿಯಲ್ಲಿ ತಳವಾರಕೇರಿಯ ರಾಂಪುರ ದುರ್ಗಮ್ಮ ದೇವಿಯ ಪಲ್ಲಕ್ಕಿ ಇರಿಸಲಾಯಿತು. </p><p>ಚನ್ನಬಸವೇಶ್ವರ ಗರ್ಭಗುಡಿಯ ಸಮೀಪ ಇಷ್ಟೇ ಪಲ್ಲಕ್ಕಿಗಳನ್ನು ಇಡಲು ಸ್ಥಳ ಇರುವ ಕಾರಣ, ಉಳಿದ ಕೇರಿಗಳ ಪಲ್ಲಕ್ಕಿಗಳನ್ನು ಸಮೀಪದ ನಿಜಲಿಂಗಮ್ಮ ಗುಡಿಯ ಮುಂದೆ ಸಾಲಾಗಿ ಇರಿಸಲಾಯಿತು. ಬಳಿಕ ಚನ್ನಬಸವೇಶ್ವರನ ಪಲ್ಲಕ್ಕಿ ಸಮೀಪದ ಶಮೀವೃಕ್ಷದತ್ತ ತೆರಳಿದಂತೆ ಉಳಿದ ಪಲ್ಲಕ್ಕಿಗಳೂ ಅದನ್ನು ಹಿಂಬಾಲಿಸಿದವು.</p><p>ಶಮೀವೃಕ್ಷಕ್ಕೆ ಎಲ್ಲಾ ಪಲ್ಲಕ್ಕಿಗಳೂ ಐದು ಸುತ್ತ ಬರುತ್ತವೆ. ಬನ್ನಿಯನ್ನು ಆಗ ಪಲ್ಲಕ್ಕಿಗಳಿಗೆ ಇಡಲಾಗುತ್ತದೆ. ಇದನ್ನೇ ಸ್ವತಃ ದೇವತೆಗಳೇ ಬನ್ನಿ ಮುಡಿಯುವ ಸಂಪ್ರದಾಯ ಎಂದು ಕರೆಯಲಾಗುತ್ತದೆ. ಸಾವಿರಾರು ಜನರು ಶಮೀವೃಕ್ಷದ ಸುತ್ತ ನೆರೆದಿದ್ದಂತೆಯೇ ಪಲ್ಲಕ್ಕಿಗಳ ಮೆರವಣಿಗೆ, ಬನ್ನಿ ಮುಡಿಯುವ ಸಂಭ್ರಮ ಗೋಧೂಳಿ ಸಮಯದಲ್ಲಿ ಸಂಪನ್ನವಾಯಿತು.</p><p>ಹೊಸಪೇಟೆಯ ಕೇರಿಗಳಿಂದ ಪಲ್ಲಕ್ಕಿಗಳು ಸಂಭ್ರಮದಿಂದ ಧರ್ಮದಗುಡ್ಡಕ್ಕೆ ಬಂದಿದ್ದವು. ಮ್ಯಾಸಕೇರಿಯ ಹುಲಿಗೆಮ್ಮ, ಕೊಂಗಮ್ಮ, ತಳವಾರಕೇರಿಯ ರಾಂಪುರ ದುರ್ಗಮ್ಮ, ಚಿತ್ರಕೇರಿಯ ತಾಯಮ್ಮ, ಬಾಣದಕೇರಿಯ ನಿಜಲಿಂಗಮ್ಮ, ಉಕ್ಕಡಕೇರಿಯ ಜಲದುರ್ಗಮ್ಮ ಹಾಗೂ ಜಂಬಾನಳ್ಳಿಕೇರಿಯ ತಾಯಮ್ಮ ದೇವಿಯ ಪಲ್ಲಕ್ಕಿ ಮೆರವಣಿಗೆ ಅತ್ಯಾಕರ್ಷಕವಾಗಿತ್ತು. ಮತ್ತೊಂದೆಡೆ ಕಮಲಾಪುರ ಭಾಗದಿಂದ ಮನ್ಮಥಕೇರಿಯ ನರೆಗಲ್ಲಮ್ಮ, ಬಂಡೆಕೇರಿಯ ಹುಲಿಗೆಮ್ಮ, ಇನ್ನೊಂದು ಕೇರಿಯ ತಾಯಮ್ಮ ಸಹಿತ ನಾಲ್ಕು ಪಲ್ಲಕ್ಕಿಗಳು ಬಂದಿದ್ದವು. ನರಸಾಪುರದಿಂದ ನಿಜಲಿಂಗಪ್ಪ ದೇವಿಯ ಪಲ್ಲಕ್ಕಿ ಬಂದಿದ್ದರೆ, ಬಸವನದುರ್ಗದಿಂದ ನಿಜಲಿಂಗಮ್ಮ, ಹೊಸಪೇಟೆ ಛಲವಾದಿಕೇರಿಯಿಂದ ಎಲ್ಲಮ್ಮ, ಕೊಂಡನಾಯಕಹಳ್ಳಿಯ ಪಲ್ಲಕ್ಕಿ, ಅನಂತಶಯನಗುಡಿಗಳ ಹುಲಿಗೆಮ್ಮ ಪಲ್ಲಕ್ಕಿಗಳೂ ಬಂದಿದ್ದವು. ಬನ್ನಿ ಮುಡಿದ ಬಳಿಕ ದೇವತೆಗಳು ಅಲ್ಲಿ ಒಂದು ಕ್ಷಣವೂ ನಿಲ್ಲದೆ ತಮ್ಮ ಕೇರಿಗಳತ್ತ ತೆರಳುತ್ತವೆ. ಹೀಗೆ ರಾತ್ರಿ 8ರ ಮೊದಲು ಎಲ್ಲಾ ದೇವತೆಗಳೂ ತಮ್ಮ ಕೇರಿಗಳು ಮತ್ತು ನೆಲೆಗಳತ್ತ ತೆರಳಿದವು.