ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿದಂತೆ ನಡೆದ ಸಜ್ಜನಿಕೆಯ ಸಿದ್ಧೇಶ್ವರ ಸ್ವಾಮೀಜಿ...

Last Updated 2 ಜನವರಿ 2023, 21:39 IST
ಅಕ್ಷರ ಗಾತ್ರ

ವಿಜಯಪುರ: ಕನ್ನಡ ನಾಡು ಸೇರಿದಂತೆ ದೇಶ, ವಿದೇಶಗಳಲ್ಲಿ ಆರೇಳು ದಶಕಗಳಿಂದ ಪ್ರತಿ ನಿತ್ಯವೂ ಪ್ರವಚನವನ್ನೇ ಉಸಿರಾಗಿಸಿಕೊಂಡಿರುವ ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಅವರ ಬದುಕು ಅತ್ಯಂತ ಸರಳವಾದುದು. ಸಜ್ಜನಿಕೆಯನ್ನು ಮೈಗೂಡಿಸಿಕೊಂಡು ಬಾಳಿ, ಬದುಕಿ, ಸರಳತೆಯನ್ನೇ ಬೋಧಿಸಿದವರು.

ಶ್ರೀಗಳು ವಿಜಯಪುರದ ಆಶ್ರಮದಲ್ಲೇ ಇರಲಿ ಅಥವಾ ಪ್ರವಚನ ನೀಡಲು ನಾಡಿನ ಯಾವುದೇ ನಗರ, ಪಟ್ಟಣ, ಹಳ್ಳಿಗೇ ಹೋಗಲಿ, ಅಲ್ಲಿಯೂ ಸಹ ತಮ್ಮ ಸರಳ ಜೀವನಕ್ಕೆ ಸೀಮಿತರಾಗಿದ್ದರು.

ನಿತ್ಯ ಮುಂಜಾನೆ ನಾಲ್ಕು ಗಂಟೆಗೆ ಏಳುತ್ತಿದ್ದ ಶ್ರೀಗಳು ಅಧ್ಯಯನ, ಧ್ಯಾನ, ಬರವಣಿಗೆಯಲ್ಲಿ ತೊಡಗುತ್ತಿದ್ದರು. ಬಳಿಕ ಸ್ನಾನ, ಪೂಜೆ ಮುಗಿಸಿ, ಬೆಳಿಗ್ಗೆ 6ಕ್ಕೆ ಸರಿಯಾಗಿ ಪ್ರವಚನ ಆರಂಭಿಸುತ್ತಿದ್ದರು. ಪ್ರವಚನದ ಆರಂಭದಲ್ಲಿ ಶಿಷ್ಯ ಬಳಗ ಪ್ರಾರ್ಥನೆ ಮಾಡಿದ ಬಳಿಕ ಸರಿಯಾಗಿ 45 ನಿಮಿಷ ಪ್ರವಚನ ನೀಡುತ್ತಿದ್ದರು. ಒಂದು ಸೆಕೆಂಡ್‌ ಕೂಡ ಹೆಚ್ಚು ಕಡಿಮೆಯಾಗುತ್ತಿರಲಿಲ್ಲ.

ತಮ್ಮ ಮುಂದೆ ಸಾಗರೋಪಾದಿಯಲ್ಲಿ ಕುಳಿತ ಜನಸ್ತೋಮವನ್ನು ಸೂಜಿಗಲ್ಲಿನಂತೆ ಆಕರ್ಷಿಸುವ ನಯವಾದ ಭಾಷೆ ಎಂಥವರನ್ನೂ ಮೋಡಿ ಮಾಡುತ್ತಿತ್ತು. ಆ ನುಡಿಗಳು ಕೇಳುಗರಿಗೆ ಆತ್ಮತೃಪ್ತಿ ನೀಡುತ್ತಿತ್ತು.

