ಹೊಸಪೇಟೆ : ಜಿ20 ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ (ಸಿಡಬ್ಲ್ಯುಜಿ) 3ನೇ ಸಭೆಯಲ್ಲಿ ಪಾಲ್ಗೊಂಡಿರುವ ಪ್ರತಿನಿಧಿಗಳು ಹಾಗೂ ಅವರ ಕಾರ್ಯದರ್ಶಿಗಳು, ಸಹಾಯಕರು ಬುಧವಾರ ಬೆಳಿಗ್ಗೆ ಹಂಪಿಯ ಮಹಾನವಮಿ ದಿಬ್ಬ ಸಮೀಪ ಸಾಮೂಹಿಕ ಯೋಗಾಭ್ಯಾಸ ಮಾಡಿದರು.
ವಿಶ್ವಕ್ಕೆ ಭಾರತದ ಅದ್ಭುತ ಕೊಡುಗೆ ಯೋಗ, ಇದು ಪ್ರಾಚೀನ ಋಷಿ ಮುನಿಗಳ ಬಳುವಳಿ. ನಿತ್ಯ ಯೋಗಾಭ್ಯಾಸ ಮಾಡಿದರೆ ರೋಗಗಳಿಂದ ದೂರ ಉಳಿಯಬಹುದು, ಹಲವು ಬಗೆಯ ರೋಗಗಳು ದೇಹವನ್ನು ಬಾಧಿಸಿದ್ದರೆ ಅದನ್ನು ನಿವಾರಿಸಬಹುದು ಎಂಬ ಸಂದೇಶವನ್ನು ಶಿಬಿರದ ವೇಳೆ ನೀಡಲಾಯಿತು.
ಜಿ20ನ ಗುಂಪಿನ ಎಲ್ಲಾ ದೇಶಗಳ ಪ್ರತಿನಿಧಿಗಳು, ಆಹ್ವಾನಿತ ಒಂಭತ್ತು ದೇಶಗಳು ಹಾಗೂ ಏಳು ಅಂತರರಾಷ್ಟ್ರೀಯ ಸಂಘಟನೆಗಳ ಪ್ರತಿನಿಧಿಗಳು ಸಿಡಬ್ಲ್ಯುಜಿ ಸಭೆಯಲ್ಲಿ ಪಾಲ್ಗೊಂಡಿದ್ದು. ಅವರ ಕಾರ್ಯದರ್ಶಿಗಳು, ಆಪ್ತ ಸಹಾಯಕರು ಸೇರಿದಂತೆ ಸುಮಾರು 200 ಮಂದಿ ಪಾಲ್ಗೊಂಡಿದ್ದಾರೆ. ಬಹುತೇಕ ಮಂದಿ ಯೋಗ ಶಿಬಿರದಲ್ಲಿ ಪಾಲ್ಗೊಂಡು ಯೋಗದ ಪ್ರಾಥಮಿಕ ಮಾಹಿತಿ ಪಡೆದುಕೊಂಡರು ಹಾಗೂ ತಾವೂ ಯೋಗಾಭ್ಯಾಸ ಮಾಡಿ ತಮ್ಮ ತಮ್ಮ ದೇಶಗಳಿಗೆ ಯೋಗದ ಸಂದೇಶ ರವಾನಿಸುವ ಆಶಯ ವ್ಯಕ್ತಪಡಿಸಿದರು.
ನೃತ್ಯದ ಮೋಡಿ: ಮಂಗಳವಾರ ಸಂಜೆ ಹಂಪಿಯ ವಿವಿಧ ಸ್ಮಾರಕಗಳನ್ನು ನೋಡಿದ ಪ್ರತಿನಿಧಿಗಳಿಗೆ ವಿರೂಪಾಕ್ಷ ದೇವಸ್ಥಾನ ಮುಂಭಾಗದ ಎದುರು ಬಸವಣ್ಣ ಮಂಟಪದ ಸಮೀಪ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಾಟ್ಯತರಂಗಿಣಿ ತಂಡದವರ ಭರತನಾಟ್ಯ, ಕೂಚುಪುಡಿ, ಮೋಹಿನಿಯಾಟ್ಟಂ ಮತ್ತು ಒಡಿಸ್ಸಿ ನೃತ್ಯಗಳು ರಂಜಿಸಿದವು. ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್, ರಿಚಾ ಮೋಹನ್, ಕೇಂದ್ರದ ಸಂಸ್ಕೃತಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಿಲ್ಲಿ ಪಾಂಡೆ ಇದ್ದರು.
ಇಂದು ಮುಕ್ತಾಯ: ಜಿ20 ಸಿಡಬ್ಲ್ಯುಜಿ ಸಭೆ ಬುಧವಾರ ಕೊನೆಗೊಳ್ಳುತ್ತಿದ್ದು, ಪ್ರತಿನಿಧಿಗಳು ಮಧ್ಯಾಹ್ನದ ಬಳಿಕ ನಿರ್ಗಮಿಸಲಿದ್ದಾರೆ. ಗುರುವಾರದಿಂದ 3ನೇ ಶೆರ್ಪಾ ಸಭೆ ಹಂಪಿಯಲ್ಲಿ ಆರಂಭವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.