</p><p>ಹೊಸಪೇಟೆಯ ಏಳು ಕೇರಿಗಳು ಯಜಮಾನರು (ಮುಖಂಡರು), ಕಮಲಾಪುರ ಇತರ ಭಾಗಗಳ ಯಜಮಾನರು ಈ ಪಲ್ಲಕ್ಕಿಗಳ ನೇತೃತ್ವ ವಹಿಸಿದ್ದರು. ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ಅಧ್ಯಕ್ಷ ಎಚ್.ಎನ್.ಎಫ್. ಮೊಹಮ್ಮದ್ ಇಮಾಂ ನಿಯಾಜಿ, ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಉಪಾಧ್ಯಕ್ಷ ರಮೇಶ್ ಗುಪ್ತ, ಎಸ್ಪಿ ಎಸ್.ಜಾಹ್ನವಿ, ಕೊಪ್ಪಳದ ಸಮಾಜ ಸೇವಕಿ ರಶ್ಮಿ ಹಿಟ್ನಾಳ್ ಇತರರು ಬಂದಿದ್ದರು. ಡಿವೈಎಸ್ಪಿ ಟಿ.ಮಂಜುನಾಥ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.</p><p>ನಾಳೆ ಉೂರಬನ್ನಿ: ಧರ್ಮದಗುಡ್ಡದಿಂದ ಮರಳಿದ ದೇವತೆಗಳು ಕೇರಿಗಳಲ್ಲೇ ಬುಧವಾರ ರಾತ್ರಿಯಿಡೀ ಕೋಲಾಟ, ಭಜನೆ, ಡೊಳ್ಳುಕುಣಿತ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಚಕ್ಕಡಿಗಳ ಚಕ್ರ ಬಿಚ್ಚಿ ಕಟ್ಟುವ ಸ್ಪರ್ಧೆ, ಕುಸ್ತಿಗಳಂತಹ ಸಾಹಸಮಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗುತ್ತವೆ. ಗುರುವಾರ ಬೆಳಿಗ್ಗೆ ದೇವುತೆಗಳು ತಮ್ಮ ಸ್ವಸ್ಥಾನ ಸೇರಿದರೆ, ಜನರು ಊರಬನ್ನಿ ಆಚರಿಸುತ್ತಾರೆ.</p><p>ಪಿತೃಪಕ್ಷದಲ್ಲಿ ದೇವತೆಗಳ ಸುತ್ತಾಟ: ಶಕ್ತಿದೇವತೆಗಳೆಂದರೆ ಉಗ್ರ ಸ್ವರೂಪಿಗಳು. ಪಿತೃಪಕ್ಷದಲ್ಲಿ ಮಾತ್ರ ಅವುಗಳಿಗೆ ತಮ್ಮ ಕ್ಷೇತ್ರದಲ್ಲಿ ಸುತ್ತಾಡಲು ಅವಕಾಶ ಇದೆ. ನವರಾತ್ರಿಯ ಒಂಭತ್ತು ದಿನಗಳು ಅವುಗಳಿಗೆ ತೊಟ್ಟಿಲ ಸೇವೆ ನಡೆಯುತ್ತದೆ. ಆಯುಧ ಪೂಜೆಯ ದಿನ ಮಾತ್ರ ತಮ್ಮಕ್ಷೇತ್ರ ಬಿಟ್ಟು ಹೊರಹೋಗಲು ಅವಕಾಶ ಇದೆ. ಮಹಾಲಯ ಅಮಾವಾಸ್ಯೆಯಂದು ಶಕ್ತಿ ದೇವತೆಗೆಳನ್ನು ತೊಟ್ಟಿಲ ಸೇವೆಗೆ ಕೂಡಿಸುವುದು, ತೊಟ್ಟಿಲು ತೂಗುವುದು, ಒಂಭತ್ತೂ ದಿನ ದೇವಿಯೆ ಪ್ರತಿಮೆಗಳಿಗೆ ನಿತ್ಯ ಒಂದು ಹೊಸ ರೇಷ್ಮೆ ಸೀರೆ ತೊಡಿಸಿ ಅಲಂಕಾರ ಮಾಡುವುದು, ಇಡೀ ರಾತ್ರಿ ದೇವಿಯ ಮುಂದೆ ಸಾಂಪ್ರದಾಯಿಕ ಹಾಡುಗಳಿಂದ ದೇವಿಯನ್ನು ಆರಾಧಿಸುವ ಸಂಪ್ರದಾಯ ಹೊಸಪೇಟೆಯ ಕೇರಿಗಳಲ್ಲಿ ನಡೆಯುತ್ತ ಬಂದಿದೆ. ಈ ಬಾರಿಯೂ ಅದೆಲ್ಲವೂ ಸಂಪ್ರದಾಯದಂತೆ ನಡೆದಿತ್ತು.