ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಡ್ ಸ್ಟೋರೇಜ್‌ಗೆ ಮೂರೇ ಅಡಿ ಬಾಕಿ!

ಎಂಟು ಬಾರಿ ಡೆಡ್ ಸ್ಟೋರೇಜ್ ಮಟ್ಟ ತಲುಪಿದ್ದ ಆಲಮಟ್ಟಿ ಜಲಾಶಯ
Published 9 ಜೂನ್ 2023, 16:00 IST
Last Updated 9 ಜೂನ್ 2023, 16:00 IST
ಅಕ್ಷರ ಗಾತ್ರ

ಚಂದ್ರಶೇಖರ ಕೋಳೇಕರ

ಆಲಮಟ್ಟಿ: ಆಲಮಟ್ಟಿ ಜಲಾಶಯದಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಭರ್ತಿ ಪ್ರಕ್ರಿಯೆ ಆರಂಭಗೊಂಡಿದ್ದು 2002 ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ 8 ಬಾರಿ ಡೆಡ್ ಸ್ಟೋರೇಜ್‌ಗಿಂತ ಕಡಿಮೆ ಮಟ್ಟಕ್ಕೆ ಜಲಾಶಯದ ಮಟ್ಟ ಕುಸಿದಿದೆ.

ಈ ವರ್ಷ ಜಲಾಶಯ ಡೆಡ್ ಸ್ಟೋರೇಜ್ ಮಟ್ಟ (ಅಂದರೆ 506.87 ಮೀ ಎತ್ತರಕ್ಕೆ) ತಲುಪಲು ಇನ್ನೂ ಒಂದು ಮೀಟರ್ (ಸುಮಾರು 3.1 ಅಡಿ) ಬಾಕಿಯಿದೆ.

ಜಲಾಶಯದ ಮೊದಲಿನ ನೀರಿನ ಸಂಗ್ರಹದ ಅಂಕಿ ಅಂಶಗಳನ್ನು ಗಮನಿಸಿದರೆ ಈ ವರ್ಷ ನೀರಿನ ಯಾವುದೇ ಆತಂಕದ ಸ್ಥಿತಿಗೆ ಇನ್ನೂ ತಲುಪಿಲ್ಲ.

8 ಬಾರಿ ಡೆಡ್ ಸ್ಟೋರೇಜ್: 2003, 2004, 2005, 2009, 2012, 2013, 2016 ಹಾಗೂ 2017 ರಲ್ಲಿ ಸೇರಿ ಒಟ್ಟು 8 ಬಾರಿ ಜಲಾಶಯ ತನ್ನ ಡೆಡ್ ಸ್ಟೋರೇಜ್ ಮಟ್ಟಕ್ಕಿಂತ ಕಡಿಮೆ ಮಟ್ಟಕ್ಕೆ ಇಳಿದಿದೆ.
ಆ ಸಂದರ್ಭಗಳಲ್ಲಿ ಡೆಡ್ ಸ್ಟೋರೇಜ್ ನೀರನ್ನು ಕುಡಿಯುವ ನೀರಿಗೆ ಬಳಸಿಕೊಳ್ಳಲಾಗಿದೆ. ಆಲಮಟ್ಟಿ ಜಲಾಶಯದಲ್ಲಿ 17.62 ಟಿಎಂಸಿ ಅಡಿಯಷ್ಟು ನೀರು ಡೆಡ್ ಸ್ಟೋರೇಜ್ ನೀರಿದೆ. ಆಲಮಟ್ಟಿ ಜಲಾಶಯದ ಡೆಡ್ ಸ್ಟೋರೇಜ್ ನೀರಿನಷ್ಟು (ಅಂದರೆ 17 ಟಿಎಂಸಿ ಅಡಿ) ಸಂಗ್ರಹ ಸಾಮರ್ಥ್ಯ ಜಲಾಶಯಗಳೇ ರಾಜ್ಯದ ಹಲವೆಡೆ ಇವೆ. ಇಡೀ ರಾಜ್ಯದಲ್ಲಿಯೇ ಹೆಚ್ಚು ಡೆಡ್ ಸ್ಟೋರೇಜ್ ಹೊಂದಿದ ಜಲಾಶಯಗಳಲ್ಲಿ ಆಲಮಟ್ಟಿಯೂ ಒಂದು. ಆದರೆ ಈ ವರ್ಷ ಡೆಡ್ ಸ್ಟೋರೇಜ್ ಮಟ್ಟಕ್ಕಿಂತಲೂ ಆಲಮಟ್ಟಿ ಜಲಾಶಯದಲ್ಲಿ 3.211 ಟಿಎಂಸಿ ಅಡಿ ಬಳಕೆಯೋಗ್ಯ ನೀರು ಇನ್ನೂ ಇದೆ.

