ವಿಜಯಪುರ: ಕೋವಿಡ್-19 ಸಾಂಕ್ರಾಮಿಕ ರೋಗ ಉಲ್ಬಣಗೊಳ್ಳುತ್ತಿರುವುದನ್ನು ನಿಯಂತ್ರಿಸಲು ಜಿಲ್ಲೆಯಲ್ಲಿ ಜುಲೈ 5 ರಿಂದ ಆಗಸ್ಟ್ 2ರ ವರೆಗೆ ಒಟ್ಟು ನಾಲ್ಕು ಭಾನುವಾರ ಪೂರ್ಣದಿನದ ಲಾಕ್ಡೌನ್ ಜಾರಿಗೊಳಿಸಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಆದೇಶ ಹೊರಡಿಸಿದ್ದಾರೆ.
ಈ ಲಾಕ್ಡೌನ್ ಅವಧಿಯಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಅಗತ್ಯ ವಸ್ತುಗಳಾದ ವೈದ್ಯಕೀಯ, ಹಾಲು, ತರಕಾರಿ, ಮಾಂಸ-ಮೀನು, ದಿನಸಿ ಅಂಗಡಿ ಹಾಗೂ ಪೆಟ್ರೋಲ್ ಪಂಪ್ಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ತುರ್ತು ಮತ್ತು ಅಗತ್ಯ ಸೇವೆಗಳನ್ನು ಒದಗಿಸುವಂತಹ ಇಲಾಖೆಗಳು, ಕಚೇರಿಗಳು, ಬೋರ್ಡ್ಗಳು ಮತ್ತು ಕಾರ್ಪೊರೇಷನ್ ಹೊರತು ಪಡಿಸಿ ಉಳಿದೆಲ್ಲ ಇಲಾಖೆಗಳು ಈಗಿರುವ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಸೇರಿದಂತೆ ಜುಲೈ 10 ರಿಂದ ಆಗಸ್ಟ್ 8ರ ವರಗೆ ಎಲ್ಲ ಶನಿವಾರ ರಜೆ ಇರುತ್ತವೆ ಎಂದು ತಿಳಿಸಿದ್ದಾರೆ.
ರಾಜ್ಯದ್ಯಂತ ಸೇರಿದಂತೆ ಜಿಲ್ಲೆಯಲ್ಲಿ ಪ್ರತಿದಿನ ರಾತ್ರಿ 8 ರಿಂದ ಬೆಳಿಗ್ಗೆ 5ರ ವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದ್ದು, ಈ ಕರ್ಫೂ ಅವಧಿಯಲ್ಲಿ ಅತ್ಯಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದಂತೆ ಜನ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.