</p><p>ಈ ಸಮಯದಲ್ಲಿ ಪಲ್ಲಕ್ಕಿ ಮೆರವಣಿಗೆ ಕೇರಿಗಳಲ್ಲಿ, ನಗರದಲ್ಲಿ ನಡೆಯುತ್ತದೆ. ಭಕ್ತರ ಮನೆಗಳ ಮುದೆ ತೆರಳುವ ದೇವತೆಗಳು ಭಕ್ತರಿಗೆ ಆಶೀರ್ವಾದ ಮಾಡುತ್ತದೆ. ಈ ವೇಳೆ ಭಕ್ತರು, ಮನೆಯಲ್ಲಿರುವ ದವಸ-ಧಾನ್ಯ, ಹೂಹಣ್ಣು ಹಾಗೂ ಕಾಣಿಕೆ ಸಲ್ಲಿಸಿ, ಭಕ್ತಿ ಸಮರ್ಪಣೆ ಮಾಡುತ್ತಾರೆ. ಈ ವೇಳೆ ಮಹಿಳೆಯರು ಸೋಬಾನ ಪದಗಳು ಹಾಡಿ, ಭಕ್ತಿಭಾವ ಮೆರೆಯುತ್ತಾರೆ. ಈ ನವರಾತ್ರಿಯ ಸಮಯದಲ್ಲಿ ಇದೆಲ್ಲದಕ್ಕೂ ಹೊಸಪೇಟೆ ನಗರ, ಕೇರಿಗಳು ಸಾಕ್ಷಿಯಾಗಿದ್ದವು. ಕಮಲಾಪುರ ಭಾಗದಲ್ಲೂ ಇದೇ ಸಂಪ್ರದಾಯ ನಡೆದಿತ್ತು. ಈ ಆಚರಣೆಯ ಕೊನೆಯಲ್ಲಿ ಧರ್ಮದಗುಡ್ಡಕ್ಕೆ ಪಲ್ಲಕ್ಕಿ ಮೆರವಣಿಗೆ, ಬನ್ನಿ ಮುಡಿಯವು ಆಚರಣೆ ನಡೆಯಿತು.</p> <p><strong>‘ಗುಡ್ಡದ ಅಪಾಯಕಾರಿ ಬಂಡೆ ಏರಲು ಬಿಡಬೇಡಿ’</strong></p><p>ಧರ್ಮದಗುಡ್ಡದ ಚನ್ನಬಸವೇಶ್ವರ ದೇವಸ್ಥಾನದ ಮೇಲ್ಭಾಗದಲ್ಲಿ ಬಂಡೆಗಲ್ಲುಗಳಿದ್ದು, ಅದರ ತುತ್ತು ತುದಿಯಲ್ಲಿ ನಾಲ್ಕಾರು ಯುವಕರು ಹತ್ತಿ ಜಾತ್ರೆಯ ವೀಕ್ಷಣೆ ಮಾಡುತ್ತಿರುವುದು ಬುಧವಾರ ಸಂಜೆ ಕಾಣಿಸಿತು. ಅದು ಅತ್ಯಂತ ಅಪಾಯಕಾರಿ ಸ್ಥಳ, ಒಂದು ವೇಳೆ ಆ ಯುವಕರು ಕಾಲುಜಾರಿ ಬಿದ್ದರೆ ಅವರು ಮಾತ್ರವಲ್ಲದೆ, ಕೆಳಗಿರುವ ಹತ್ತಾರು ಮಂದಿ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ, ಮುಂದಿನ ವರ್ಷದಿಂದ ಇದಕ್ಕೆ ಅವಕಾಶ ಕೊಡಬಾರದು ಎಂಧು ಸ್ಥಳೀಯ ಹಲವು ಮುಖಂಡರು ಮನವಿ ಮಾಡಿದರು.</p><p>–––</p><p>ಉತ್ಸವದ ಹಿನ್ನೆಲೆ</p><p>ವಿಜಯನಗರ ಕಾಲದಲ್ಲಿ ಬೇಡ ನಾಯಕರು ಸಾಮ್ರಾಜ್ಯದ ರಕ್ಷಕರಾಗಿದ್ದರು. ಇಡೀ ದೇಶದಲ್ಲಿ ಒಂದು ವ್ಯವಸ್ಥಿತ, ಸದಾ ಸಿದ್ಧ ಸ್ಥಿತಿಯಲ್ಲಿದ್ದ ಸೈನ್ಯ ಎಂದರೆ ವಿಜಯನಗರ ಕಾಲದ ಸೈನ್ಯವೇ ಆಗಿತ್ತು. ಅದುವರೆಗೆ ಅಂತಹ ಸಿದ್ಧ ಸೈನ್ಯ ವ್ಯವಸ್ಥೆ ದೇಶದಲ್ಲಿ ಇರಲೇ ಇಲ್ಲ ಎನ್ನಲಾಗುತ್ತಿದೆ. ಇದರಿಂದಾಗಿಯೇ ಕೃಷ್ಣದೇವರಾಯ ಮಾಡಿದಂತಹ ಎಲ್ಲಾ 40 ಯುದ್ಧದಲ್ಲೂ ಜಯಶಾಲಿಯಾದ ಎಂದು ಇತಿಹಾಸ ಹೇಳುತ್ತದೆ. ಹೀಗೆ ವಿಜಯನಗರ ಕಾಲದ ಸೈನ್ಯದಲ್ಲಿ ಪ್ರಮುಖ ಪಾತ್ರ ವಹಿಸಿದವರೇ ಬೇಡ ನಾಯಕರು ಅಂದರೆ ವಾಲ್ಮೀಕಿ ನಾಯಕ ಸಮುದಾಯದವರು. </p><p>‘1565ರಲ್ಲಿ ರಕ್ಕಸತಂಗಡಿ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯದ ಪತನದ ನಂತರ ಏಳು ಸಾವಿರ ಬೇಡರ ಪಡೆ ಏಳು ಕೇರಿಗಳಾಗಿ ಮಾರ್ಪಾಟಾದವು. ಪ್ರತಿಯೊಂದು ಕೇರಿಯಲ್ಲೂ ಹೆಣ್ಣು ದೇವತೆಗಳನ್ನು (ಶಕ್ತಿ ದೇವತೆ) ಸ್ಥಾಪನೆ ಮಾಡಿದರು. ಆಗಿನ ಕಾಲದಲ್ಲಿ ಮುಂದುವರಿದ ಜನಾಂಗದವರು ಬೇಡ ಜನಾಂಗದವರನ್ನು ತಮ್ಮ ದೇವಾಲಯಗಳಿಗೆ ಬಿಟ್ಟುಕೊಡುತ್ತಿರಲಿಲ್ಲ. ಹೀಗಾಗಿ ತಾವೇ ತಮ್ಮ ದೇವತೆಗಳನ್ನು ಸ್ಥಾಪಿಸಿಕೊಂಡರು’ ಎಂದು ವಿವರಣೆ ನೀಡುತ್ತಾರೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ತಾರಿಹಳ್ಳಿ ಹನುಮಂತಪ್ಪ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ</strong> (ವಿಜಯನಗರ): ಮೈಸೂರು ದಸರಾದ ಬೇರುಗಳು ಹರಡಿರುವುದು ಹಂಪಿಯಲ್ಲಿ. ಗತಕಾಲದ ಆಚರಣೆ ಹೇಗಿದ್ದಿರಬಹುದು ಎಂಬುದನ್ನು ಮತ್ತೆ ನೆನಪಿಸುವಂತಹ ದೇವರೇ ಬನ್ನಿ ಮುಡಿಯುವ ಆಚರಣೆ ಹಂಪಿ ಸಮೀಪದ ನಾಗೇನಹಳ್ಳಿಯ ಧರ್ಮದಗುಡ್ಡದಲ್ಲಿ ಬುಧವಾರ ಸಂಜೆ ಸಂಭ್ರಮದಿಂದ ನಡೆಯಿತು.</p><p>ಧರ್ಮದಗುಡ್ಡದ ಚನ್ನಬಸವೇಶ್ವರ ದೇವಸ್ಥಾನ ವಿಜಯನಗರ ಕಾಲದಲ್ಲೇ ಸ್ಥಾಪನೆಯಾದ ದೇವಾಲಯವಾಗಿದ್ದು, ಮಹಾನವಮಿಯ ದಿನದಂದೇ ದೇವಸ್ಥಾನದ ಜಾತ್ರೆ ನಡೆಯುತ್ತದೆ. ಅದೇ ವೇಳೆಗೆ ಹೊಸಪೇಟೆ ಮತ್ತು ಕಮಲಾಪುರ ಭಾಗದಿಂದ ಪಲ್ಲಕ್ಕಿಗಳಲ್ಲಿ ಬರುವ ದೇವತೆಗಳು ಚನ್ನಬಸವೇಶ್ವರನ ಜತೆಯಲ್ಲಿ ಶಮೀವೃಕ್ಷಕ್ಕೆ ಐದು ಬಾರಿ ಸುತ್ತು ಹಾಕಿ ಬನ್ನಿ ಮುಡಿಯುವುದು ಇಲ್ಲಿ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದ್ದು, ಬುಧವಾರ 20 ಸಾವಿರಕ್ಕೂ ಅಧಿಕ ಭಕ್ತರ ಸಮ್ಮುಖದಲ್ಲಿ ಈ ಆಚರಣೆ ವೈಭವದಿಂದ ನೆರವೇರಿತು.