2002 ಮತ್ತು 2017 ರಲ್ಲಿ ಕನಿಷ್ಠ ಮಟ್ಟ: 2003ರಲ್ಲಿ ಜಲಾಶಯದ ಮಟ್ಟ 502.72 ಮೀಗೆ ಕುಸಿದಿತ್ತು. ಆಗ ಜಲಾಶಯದಲ್ಲಿ ಕೇವಲ 8.777 ಟಿಎಂಸಿ ಅಡಿ ನೀರಿತ್ತು. ಇತ್ತೀಚಿನ ವರ್ಷಗಳಲ್ಲಿ 2017 ರಲ್ಲಿ ಜೂನ್ 7 ರಂದು ಜಲಾಶಯದ ಮಟ್ಟ 503.47 ಮೀ ಗೆ ತಲುಪಿತ್ತು. ಆಗ ಜಲಾಶಯದಲ್ಲಿ ಕೇವಲ 9.815 ಟಿಎಂಸಿ ಅಡಿ ನೀರಿತ್ತು. 2016 ರಲ್ಲಿ ಜಲಾಶಯದ ಮಟ್ಟ 505.31 ಮೀಗೆ, 2012 ರಲ್ಲಿ 505.98 ಮೀ ಗೆ, 2013 ರಲ್ಲಿ 506.19 ಮೀಗೆ, 2009 ರಲ್ಲಿ 506.94 ಮೀ ಗೆ, 2005 ರಲ್ಲಿ 506.33 ಮೀಗೆ, 2004 ರಲ್ಲಿ 506.20 ಮೀಗೆ ಜಲಾಶಯದ ಮಟ್ಟ ಕುಸಿದಿತ್ತು.

ಇನ್ನೂ ಆರಂಭವಾಗದ ಒಳಹರಿವು: ಪ್ರತಿ ವರ್ಷ ಜೂನ್ ಮೊದಲ ವಾರ ಜಲಾಶಯದ ಒಳಹರಿವು ಆರಂಭಗೊಳ್ಳುವುದು ಸಂಪ್ರದಾಯ. ಆದರೆ ಜೂನ್ ಕೊನೆಯ ವಾರ ಹಾಗೂ ಜುಲೈ ಮೊದಲ ವಾರದಲ್ಲಿಯೂ ಒಳಹರಿವು ಆರಂಭಗೊಂಡ ಉದಾಹರಣೆಗಳು ಇವೆ. ಇತ್ತೀಚಿನ ವರ್ಷಗಳಲ್ಲಿ 2019 ನೇ ಸಾಲಿನಲ್ಲಿ ಜುಲೈ 3 ರಂದು ಜಲಾಶಯಕ್ಕೆ ಒಳಹರಿವು ಆರಂಭಗೊಂಡಿತ್ತು. ತಡವಾಗಿ ಒಳಹರಿವು ಆರಂಭಗೊಂಡಿದ್ದರೂ ಆ ವರ್ಷ ಕೇವಲ 15 ದಿನದಲ್ಲಿ ಜಲಾಶಯ ಬಹುತೇಕ ಭರ್ತಿಯಾಗಿತ್ತು.

