ತಾಳಿಕೋಟೆ: ಪಟ್ಟಣದ ಸಂಗಮೇಶ್ವರ ಸಭಾಭವನದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಉಪನ್ಯಾಸ ಹಾಗೂ ರಸಪ್ರಶ್ನೆ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಬ್ರಿಲಿಯಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪ್ರಥಮ, ಸರ್ವಜ್ಞ ವಿದ್ಯಾಪೀಠ ಪ್ರೌಢಶಾಲೆ ದ್ವಿತೀಯ, ಸರ್ಕಾರಿ ಪ್ರೌಢಶಾಲೆ ಪೀರಾಪುರ ತೃತೀಯ ಹಾಗೂ ಬ್ರಿಲಿಯಂಟ್ ಕನ್ನಡ ಮಾಧ್ಯಮ ಶಾಲೆ ಚತುರ್ಥ ಸ್ಥಾನ ಪಡೆದವು.
ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ, ತಾಲ್ಲೂಕಾ ಘಟಕ ತಾಳಿಕೋಟೆ ಇವರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.
ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಬಿರಾದಾರ ಉದ್ಘಾಟಿಸಿದರು. ಎಸ್.ಎಸ್. ವಿದ್ಯಾಸಂಸ್ಥೆಯ ಅಧ್ಯಕ್ಷ ಎಚ್.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವಿಜಯಪುರ ಡಯಟ್ನ ಹಿರಿಯ ಉಪನ್ಯಾಸಕಿ ರೇಣುಕಾ ಸಿ. ಕಲಬುರ್ಗಿ, ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ. ಧರಿಕಾರ, ಪೀರಾಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಆರ್.ಬಿ. ದಮ್ಮೂರಮಠ ಮಾತನಾಡಿದರು.
ನಿವೃತ್ತ ಶಿಕ್ಷಕರಾದ ಆರ್.ಎಲ್. ಕೊಪ್ಪದ, ಎಸ್.ಡಿ. ಕರಜಗಿ, ಆಲಾಳ, ಎಂ.ಎಚ್. ಖಾಜಿ, ಮುಖ್ಯಶಿಕ್ಷಕರಾಗಿ ಪದೋನ್ನತಿ ಹೊಂದಿದ ಅಶೋಕ ಹೊಸಗೌಡರ, ಎಸ್.ಎಸ್. ಗಡೇದ, ವಿದ್ಯಾಧರ ಯಾತಗಿರಿ ಅವರನ್ನು ಸನ್ಮಾನಿಸಲಾಯಿತು.
ಸಂಪನ್ಮೂಲ ಶಿಕ್ಷಕರಾಗಿ ಬಂದಿದ್ದ ಬಸವನ ಬಾಗೇವಾಡಿ ಬಿಆರ್ಪಿ ಬಸವರಾಜ ಅವಟಿ, ವಿಜಯಪುರ ಪಿಡಿಜೆ ಪ್ರೌಢಶಾಲೆಯ ವಿಠಲ ಆರ್. ಕಟ್ಟಿ, ಸರ್ಕಾರಿ ಪ್ರೌಢಶಾಲೆ, ಕಗ್ಗೋಡದ ಶಿವಶರಣ ಬಾಲಿ ಆಗಮಿಸಿ ಎಸ್ಸೆಸ್ಸೆಲ್ಸಿ ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್ ವಿಷಯ ಕುರಿತು ಚರ್ಚೆ ನಡೆಸಿದರು.
ಪಟ್ಟಣ ಸೇರಿದಂತೆ ತಾಲ್ಲೂಕಿನ ಪ್ರೌಢಶಾಲೆಗಳ 1200ಕ್ಕೂ ಅಧಿಕ ವಿದ್ಯಾರ್ಥಿಗಳು ಇದ್ದರು. ಮಧ್ಯಾಹ್ನ ನಡೆದ ರಸಪ್ರಜ್ಞೆ ಕಾರ್ಯಕ್ರಮದಲ್ಲಿ 30 ಪ್ರೌಢಶಾಲೆಗಳು ಭಾಗವಹಿಸಿದ್ದವು. ಲಿಖಿತ ಪರೀಕ್ಷೆಯ ಮೂಲಕ 10 ತಂಡಗಳನ್ನು ಮೌಖಿಕ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು.
ರಸಪ್ರಶ್ನೆ ವಿಜೇತ ತಂಡಗಳಿಗೆ ಪಟ್ಟಣದ ದಿ. ಮುಕುಂದರಾವ್ ಮ. ಹಂಚಾಟೆ ಫೌಂಡೇಶನ್ನ ಲಕ್ಷ್ಮೀ ಕ್ಲಾಥ್ ಸ್ಟೋರ್ಸ್ (ಸಂದಿ ಅಂಗಡಿ)ಯ ರಾಜು ಹಂಚಾಟೆಯವರು ನಗದು ಬಹುಮಾನ ನೀಡಿದರು. ಪಟ್ಟಣದ ಖಾಸಗಿ ಶಿಕ್ಷಣ ಸಂಸ್ಥೆಗಳೆಲ್ಲ ಕಾರ್ಯಕ್ರಮಕ್ಕೆ ವಿವಿಧ ರೂಪದಲ್ಲಿ ನೆರವು ನೀಡಿದವು.