</p><p>ವಿಜಯನಗರ ಕಾಲದಲ್ಲಿ ಮಹಾನ್ ಶೂರ ಸೇನಾನಿಗಳಾಗಿದ್ದ ಬೇಡ ನಾಯಕರು ಮಹಾನವಮಿ ದಿಬ್ಬದ ಮೇಲೆ ಕುಳಿತು ವೀಕ್ಷಿಸುತ್ತಿದ್ದ ರಾಜರ ಮುಂದೆ ತಮ್ಮ ಶಕ್ತಿ ಪ್ರದರ್ಶನ ಮಾಡಿ ಮುಂದಕ್ಕೆ ಸಾಗಿ ಬನ್ನಿ ಸ್ವೀಕರಿಸುತ್ತಿದ್ದರು. ಅದೇ ಪರಂಪರೆ ಈಗ ಕೊಂಚ ಬದಲಾವಣೆಗೊಂಡು ಕೇರಿಗಳ ದೇವತೆಗಳನ್ನು ಪಲ್ಲಕ್ಕಿಯಲ್ಲಿ ಹೊತ್ತು ಧರ್ಮದಗುಡ್ಡಕ್ಕೆ ತರುವ ರೂಪದಲ್ಲಿ ನಡೆಯುತ್ತದೆ. ದೇವತೆಗಳ ಅಣ್ಣನೆಂದೇ ಪರಿಗಣಿಸಲಾದ ಚನ್ನಬಸವೇಶ್ವರ, ಆತನ ತಂಗಿ ನಿಜಲಿಂಗಮ್ಮ ಅವರು ಮೊದಲಿಗೆ ಬನ್ನಿ ಮುಡಿದು, ಬಳಿಕ ಕೇರಿಗಳ ದೇವತೆಗಳು ಬನ್ನಿ ಮುಡಿಯುತ್ತವೆ. ಈ ಸಂಪ್ರದಾಯಕ್ಕೆ ‘ಅಮ್ಮನವರ ಬನ್ನಿ’ ಎಂದು ಹೆಸರು. ಬುಧವಾರ ಈ ಸಂಪ್ರದಾಯ ಕೇರಿಗಳ ಯಜಮಾನರ ಸಮ್ಮುಖದಲ್ಲಿ ಶ್ರದ್ಧೆಯಿಂಧ ನಡೆಯಿತು.</p><p>ಸಂಜೆಯಿಂದ ಸಂಭ್ರಮ: ಹೊಸಪೇಟೆಯ ಏಳು ಕೇರಿಗಳಿಂದ ಪಲ್ಲಕ್ಕಿಗಳು ಮಧ್ಯಾಹ್ನದ ನಂತರ ಸುಮಾರು 5 ಕಿ.ಮೀ.ದೂರದ ನಾಗೇನಹಳ್ಳಿಯ ಧರ್ಮದಗುಡ್ಡದತ್ತ ಧಾವಿಸಿದವು. ಪಲ್ಲಕ್ಕಿಗಳನ್ನು ಹೊತ್ತ ಯುವಕರು ಬಹುತೇಕ ಓಡುತ್ತಲೇ ಧರ್ಮಗುಡ್ಡದತ್ತ ಸಾಗುವುದು ಇಲ್ಲಿ ವಿಶೇಷವಾಗಿ ಕಾಣಿಸುತ್ತದೆ. ಚನ್ನಬಸವೇಶ್ವರನ ಉತ್ಸವ ಮೂರ್ತಿಯನ್ನು ದೇವಸ್ಥಾನದಲ್ಲಿ ಸಜ್ಜುಗೊಳಿಸಿದ ಪಲ್ಲಕ್ಕಿಯಲ್ಲಿ ಇರಿಸಲಾಗಿದ್ದರೆ, ಅದರ ಪಕ್ಕದಲ್ಲಿ ಬಾಣದಕೇರಿಯ ನಿಜಲಿಂಗಮ್ಮ, ಅದರ ಪಕ್ಕದಲ್ಲಿ ಮ್ಯಾಸಕೇರಿಯ ಹುಲಿಗೆಮ್ಮ, ಕೊಂಗಮ್ಮ ಪಲ್ಲಕ್ಕಿ ಇರಿಸಲಾಯಿತು. ಇನ್ನೊಂದು ಬದಿಯಲ್ಲಿ ತಳವಾರಕೇರಿಯ ರಾಂಪುರ ದುರ್ಗಮ್ಮ ದೇವಿಯ ಪಲ್ಲಕ್ಕಿ ಇರಿಸಲಾಯಿತು. </p><p>ಚನ್ನಬಸವೇಶ್ವರ ಗರ್ಭಗುಡಿಯ ಸಮೀಪ ಇಷ್ಟೇ ಪಲ್ಲಕ್ಕಿಗಳನ್ನು ಇಡಲು ಸ್ಥಳ ಇರುವ ಕಾರಣ, ಉಳಿದ ಕೇರಿಗಳ ಪಲ್ಲಕ್ಕಿಗಳನ್ನು ಸಮೀಪದ ನಿಜಲಿಂಗಮ್ಮ ಗುಡಿಯ ಮುಂದೆ ಸಾಲಾಗಿ ಇರಿಸಲಾಯಿತು. ಬಳಿಕ ಚನ್ನಬಸವೇಶ್ವರನ ಪಲ್ಲಕ್ಕಿ ಸಮೀಪದ ಶಮೀವೃಕ್ಷದತ್ತ ತೆರಳಿದಂತೆ ಉಳಿದ ಪಲ್ಲಕ್ಕಿಗಳೂ ಅದನ್ನು ಹಿಂಬಾಲಿಸಿದವು.</p><p>ಶಮೀವೃಕ್ಷಕ್ಕೆ ಎಲ್ಲಾ ಪಲ್ಲಕ್ಕಿಗಳೂ ಐದು ಸುತ್ತ ಬರುತ್ತವೆ. ಬನ್ನಿಯನ್ನು ಆಗ ಪಲ್ಲಕ್ಕಿಗಳಿಗೆ ಇಡಲಾಗುತ್ತದೆ. ಇದನ್ನೇ ಸ್ವತಃ ದೇವತೆಗಳೇ ಬನ್ನಿ ಮುಡಿಯುವ ಸಂಪ್ರದಾಯ ಎಂದು ಕರೆಯಲಾಗುತ್ತದೆ. ಸಾವಿರಾರು ಜನರು ಶಮೀವೃಕ್ಷದ ಸುತ್ತ ನೆರೆದಿದ್ದಂತೆಯೇ ಪಲ್ಲಕ್ಕಿಗಳ ಮೆರವಣಿಗೆ, ಬನ್ನಿ ಮುಡಿಯುವ ಸಂಭ್ರಮ ಗೋಧೂಳಿ ಸಮಯದಲ್ಲಿ ಸಂಪನ್ನವಾಯಿತು.</p><p>ಹೊಸಪೇಟೆಯ ಕೇರಿಗಳಿಂದ ಪಲ್ಲಕ್ಕಿಗಳು ಸಂಭ್ರಮದಿಂದ ಧರ್ಮದಗುಡ್ಡಕ್ಕೆ ಬಂದಿದ್ದವು. ಮ್ಯಾಸಕೇರಿಯ ಹುಲಿಗೆಮ್ಮ, ಕೊಂಗಮ್ಮ, ತಳವಾರಕೇರಿಯ ರಾಂಪುರ ದುರ್ಗಮ್ಮ, ಚಿತ್ರಕೇರಿಯ ತಾಯಮ್ಮ, ಬಾಣದಕೇರಿಯ ನಿಜಲಿಂಗಮ್ಮ, ಉಕ್ಕಡಕೇರಿಯ ಜಲದುರ್ಗಮ್ಮ ಹಾಗೂ ಜಂಬಾನಳ್ಳಿಕೇರಿಯ ತಾಯಮ್ಮ ದೇವಿಯ ಪಲ್ಲಕ್ಕಿ ಮೆರವಣಿಗೆ ಅತ್ಯಾಕರ್ಷಕವಾಗಿತ್ತು. ಮತ್ತೊಂದೆಡೆ ಕಮಲಾಪುರ ಭಾಗದಿಂದ ಮನ್ಮಥಕೇರಿಯ ನರೆಗಲ್ಲಮ್ಮ, ಬಂಡೆಕೇರಿಯ ಹುಲಿಗೆಮ್ಮ, ಇನ್ನೊಂದು ಕೇರಿಯ ತಾಯಮ್ಮ ಸಹಿತ ನಾಲ್ಕು ಪಲ್ಲಕ್ಕಿಗಳು ಬಂದಿದ್ದವು. ನರಸಾಪುರದಿಂದ ನಿಜಲಿಂಗಪ್ಪ ದೇವಿಯ ಪಲ್ಲಕ್ಕಿ ಬಂದಿದ್ದರೆ, ಬಸವನದುರ್ಗದಿಂದ ನಿಜಲಿಂಗಮ್ಮ, ಹೊಸಪೇಟೆ ಛಲವಾದಿಕೇರಿಯಿಂದ ಎಲ್ಲಮ್ಮ, ಕೊಂಡನಾಯಕಹಳ್ಳಿಯ ಪಲ್ಲಕ್ಕಿ, ಅನಂತಶಯನಗುಡಿಗಳ ಹುಲಿಗೆಮ್ಮ ಪಲ್ಲಕ್ಕಿಗಳೂ ಬಂದಿದ್ದವು. ಬನ್ನಿ ಮುಡಿದ ಬಳಿಕ ದೇವತೆಗಳು ಅಲ್ಲಿ ಒಂದು ಕ್ಷಣವೂ ನಿಲ್ಲದೆ ತಮ್ಮ ಕೇರಿಗಳತ್ತ ತೆರಳುತ್ತವೆ. ಹೀಗೆ ರಾತ್ರಿ 8ರ ಮೊದಲು ಎಲ್ಲಾ ದೇವತೆಗಳೂ ತಮ್ಮ ಕೇರಿಗಳು ಮತ್ತು ನೆಲೆಗಳತ್ತ ತೆರಳಿದವು.</p><p>ಹೊಸಪೇಟೆಯ ಏಳು ಕೇರಿಗಳು ಯಜಮಾನರು (ಮುಖಂಡರು), ಕಮಲಾಪುರ ಇತರ ಭಾಗಗಳ ಯಜಮಾನರು ಈ ಪಲ್ಲಕ್ಕಿಗಳ ನೇತೃತ್ವ ವಹಿಸಿದ್ದರು. ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ಅಧ್ಯಕ್ಷ ಎಚ್.ಎನ್.ಎಫ್. ಮೊಹಮ್ಮದ್ ಇಮಾಂ ನಿಯಾಜಿ, ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಉಪಾಧ್ಯಕ್ಷ ರಮೇಶ್ ಗುಪ್ತ, ಎಸ್ಪಿ ಎಸ್.ಜಾಹ್ನವಿ, ಕೊಪ್ಪಳದ ಸಮಾಜ ಸೇವಕಿ ರಶ್ಮಿ ಹಿಟ್ನಾಳ್ ಇತರರು ಬಂದಿದ್ದರು. ಡಿವೈಎಸ್ಪಿ ಟಿ.ಮಂಜುನಾಥ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.</p><p>ನಾಳೆ ಉೂರಬನ್ನಿ: ಧರ್ಮದಗುಡ್ಡದಿಂದ ಮರಳಿದ ದೇವತೆಗಳು ಕೇರಿಗಳಲ್ಲೇ ಬುಧವಾರ ರಾತ್ರಿಯಿಡೀ ಕೋಲಾಟ, ಭಜನೆ, ಡೊಳ್ಳುಕುಣಿತ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಚಕ್ಕಡಿಗಳ ಚಕ್ರ ಬಿಚ್ಚಿ ಕಟ್ಟುವ ಸ್ಪರ್ಧೆ, ಕುಸ್ತಿಗಳಂತಹ ಸಾಹಸಮಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗುತ್ತವೆ. ಗುರುವಾರ ಬೆಳಿಗ್ಗೆ ದೇವುತೆಗಳು ತಮ್ಮ ಸ್ವಸ್ಥಾನ ಸೇರಿದರೆ, ಜನರು ಊರಬನ್ನಿ ಆಚರಿಸುತ್ತಾರೆ.</p><p>ಪಿತೃಪಕ್ಷದಲ್ಲಿ ದೇವತೆಗಳ ಸುತ್ತಾಟ: ಶಕ್ತಿದೇವತೆಗಳೆಂದರೆ ಉಗ್ರ ಸ್ವರೂಪಿಗಳು. ಪಿತೃಪಕ್ಷದಲ್ಲಿ ಮಾತ್ರ ಅವುಗಳಿಗೆ ತಮ್ಮ ಕ್ಷೇತ್ರದಲ್ಲಿ ಸುತ್ತಾಡಲು ಅವಕಾಶ ಇದೆ. ನವರಾತ್ರಿಯ ಒಂಭತ್ತು ದಿನಗಳು ಅವುಗಳಿಗೆ ತೊಟ್ಟಿಲ ಸೇವೆ ನಡೆಯುತ್ತದೆ. ಆಯುಧ ಪೂಜೆಯ ದಿನ ಮಾತ್ರ ತಮ್ಮಕ್ಷೇತ್ರ ಬಿಟ್ಟು ಹೊರಹೋಗಲು ಅವಕಾಶ ಇದೆ. ಮಹಾಲಯ ಅಮಾವಾಸ್ಯೆಯಂದು ಶಕ್ತಿ ದೇವತೆಗೆಳನ್ನು ತೊಟ್ಟಿಲ ಸೇವೆಗೆ ಕೂಡಿಸುವುದು, ತೊಟ್ಟಿಲು ತೂಗುವುದು, ಒಂಭತ್ತೂ ದಿನ ದೇವಿಯೆ ಪ್ರತಿಮೆಗಳಿಗೆ ನಿತ್ಯ ಒಂದು ಹೊಸ ರೇಷ್ಮೆ ಸೀರೆ ತೊಡಿಸಿ ಅಲಂಕಾರ ಮಾಡುವುದು, ಇಡೀ ರಾತ್ರಿ ದೇವಿಯ ಮುಂದೆ ಸಾಂಪ್ರದಾಯಿಕ ಹಾಡುಗಳಿಂದ ದೇವಿಯನ್ನು ಆರಾಧಿಸುವ ಸಂಪ್ರದಾಯ ಹೊಸಪೇಟೆಯ ಕೇರಿಗಳಲ್ಲಿ ನಡೆಯುತ್ತ ಬಂದಿದೆ. ಈ ಬಾರಿಯೂ ಅದೆಲ್ಲವೂ ಸಂಪ್ರದಾಯದಂತೆ ನಡೆದಿತ್ತು.</p><p>ಈ ಸಮಯದಲ್ಲಿ ಪಲ್ಲಕ್ಕಿ ಮೆರವಣಿಗೆ ಕೇರಿಗಳಲ್ಲಿ, ನಗರದಲ್ಲಿ ನಡೆಯುತ್ತದೆ. ಭಕ್ತರ ಮನೆಗಳ ಮುದೆ ತೆರಳುವ ದೇವತೆಗಳು ಭಕ್ತರಿಗೆ ಆಶೀರ್ವಾದ ಮಾಡುತ್ತದೆ. ಈ ವೇಳೆ ಭಕ್ತರು, ಮನೆಯಲ್ಲಿರುವ ದವಸ-ಧಾನ್ಯ, ಹೂಹಣ್ಣು ಹಾಗೂ ಕಾಣಿಕೆ ಸಲ್ಲಿಸಿ, ಭಕ್ತಿ ಸಮರ್ಪಣೆ ಮಾಡುತ್ತಾರೆ. ಈ ವೇಳೆ ಮಹಿಳೆಯರು ಸೋಬಾನ ಪದಗಳು ಹಾಡಿ, ಭಕ್ತಿಭಾವ ಮೆರೆಯುತ್ತಾರೆ. ಈ ನವರಾತ್ರಿಯ ಸಮಯದಲ್ಲಿ ಇದೆಲ್ಲದಕ್ಕೂ ಹೊಸಪೇಟೆ ನಗರ, ಕೇರಿಗಳು ಸಾಕ್ಷಿಯಾಗಿದ್ದವು. ಕಮಲಾಪುರ ಭಾಗದಲ್ಲೂ ಇದೇ ಸಂಪ್ರದಾಯ ನಡೆದಿತ್ತು. ಈ ಆಚರಣೆಯ ಕೊನೆಯಲ್ಲಿ ಧರ್ಮದಗುಡ್ಡಕ್ಕೆ ಪಲ್ಲಕ್ಕಿ ಮೆರವಣಿಗೆ, ಬನ್ನಿ ಮುಡಿಯವು ಆಚರಣೆ ನಡೆಯಿತು.