ಕಠಿಣವಾದ ವಿಷಯವನ್ನು ಸಾಮಾನ್ಯರಿಗೂ ಅರ್ಥವಾಗುವಂತೆ ಸರಳಾತೀಸರಳವಾಗಿ ತಿಳಿಸುತ್ತಿದ್ದರು. ನವಿರಾದ ಭಾಷೆ, ಕಾವ್ಯ ಶೈಲಿಯ ಸುಂದರ ಮಾತು ಕೇಳಲು ಜನ ಮುಗಿ ಬೀಳುತ್ತಿದ್ದರು. ಅವರ ಮಾತು ಅಷ್ಟೊಂದು ಪರಿಣಾಮಕಾರಿಯಾಗಿರುತ್ತಿತ್ತು. ಕೇವಲ ಮಾತಿಗೆ ಸೀಮಿತರಾಗದ ಅವರು ನುಡಿದಂತೆ ನಡೆದುಕೊಳ್ಳುತ್ತಿದ್ದರು.

ಪ್ರವಚನ ಮುಗಿದ ಬಳಿಕ ಐದಾರು ಕಿ.ಮೀ ವಾಯು ವಿಹಾರ ಮಾಡುತ್ತಿದ್ದರು. ಬಳಿಕ ಒಂದೆಡೆ ಕುಳಿತು ಜನರೊಂದಿಗೆ ಚರ್ಚೆ, ಹರಟೆಯಲ್ಲಿ ತೊಡಗುತ್ತಿದ್ದರು. ಅಲ್ಲಿ ತಾವು ಮಾತನಾಡದೇ ಜನರ ಮಾತನ್ನು ಮುಗ್ಧ ಮಗುವಿನಂತೆ ಆಲಿಸುತ್ತಿದ್ದರು. ಅಧ್ಯಾತ್ಮ, ಪ್ರಕೃತಿ, ವಿಜ್ಞಾನ, ಕೃಷಿ, ಶಿಕ್ಷಣ ಸೇರಿದಂತೆ ದೈನಂದಿನ ಜನಜೀವನದ ಬಗ್ಗೆ ಜನರಿಂದಲೇ ಕೇಳಿ ತಿಳಿಯುತ್ತಿದ್ದರು.

ಶ್ರೀಗಳು ಪ್ರಕೃತಿ ಪ್ರಿಯರಾಗಿದ್ದರು. ಹೀಗಾಗಿಯೇ ಆಶ್ರಮ ಗಿಡಮರಗಳು ಹಚ್ಚ ಹಸಿರಿನಿಂದ ಕೂಡಿದೆ. ಅಲ್ಲಿ ಸದಾಕಾಲ ಪಕ್ಷಿಗಳ ಚಿಲಿಪಿಲಿ ನಿನಾದ ಅನುರಣಿಸುತ್ತದೆ. ಪ್ರಕೃತಿಗೆ ಧಕ್ಕೆಯಾಗಬಾರದು ಎಂದು ಬಲವಾಗಿ ಪ್ರತಿಪಾದಿಸಿದ್ದರು ಶ್ರೀಗಳು. ಪ್ರಕೃತಿಯನ್ನು ಕೆಡಿಸಬೇಡಿ ಎನ್ನುತ್ತಿದ್ದರು.

ಆಶ್ರಮ ಆವರಣದಲ್ಲಿ ಮೈಚಾಚಿಕೊಂಡಿರುವ ಬೃಹದಾಕಾರದ ಆಲದ ಮರದ ಇಳಿಬಿದ್ದ ಕೊಂಬೆಗಳನ್ನು ಕತ್ತರಿಸಲು ಮುಂದಾದಾಗ ಶ್ರೀಗಳು ತಡೆದು, ಇಳಿಬಿದ್ದ ಕೊಂಬೆಗಳಿಗೆ ಕಂಬವನ್ನು ನಿಲ್ಲಿಸಿ ಆಶ್ರಯ ಒದಗಿಸಿರುವುದನ್ನು ಈಗಲೂ ಕಾಣಬಹುದು.