ಸದ್ಯ ಬಳಕೆಯೋಗ್ಯ 3.2 ಟಿಎಂಸಿ ಅಡಿ ನೀರು ಜಲಾಶಯದಲ್ಲಿದೆ. ಈ ವರ್ಷ ಗರಿಷ್ಠ ಪ್ರಮಾಣದಲ್ಲಿ ನೀರಿನ ಸದ್ಭಳಕೆ ಮಾಡಿಕೊಳ್ಳಲಾಗಿದೆ. ನೀರು ನಿರ್ವಹಣೆಯನ್ನು ವೈಜ್ಞಾನಿಕವಾಗಿ ಸಮರ್ಪಕವಾಗಿ ನಿರ್ವಹಿಸಲಾಗಿದೆ
–ಎಚ್. ಸುರೇಶ ಮುಖ್ಯ ಎಂಜಿನಿಯರ್

ವ್ಯವಸ್ಥಿತ ನೀರು ನಿರ್ವಹಣೆ

ಮೊದಲೆಲ್ಲಾ ನೀರಾವರಿ ಕ್ಷೇತ್ರ ಹೆಚ್ಚಿರಲಿಲ್ಲ. ಕೆರೆಗಳ ಭರ್ತಿ ಹಿನ್ನೀರಿನ ಬಳಕೆ ಕುಡಿಯುವ ನೀರಿನ ಜಾಕವೆಲ್‌ಗಳು ಕಡಿಮೆಯಿದ್ದವು. ಆದರೆ ಈ ವರ್ಷ ಜಿಲ್ಲೆಯ 169 ಕೆರೆಗಳನ್ನು ಎರಡು ಬಾರಿ ಭರ್ತಿ ಮಾಡಿ ನೀರಾವರಿಗೆ ಕಾಲುವೆಗಳ ಮೂಲಕ ಸಾಕಷ್ಟು ಕಾಲ ನೀರು ಹರಿಸಲಾಗಿದೆ. ಕಲಬುರಗಿ ಯಾದಗೀರಿ ಸೇರಿದಂತೆ ನಾನಾ ಜಿಲ್ಲೆಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ 1.6 ಟಿಎಂಸಿ ಅಡಿ ನೀರನ್ನು ನಾರಾಯಣಪುರ ಜಲಾಶಯಕ್ಕೆ ಹರಿಸಲಾಗಿದೆ. ಗರಿಷ್ಠ ಪ್ರಮಾಣದಲ್ಲಿ ನೀರಿನ ಸದ್ಭಳಕೆ ಮಾಡಿಕೊಳ್ಳಲಾಗಿದೆ. ನೀರು ನಿರ್ವಹಣೆಯನ್ನು ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ಕೆಬಿಜೆಎನ್‌ಎಲ್ ಹಿರಿಯ ಅಧಿಕಾರಿಗಳು ಸತತ ನಿಗಾ ಇಟ್ಟು ನೀರನ್ನು ನಿರ್ವಹಿಸಿದರ ಪರಿಣಾಮ ಗರಿಷ್ಠ ಪ್ರಮಾಣದ ನೀರು ಬಳಸಿಕೊಂಡರೂ ಆಲಮಟ್ಟಿ ಜಲಾಶಯದಲ್ಲಿ ಇನ್ನೂ ಬಳಕೆಯೋಗ್ಯ ನೀರು 3.2 ಟಿಎಂಸಿ ಅಡಿ ನೀರಿದೆ. ಸದ್ಯಕ್ಕೆ ನೀರಿನ ಆತಂಕದ ಸ್ಥಿತಿ ಅಂತೂ ಇಲ್ಲ. ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆ ಆರಂಭಗೊಂಡು ನೀರು ಹರಿದು ಬರಲು ಆರಂಭಗೊಂಡರೆ ಕೇವಲ 15 ರಿಂದ 20 ದಿನದಲ್ಲಿ ಜಲಾಶಯ ತನ್ನ ಗರಿಷ್ಠ ಮಟ್ಟಕ್ಕೆ ತಲುಪುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT