ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂದಗಿ ಕ್ಷೇತ್ರ; ಪ್ರತಿ ಬಾರಿ ಮತದಾರರನ ಗೆಲುವು!

ಏಳು ಬಾರಿ ಕೈ ವಶ, ಬಿಜೆಪಿ ನಾಲ್ಕು, ಜೆಡಿಎಸ್ ಎರಡು, ಜನತಾಪಕ್ಷ ಒಂದು ಸಲ ಜಯ
Last Updated 12 ಏಪ್ರಿಲ್ 2023, 12:37 IST
ಅಕ್ಷರ ಗಾತ್ರ

ಸಿಂದಗಿ: ಸಿಂದಗಿ ವಿಧಾನಸಭಾ ಮತಕ್ಷೇತ್ರ ತನ್ನದೇ ಆದ ವೈಶಿಷ್ಟ್ಯತೆಗಳನ್ನು ಹೊಂದಿದೆ. ಇಲ್ಲಿಯ ಮತದಾರರು ಪ್ರಜ್ಞಾವಂತರು. ಒಮ್ಮೆ ಗೆದ್ದವರನ್ನು ಮತ್ತೆ ಗೆಲ್ಲಿಸುವುದಿಲ್ಲ ಎಂಬ ಮಾತೂ ಇತ್ತು. ಮತದಾರರು ಗುಟ್ಟು ಬಿಟ್ಟು ಕೊಡದೇ ಚುನಾವಣಾ ಸಮೀಕ್ಷೆಗಳನ್ನು ಕೂಡ ಸುಳ್ಳು ಮಾಡುತ್ತ ಬಂದಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಮತದಾರರು ಗೆಲ್ಲುತ್ತಲೇ ಬಂದಿದ್ದಾರೆ.

1957 ರಿಂದ ಈ ವರೆಗೆ ಸಿಂದಗಿ ವಿಧಾನಸಭೆ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ಏಳು ಸಲ ತನ್ನ ಕೈ ವಶ ಮಾಡಿಕೊಂಡಿದ್ದರೆ, ಬಿಜೆಪಿ ನಾಲ್ಕು ಬಾರಿ, ಜೆಡಿಎಸ್ ಎರಡು ಬಾರಿ ಮತ್ತು ಜನತಾಪಕ್ಷ ಒಂದು ಸಲ ಜಯ ಸಾಧಿಸಿದೆ.

1957ರಲ್ಲಿ ಪಡಗಾನೂರದ ಶಂಕರಗೌಡ ಪಾಟೀಲರು ಗೆದ್ದು ಮತ್ತೆ ಸೋತು 1972 ರಲ್ಲಿ ಎರಡನೆಯ ಬಾರಿಗೆ ಆಯ್ಕೆಯಾದರು. ಅದೇ ರೀತಿ, ಕಲಕೇರಿಯ ಚನ್ನಪ್ಪ ದೇಸಾಯಿ 1962 ಮತ್ತು 1967 ರಲ್ಲಿ ಸತತ ಎರಡು ಸಲ ಗೆಲುವು ಸಾಧಿಸಿದ ಮೊದಲ ಅಭ್ಯರ್ಥಿಯಾಗಿದ್ದಾರೆ. 1994ರಲ್ಲಿ ಗೆದ್ದ ಎಂ.ಸಿ.ಮನಗೂಳಿ(ಜೆಡಿಎಸ್) ಅವರು ಸತತ 24 ವರ್ಷ ಸೋಲು ಅನುಭವಿಸಿದ್ದನ್ನು ಕಂಡ ಮತದಾರರು ಅವರ ಕೊನೆಯ ಚುನಾವಣೆ ಎಂಬ ಅನುಕಂಪದ ಅಲೆ ಎದ್ದು ಎರಡನೆಯ ಅವಧಿ ಗೆಲುವು ಸಾಧಿಸಿದರು.

1999 ರಲ್ಲಿ ಶರಣಪ್ಪ ಸುಣಗಾರ(ಕಾಂಗ್ರೆಸ್) ಒಂದು ಸಲ ಗೆದ್ದು, ಸತತ ಮೂರು ಬಾರಿ ಪರಾಭವಗೊಂಡರು. ಈ ಚುನಾವಣೆ ವಿಶೇಷತೆ ಹೊಂದಿತ್ತು. ಸಂಯುಕ್ತ ಜನತಾದಳದ 'ಬಿ’ ಫಾರ್ಮ್ ಎಂ.ಸಿ.ಮನಗೂಳಿ ಹಾಗೂ ಡಂಬಳ ಗ್ರಾಮದ ಶಂಕರಗೌಡ ಪಾಟೀಲ ಇವರಿಬ್ಬರಿಗೂ ನೀಡಲಾಗಿತ್ತು. ಆದರೆ, ಶಂಕರಗೌಡರು 'ಬಿ' ಫಾರ್ಮ್ ಅನ್ನು ಚುನಾವಣಾಧಿಕಾರಿಗೆ ಮೊದಲು ಸಲ್ಲಿಸಿದ್ದರು. ಹೀಗಾಗಿ, ಎಂ.ಸಿ.ಮನಗೂಳಿ ಅಂದಿನ ಚುನಾವಣೆಯಲ್ಲಿ ಪಕ್ಷೇತರರಾಗಿ ಉಳಿದುಕೊಂಡರು. ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸುಭಾಸ ಛಾಯಾಗೋಳ, ಪಕ್ಷೇತರರಾಗಿ ಅಶೋಕ ಶಾಬಾದಿ, ಉದ್ದಿಮೆದಾರ ರಾಜೂ ಗುತ್ತೇದಾರ ಘಟಾನುಘಟಿಗಳು ಸ್ಪರ್ಧಾ ಕಣದಲ್ಲಿ ಉಳಿದುಕೊಂಡಿದ್ದರು. ಇವರೆಲ್ಲರ ಮಧ್ಯೆ ಶರಣಪ್ಪ ಸುಣಗಾರ ಗೆದ್ದರು.

2004ರಲ್ಲಿ ಹಂದಿಗನೂರ ಗ್ರಾಮದ ಅಶೋಕ ಶಾಬಾದಿ ಬಿಜೆಪಿ ಅಭ್ಯರ್ಥಿಯಾದರು. ಈ ಚುನಾವಣೆಯಲ್ಲಿ ಅಭ್ಯರ್ಥಿ ಬಗ್ಗೆ ಮತದಾರರ ಸಹಾನುಭೂತಿ ಹೆಚ್ಚಿತ್ತು. ಅಲ್ಲದೇ, ಅಭ್ಯರ್ಥಿ ಖರ್ಚಿಗಾಗಿ ಮತದಾರರೇ ಹಣ ಸಂಗ್ರಹಿಸಿ ಗೆಲುವಿಗೆ ಕಾರಣರಾದರು. ಇದೇ ಚುನಾವಣೆಯಿಂದ ಬಿಜೆಪಿ ತನ್ನ ಖಾತೆ ತೆರೆಯಿತು. ಈ ಚುನಾವಣೆಯಲ್ಲಿ ಈಗಿನ ಕೆಪಿಸಿಸಿ ವಕ್ತಾರ, ಈ ಭಾಗದ ಅಹಿಂದ ಮುಖಂಡ ಎಸ್.ಎಂ.ಪಾಟೀಲ ಗಣಿಹಾರ ಬಹುಜನ ಸಮಾಜ ಪಾರ್ಟಿಯಿಂದ ಸ್ಪರ್ಧಿಸಿದ್ದರೆ, ಹೈಕೋರ್ಟ್ ವಕೀಲ ಎನ್.ಎಸ್.ಹಿರೇಮಠ ಸಮಾಜವಾದಿ ಪಕ್ಷದಿಂದ ಕಣದಲ್ಲಿದ್ದರು.

2008 ರಲ್ಲಿ ಸಿಂದಗಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸಿದ್ಧರಾಮ ಪಾಟೀಲ ಹೂವಿನಹಳ್ಳಿ ಅವರ ಹೆಸರು ಘೋಷಣೆಯಾಗಬಹುದೇನೋ ಎನ್ನುವಷ್ಟರಲ್ಲಿಯೇ ಕೊನೆಯ ಗಳಿಗೆಯಲ್ಲಿ ರಮೇಶ ಭೂಸನೂರ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆಯಾಯಿತು. ಶಾಸಕರೂ ಆದರು. ನಂತರ 2013 ರ ಚುನಾವಣೆಯಲ್ಲಿಯೂ ಸತತ ಎರಡನೆಯ ಬಾರಿಗೆ ಭೂಸನೂರ ಗೆಲುವು ಸಾಧಿಸಿದರು.

ರಮೇಶ ಭೂಸನೂರ 2018 ರಲ್ಲಿ ಎಂ.ಸಿ.ಮನಗೂಳಿ ವಿರುದ್ದ 9305 ಮತಗಳ ಅಂತರದಿಂದ ಪರಾಭವಗೊಂಡರು. ಆದರೆ, ಮನಗೂಳಿ 2021 ಜನವರಿ 28 ರಂದು ನಿಧನರಾದ ಕಾರಣ ನಂತರ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ರಮೇಶ ಭೂಸನೂರ ಎಂ.ಸಿ.ಮನಗೂಳಿಯವರ ಪುತ್ರ ಅಶೋಕ ಮನಗೂಳಿ(ಕಾಂಗ್ರೆಸ್ ಅಭ್ಯರ್ಥಿ) ಅವರನ್ನು 31,185 ಮತಗಳ ಅಂತರದಿಂದ ಸೋಲಿಸಿದರು.

ರಮೇಶ ಭೂಸನೂರ ಮೂರು ಬಾರಿ ವಿಧಾನಸಭೆಗೆ ಪ್ರವೇಶ ಮಾಡಿರುವುದು ಸಿಂದಗಿ ವಿಧಾನಸಭೆ ಮತಕ್ಷೇತ್ರದ ಇತಿಹಾಸದಲ್ಲಿ ದಾಖಲೆ ಸೃಷ್ಟಿಸಿತು.

ಚುನಾವಣಾ ವಿಶೇಷತೆ:

ಎಂ.ಸಿ.ಮನಗೂಳಿ ಏಳು ಸಲ ಸ್ಪರ್ಧೆ ಮಾಡಿ ಎರಡು ಬಾರಿ ಶಾಸಕರಾದರು. 1994 ರಲ್ಲಿ ಜೆ.ಎಚ್.ಪಟೇಲ್ ನೇತೃತ್ವದ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ದಿ ಸಚಿವರಾದರು. ಮತ್ತೆ 2018 ರಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ತೋಟಗಾರಿಕೆ ಸಚಿವರಾದರು. ಸಮ್ಮಿಶ್ರ ಸರ್ಕಾರ ಪತನವಾದ ನಂತರ ಶಾಸಕರಾಗಿ ಉಳಿದರೂ ಅವಧಿ ಪೂರ್ಣಗೊಳಿಸಲಿಲ್ಲ.

1989 ರಲ್ಲಿ ವೀರಪ್ಪ ಮೊಯ್ಲಿ ನೇತೃತ್ವದ ಸರ್ಕಾರದಲ್ಲಿ ಈ ಕ್ಷೇತ್ರದ ಶಾಸಕ ಡಾ.ಆರ್.ಬಿ.ಚೌಧರಿ ಅವರು ಸಣ್ಣ ನೀರಾವರಿ, ಬಂಧಿಖಾನೆ ಮತ್ತು ಗೃಹರಕ್ಷಕ ಖಾತೆ ಸಚಿವರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT