ವಿಜಯಪುರ: ಡ್ರಗ್ ಮಾಫಿಯಾ ವಿರುದ್ಧ ಕಠಿಣ ಕಾನೂನು ರೂಪಿಸಲು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ನಗರದ ಅಂಚೆಕಚೇರಿ ಬಳಿ ಮುಖ್ಯಮಂತ್ರಿಗೆ ಪತ್ರ ಬರೆಯುವುದರ ಮೂಲಕ ಪತ್ರ ಚಳವಳಿ ನಡೆಸಿದರು.
ಎಬಿವಿಪಿ ಪ್ರಾಂತ ಸಂಘಟನಾ ಕಾರ್ಯದರ್ಶಿ ಮಂಜುನಾಥ ಮಿಸೆ ಮಾತನಾಡಿ, ಮಾದಕ ವಸ್ತುಗಳ ಬಳಕೆ ಇಂದು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ವ್ಯಾಪಿಸಿದೆ. ಈ ಜಾಲಕ್ಕೆ ಶಾಲಾ, ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಬಲಿಯಾಗುತ್ತಿರುವುದು ಅಪಾಯಕಾರಿಯಾವಾಗಿದೆ ಎಂದರು.
ಡ್ರಗ್ಸ್ ದಂದೆಯಲ್ಲಿ ಪ್ರಭಾವಿಗಳು ಭಾಗಿಯಾಗಿರುವುದರಿಂದ ಅಂಥವರನ್ನು ಮಟ್ಟ ಹಾಕುವ ಸವಾಲು ರಾಜ್ಯ ಸರ್ಕಾರದ ಮುಂದಿದೆ. ಇದಕ್ಕಾಗಿ ಪ್ರಬಲವಾದ ಕಾನೂನನ್ನು ರೂಪಿಸುವುದೊಂದೇ ಪರಿಹಾರ. ಸರ್ಕಾರ ನಿಷ್ಪಕ್ಷಪಾತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯ ಸಹ-ಕಾರ್ಯದರ್ಶಿ ಸಚಿನ್ ಕುಳಗೇರಿ ಮಾತನಾಡಿ, ಈ ದೇಶದ ಯುವಕರು ಸರಿಯಾದ ಮಾರ್ಗವನ್ನು ಆರಿಸಿಕೊಳ್ಳಬೇಕು ಮತ್ತು ಮಾದಕವಸ್ತು ಮುಕ್ತ ಆರೋಗ್ಯಕರ ಭಾರತ ರೂಪಿಸುವತ್ತ ಕೆಲಸ ಮಾಡಬೇಕು ಎಂದರು.
ನಗರ ಸಂಘಟನಾ ಕಾರ್ಯದರ್ಶಿ ಬ್ರಹ್ಮಾನಂದ ಚಿತ್ರಗಾರ, ನಗರ ಸಹ ಕಾರ್ಯದರ್ಶಿ ಅಕ್ಷಯ ಯಾದವಾಡ, ಮಂಜುನಾಥ ಹತ್ತಿ, ವಿಜಯಕುಮಾರ ಕೊಟ್ಟರಗಸ್ತಿ, ಆನಂದ ಕುಂಬಾರ, ಚೇತನ ಮಠ, ಮಾಳಿಂಗರಾಯ ಪಾಲ್ಗೊಂಡಿದ್ದರು.