ನಿಡಗುಂದಿ: ಜಿಲ್ಲೆಯ ಅಭಿವೃದ್ಧಿಗಾಗಿ ₹1 ಲಕ್ಷ ಕೋಟಿ ಅನುದಾನವನ್ನು ಕೇಂದ್ರದಿಂದ ತಂದಿದ್ದೇನೆ ಎಂದು ಸಂಸದ ಹಾಗೂ ವಿಜಯಪುರ ಲೋಕಸಭಾ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಹೇಳಿದರು.
ಪಟ್ಟಣದ ಕಮದಾಳ ಮುದ್ದೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಶುಕ್ರವಾರ ಜರುಗಿದ ನಿಡಗುಂದಿ ಮಹಾಶಕ್ತಿ ಕೇಂದ್ರದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಹುಟಗಿ-ಗದಗ, ರೈಲ್ವೆ ಡಬಲಿಂಗ್, ರೈಲ್ವೆ ವಿದ್ಯುತ್ ಮಾರ್ಗ, ಇಳಕಲ್ನಿಂದ ಸೋಲಾಪುರದ ವರೆಗೆ ಚತುಷ್ಪಥ ರಸ್ತೆ ಸೇರಿದಂತೆ ಏಳು ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣ, ಜಿಲ್ಲೆಯ ನಾನಾ ರೈಲು ನಿಲ್ದಾಣಗಳ ಉನ್ನತೀಕರಣ ಸೇರಿ ನಾನಾ ಅಭಿವೃದ್ಧಿ ಕಾರ್ಯಗಳು ಜರುಗಿವೆ ಎಂದರು.
ಪ್ರಧಾನಿ ಮೋದಿ ಅವರ ಕೈ ಬಲಪಡಿಸಬೇಕಾದ ಅಗತ್ಯವಿದ್ದು, ಬಿಜೆಪಿ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ವಿಧಾನಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್. ಪಾಟೀಲ (ಕೂಚಬಾಳ) ಮಾತನಾಡಿ, ರಮೇಶ ಜಿಗಜಿಣಗಿ ಅಭಿವೃದ್ಧಿ ಪರ ರಾಜಕೀಯ ಮಾಡಿದ್ದಾರೆ. ಗ್ಯಾರಂಟಿಗಳ ಹೆಸರಲ್ಲಿ ಕಾಂಗ್ರೆಸ್ ಜನರ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದೆ ಎಂದರು.
ಮಾಜಿ ಶಾಸಕ ಸೋಮನಗೌಡ ಪಾಟೀಲ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಿವಾನಂದ ಅವಟಿ, ಡಾ ಸಂಗಮೇಶ ಗೂಗಿಹಾಳ, ಪದ್ಮಾವತಿ ಗುಡಿ, ಈರಣ್ಣ ರಾವೂರ, ಬಸವರಾಜ ಬಿರಾದಾರ, ಸಿದ್ರಾಮ ಕಾಂಖಡಕಿ, ಸಂಗಮೇಶ ಹೌದೆ, ಬಸವರಾಜ ದಂಡಿನ, ಶರಣು ಮುರನಾಳ ಇದ್ದರು.
ಮುಖಂಡ ಸಂಗಣ್ಣ ಕೋತಿನ, ರೈತ ಮುಖಂಡ ತಿರುಪತಿ ಬಂಡಿವಡ್ಡರ ಸೇರಿದಂತೆ ಹಲವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.