ವಿಜಯಪುರ: ವಿಜಯಪುರ ಜಿಲ್ಲೆಗೆ ಗೌರವಯುತವಾಗಿ ಸಚಿವ ಸ್ಥಾನ ಕೊಡಲೇಬೇಕು. ಒಂದು ವೇಳೆ ಜಿಲ್ಲೆಯನ್ನು ಕಡೆಗಣಿಸಿದರೆ ಸಚಿವ ಸಂಪುಟ ವಿಸ್ತರಣೆ ಬಳಿಕ ದೊಡ್ಡ ಶಾಕ್ ಕೊಡಬೇಕಾಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಚ್ಚರಿಕೆ ನೀಡಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳ್ಳೆಯವರನ್ನು, ಪ್ರಾಮಾಣಿಕರನ್ನು, ಹಿಂದುತ್ವ ಉಳ್ಳವರನ್ನು, ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಶಕ್ತಿಯುಳ್ಳವರನ್ನು ಸಚಿವರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.
ನನಗೆ ಹೈಕಮಾಂಡ್ ಮೇಲೆ ವಿಶ್ವಾಸವಿದೆ. ಯಡಿಯೂರಪ್ಪನವರು ಹೇಳಿದ್ದೇ ಎಲ್ಲವೂ ಆಗೋದಿಲ್ಲ. ಅವರು ಹೇಳಿದ್ದೇ ಆಗೋದಿದ್ದರೆ ಅವರನ್ನು ತೆಗೆಯುವ ಅವಶ್ಯಕತೆಯೂ ಇರಲಿಲ್ಲ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪನವರ ನೆರಳಿನಂತೆ ನಡೆದುಕೊಂಡರೆ, ಆ ನೆರಳನ್ನು ಕರ್ನಾಟಕದಿಂದಲೇ ನಾಶ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಿಗಮ, ಮಂಡಳಿ ಅಧ್ಯಕ್ಷ ಸ್ಥಾನಗಳು ಬದಲಾಗಬೇಕು. ಇದೇ ರೀತಿ ಮುಂದುವರಿದರೆ ನಾವೇ ಕಾಂಗ್ರೆಸ್ಗೆ ತಾಂಬೂಲ ಕೊಟ್ಟು ಮುಖ್ಯಮಂತ್ರಿ ಆಗಬನ್ನಿ ಎನ್ನುವ ಅನಿವಾರ್ಯ ಪರಿಸ್ಥಿತಿ ಉಂಟಾಗಲಿದೆ ಎಂದು ಯತ್ನಾಳ ಹೇಳಿದರು.
ಮಂತ್ರಿಗಿರಿಗಾಗಿ ದೆಹಲಿಗೆ ಹೋಗಿ ಲಾಬಿ ಮಾಡುವ ಅವಶ್ಯಕತೆ ನನಗೆ ಇಲ್ಲ. ರಾಜ್ಯ ಬಿಜೆಪಿ ಹಿರಿಯರಲ್ಲಿ ನಾನೂ ಒಬ್ಬ. ಅನಂತಕುಮಾರ್, ಯಡಿಯೂರಪ್ಪ, ಈಶ್ವರಪ್ಪ ಮತ್ತು ನನ್ನನ್ನು ಬಿಟ್ಟರೆ ಹಿರಿಯರು ಬೇರೆ ಯಾರಿದ್ದಾರೆ? ನಾನು ವಾಜಪೇಯಿ ಸರ್ಕಾರದಲ್ಲಿ ಮಂತ್ರಿಯಾದವನು. ಐದು ಬಾರಿ ಆರಿಸಿ ಬಂದಿದ್ದೇನೆ. ನಾನು ಕೆಲ ಸಮಯ ಪಕ್ಷ ಬಿಟ್ಟು ಹೋಗಿದ್ದೇ ಅಷ್ಟೇ. ಯಡಿಯೂರಪ್ಪ ಹೋಗಿರಲಿಲ್ಲವಾ? ಬೊಮ್ಮಾಯಿ ಮೂಲ ಬಿಜೆಪಿಗರಾ? ಅಥವಾ ಆರ್ಎಸ್ಎಸ್ನಲ್ಲಿ ಧ್ವಜ ಪ್ರಣಾಮ ಮಾಡಿದ್ದಾರಾ? ಎಂದು ಪ್ರಶ್ನಿಸಿದರು.
ಸ್ವಾಮೀಜಿಗಳ ವಿರುದ್ಧ ಗರಂ:
ಚಿತ್ರದುರ್ಗ ಮುರುಘಾಮಠದ ಸ್ವಾಮೀಜಿ, ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಮಠದಲ್ಲಿ ಕುಳಿತು ಬಿಜೆಪಿ ನಾಶವಾಗುತ್ತದೆ ಎಂದು ಹೇಳಿಕೆ ನೀಡಿರುವುದು ಖಂಡನೀಯ. ಮಠದಲ್ಲಿ ಕುಳಿತು ಧರ್ಮ ಭೋದನೆ ಮಾಡಬೇಕು, ಲವ್ ಜಿಹಾದ್, ಗೋ ಹತ್ಯೆ ಬಗ್ಗೆ ಮಾತಾಡಬೇಕು. ಸಮಾನ ನಾಗರಿಕತೆಗಾಗಿ, ಎರಡು ಮಕ್ಕಳು ಇದ್ದವರಿಗೆ ಸಬ್ಸಿಡಿ ಕೊಡುವ ಪರವಾಗಿ, ಅರಮನೆ ಮೈದಾನದಲ್ಲಿ ಮಠಾಧೀಶರು ಹೋರಾಟ ಮಾಡಬೇಕಿತ್ತೇ ಹೊರತು, ಒಬ್ಬ ವ್ಯಕ್ತಿ ಪರವಾಗಿ ಮಾತ್ರ ಮಾತನಾಡಬಾರದಿತ್ತು ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.