ಗಿಡಗಳಲ್ಲಿ ಅರಳಿರುವ ಹೂಗಳನ್ನು ಅವರು ಕೀಳಲು ಬಿಡುತ್ತಿರಲಿಲ್ಲ. ಬಹಳಷ್ಟು ಹೂವನ್ನು ಬಳಸದೇ ಒಂದೇ ಹೂವನ್ನು ದೇವರಿಗೆ ಅರ್ಪಿಸಿ ಪೂಜೆ ಸಲ್ಲಿಸುತ್ತಿದ್ದರು. ಪ್ರಕೃತಿ, ಪ್ರಾಣಿಗಳನ್ನು ಅವರು ಪ್ರೀತಿಸುತ್ತಿದ್ದರು.

ಬಿಡುವಿದ್ದಾಗ ಮಧ್ಯಾಹ್ನ ಅಲ್ಪ ವಿಶ್ರಾಂತಿ, ಬಳಿಕ ಮತ್ತೆ ಅಧ್ಯಯನದಲ್ಲಿ ತೊಡಗುತ್ತಿದ್ದರು. ಸಂಜೆ ಕೆಲ ಹೊತ್ತು ಸಂಗೀತ ಆಲಿಸುತ್ತಿದ್ದರು. ಶಹನಾಯ್‌, ಜಲತರಂಗ, ಕೊಳಲು ವಾದನ ಅವರಿಗೆ ಇಷ್ಟ. ಭಕ್ತಿ, ಭಜನೆ, ಶಿವಶರಣರ ವಚನಗಳು, ಶ್ಲೋಕಗಳನ್ನು ಆಲಿಸುತ್ತಿದ್ದರು.

ಪ್ರತಿ ರಾತ್ರಿ 10 ಗಂಟೆ ಒಳಗಾಗಿ ಮಲಗುತ್ತಿದ್ದರು. ತಾವು ಮಲಗುವ ಕೊಠಡಿಯೊಳಗೆ ಗಾಳಿ, ಬೆಳಕು ಇರು
ವಂತೆ ಬಯಸುತ್ತಿದ್ದರು. ಏರ್‌ಕಂಡೀಷನ್‌, ಫ್ಯಾನ್‌ ಬಳಸುತ್ತಿರಲಿಲ್ಲ. ಪ್ರತಿ ಭಾನುವಾರ ಸಂಜೆ 6ರಿಂದ 7 ರ ವರೆಗೆ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದರು. ಭಾರತೀಯ ತತ್ವಜ್ಞಾನ, ವೇದ ಉಪನಿಷತ್‌ ಬಗ್ಗೆ ಮಾತನಾಡುತ್ತಿದ್ದರು.

ಸದಾಕಾಲ ಶ್ವೇತ ವಸ್ತ್ರಾಧಾರಿಯಾಗಿರುತ್ತಿದ್ದರು. ಸಾದಾ ನಿಲುವಂಗಿ, ಆ ಅಂಗಿಗೆ ಜೇಬು ಇರುತ್ತಿರಲಿಲ್ಲ. ಅದು ಎರಡೇ ಜೋಡಿ ವಸ್ತ್ರಗಳಿರುತ್ತಿದ್ದವು. ಸ್ವಲ್ಪ ಹರಿದಿದ್ದರೂ ತೊಡುತ್ತಿದ್ದರು. ತಾವೇ ಹೊಲಿಗೆ ಹಾಕಿಕೊಳ್ಳುತ್ತಿದ್ದರು. ಒಂದು ದಿನ ಹೀಗೆ ಹರಿದ ಅಂಗಿಯನ್ನು ನೋಡಿದ ಭಕ್ತರೊಬ್ಬರು ಹೊಸ ವಸ್ತ್ರ ತಂದುಕೊಡುವುದಾಗಿ ಹೇಳಿದಾಗ, ‘ಬೇಡ, ಅಂಗಿ ಒಂದು ಕಡೆ ಹರಿದರೇನಂತೆ ಉಳಿದೆಡೆ ಚನ್ನಾಗಿದೆ. ಹರಿದ ಕಡೆ ಏಕೆ ನೋಡುತ್ತೀರಿ, ಉಳಿದೆಡೆ ಚನ್ನಾಗಿದೆ ಅಲ್ಲಿನೋಡಿ’ ಎಂದು ಹೇಳಿದರು.