</p> <p><strong>‘ಗುಡ್ಡದ ಅಪಾಯಕಾರಿ ಬಂಡೆ ಏರಲು ಬಿಡಬೇಡಿ’</strong></p><p>ಧರ್ಮದಗುಡ್ಡದ ಚನ್ನಬಸವೇಶ್ವರ ದೇವಸ್ಥಾನದ ಮೇಲ್ಭಾಗದಲ್ಲಿ ಬಂಡೆಗಲ್ಲುಗಳಿದ್ದು, ಅದರ ತುತ್ತು ತುದಿಯಲ್ಲಿ ನಾಲ್ಕಾರು ಯುವಕರು ಹತ್ತಿ ಜಾತ್ರೆಯ ವೀಕ್ಷಣೆ ಮಾಡುತ್ತಿರುವುದು ಬುಧವಾರ ಸಂಜೆ ಕಾಣಿಸಿತು. ಅದು ಅತ್ಯಂತ ಅಪಾಯಕಾರಿ ಸ್ಥಳ, ಒಂದು ವೇಳೆ ಆ ಯುವಕರು ಕಾಲುಜಾರಿ ಬಿದ್ದರೆ ಅವರು ಮಾತ್ರವಲ್ಲದೆ, ಕೆಳಗಿರುವ ಹತ್ತಾರು ಮಂದಿ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ, ಮುಂದಿನ ವರ್ಷದಿಂದ ಇದಕ್ಕೆ ಅವಕಾಶ ಕೊಡಬಾರದು ಎಂಧು ಸ್ಥಳೀಯ ಹಲವು ಮುಖಂಡರು ಮನವಿ ಮಾಡಿದರು.</p><p>–––</p><p>ಉತ್ಸವದ ಹಿನ್ನೆಲೆ</p><p>ವಿಜಯನಗರ ಕಾಲದಲ್ಲಿ ಬೇಡ ನಾಯಕರು ಸಾಮ್ರಾಜ್ಯದ ರಕ್ಷಕರಾಗಿದ್ದರು. ಇಡೀ ದೇಶದಲ್ಲಿ ಒಂದು ವ್ಯವಸ್ಥಿತ, ಸದಾ ಸಿದ್ಧ ಸ್ಥಿತಿಯಲ್ಲಿದ್ದ ಸೈನ್ಯ ಎಂದರೆ ವಿಜಯನಗರ ಕಾಲದ ಸೈನ್ಯವೇ ಆಗಿತ್ತು. ಅದುವರೆಗೆ ಅಂತಹ ಸಿದ್ಧ ಸೈನ್ಯ ವ್ಯವಸ್ಥೆ ದೇಶದಲ್ಲಿ ಇರಲೇ ಇಲ್ಲ ಎನ್ನಲಾಗುತ್ತಿದೆ. ಇದರಿಂದಾಗಿಯೇ ಕೃಷ್ಣದೇವರಾಯ ಮಾಡಿದಂತಹ ಎಲ್ಲಾ 40 ಯುದ್ಧದಲ್ಲೂ ಜಯಶಾಲಿಯಾದ ಎಂದು ಇತಿಹಾಸ ಹೇಳುತ್ತದೆ. ಹೀಗೆ ವಿಜಯನಗರ ಕಾಲದ ಸೈನ್ಯದಲ್ಲಿ ಪ್ರಮುಖ ಪಾತ್ರ ವಹಿಸಿದವರೇ ಬೇಡ ನಾಯಕರು ಅಂದರೆ ವಾಲ್ಮೀಕಿ ನಾಯಕ ಸಮುದಾಯದವರು. </p><p>‘1565ರಲ್ಲಿ ರಕ್ಕಸತಂಗಡಿ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯದ ಪತನದ ನಂತರ ಏಳು ಸಾವಿರ ಬೇಡರ ಪಡೆ ಏಳು ಕೇರಿಗಳಾಗಿ ಮಾರ್ಪಾಟಾದವು. ಪ್ರತಿಯೊಂದು ಕೇರಿಯಲ್ಲೂ ಹೆಣ್ಣು ದೇವತೆಗಳನ್ನು (ಶಕ್ತಿ ದೇವತೆ) ಸ್ಥಾಪನೆ ಮಾಡಿದರು. ಆಗಿನ ಕಾಲದಲ್ಲಿ ಮುಂದುವರಿದ ಜನಾಂಗದವರು ಬೇಡ ಜನಾಂಗದವರನ್ನು ತಮ್ಮ ದೇವಾಲಯಗಳಿಗೆ ಬಿಟ್ಟುಕೊಡುತ್ತಿರಲಿಲ್ಲ. ಹೀಗಾಗಿ ತಾವೇ ತಮ್ಮ ದೇವತೆಗಳನ್ನು ಸ್ಥಾಪಿಸಿಕೊಂಡರು’ ಎಂದು ವಿವರಣೆ ನೀಡುತ್ತಾರೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ತಾರಿಹಳ್ಳಿ ಹನುಮಂತಪ್ಪ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>