ಶ್ರೀಗಳು ಮಿತ ಆಹಾರಿಯಾಗಿದ್ದರು. ಉಪ್ಪು ಕಾರವಿಲ್ಲದ ಸಪ್ಪೆ ಆಹಾರ ಸೇವಿಸುತ್ತಿದ್ದರು. ಒಂದು ರೊಟ್ಟಿಯನ್ನು ನಾಲ್ಕು ಭಾಗ ಮಾಡಿ ಅದರಲ್ಲಿ ಕಾಲು ಭಾಗ ಮಾತ್ರ ಸೇವಿಸುತ್ತಿದ್ದರು. ಅಷ್ಟೇ ಅಲ್ಲ ಅವರು ಸ್ನಾನಕ್ಕೆ ರಾಸಾಯನಿಕ ಯುಕ್ತ ಸೋಪನ್ನು ಬಳಸುತ್ತಿರಲಿಲ್ಲ. ಎಣ್ಣೆಯನ್ನು ಹಚ್ಚಿಕೊಂಡು ಅಭ್ಯಂಜನ ಸ್ನಾನ ಮಾಡುತ್ತಿದ್ದರು.

ಅವರಿಗೆ ಕಾಯಿಲೆಗಳು ಅಷ್ಟಾಗಿ ಎಂದೂ ಬಾಧಿಸಲಿಲ್ಲ. ಹೀಗಾಗಿ ಆಸ್ಪತ್ರೆ ಸಮೀಪ ಸುಳಿದವರಲ್ಲ, ಔಷಧ ಬಳಸಿದವರೂ ಅಲ್ಲ. ಅಗತ್ಯವಿದ್ದರೆ ಅಲ್ಪಸ್ವಲ್ಪ ಆಯುರ್ವೇದ ಔಷಧವನ್ನು ಬಳಸುತ್ತಿದ್ದರು. ಅವರು ಎಂದೂ ಯಾವುದೇ ಸಿನಿಮಾ ನೋಡಿದವಲ್ಲ, ಟಿವಿಯನ್ನು ವೀಕ್ಷಿಸುತ್ತಿರಲಿಲ್ಲ. ಆದರೆ, ಪತ್ರಿಕೆಗಳನ್ನು ಅರ್ಧ ತಾಸು ಓದುತ್ತಿದ್ದರು.

ಜನಸಾಮಾನ್ಯರ ಹತ್ತಿರವೇ ಇರುತ್ತಿದ್ದರು. ಪ್ರವಚನದ ವೇಳೆ ಪ್ರಸಾದ ವ್ಯವಸ್ಥೆ ಇದ್ದಾಗ ಅವರೇ ಬಡಿಸುತ್ತಿದ್ದರು. ಜನರೊಂದಿಗೆ ಬೆರೆಯುತ್ತಿದ್ದರು. ಪಾದ ಮುಟ್ಟಿ ನಮಸ್ಕರಿಸಲು ಅವರು ಯಾರಿಗೂ ಅವಕಾಶ ನೀಡುತ್ತಿರಲಿಲ್ಲ. ಪ್ರತಿಯಾಗಿ ತಾವೂ ನಮಸ್ಕರಿಸುತ್ತಿದ್ದರು.

ಯಾವುದೇ ವ್ಯವಹಾರವನ್ನೂ ಅವರು ಎಂದೂ ಮಾಡುತ್ತಿರಲಿಲ್ಲ. ಕೈಯಲ್ಲಿ ಎಂದೂ ಹಣವನ್ನೇ ಮುಟ್ಟಲಿಲ್ಲ, ಅಷ್ಟೊಂದು ಸರಳತೆಯ ಮೂರ್ತಿವೆತ್ತವರು ಸಿದ್ಧೇಶ್ವರ ಶ್ರೀ.

ಲೇಖಕ: ಸಾಹಿತಿ, ಬನಹಟ್ಟಿ

ನಿರೂಪಣೆ: ಬಸವರಾಜ್‌ ಸಂಪಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT