ಸುಫಾರಿ ಹಂತಕರ ಬಂಧನ

ವಿಜಯಪುರ: ಬಬಲೇಶ್ವರ ಗ್ರಾಮದ ಯಾಕೂಬ್ ಚಾಂದಬಾಷಾ ಕೋಲೂರ(24) ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಈ ಸಂಬಂಧ ನಾಲ್ವರು ಸುಫಾರಿ ಹಂತಕರನ್ನು ಬಂಧಿಸಿದ್ದಾರೆ.
ಹತ್ಯೆಯಾದ ಯಾಕೂಬ್ನ ಸೋದರ ಸಂಬಂಧಿ ಬಬಲೇಶ್ವರದ ಪೈಗಂಬರ ದಸ್ತಗಿರಿಸಾಬ ಗೋಕಾಂವಿ, ಪೈಗಂಬರ ರಾಜೇಸಾಬ ಕೋಲೂರ ಹಾಗೂ ಸಾರವಾಡದ ಚಂದ್ರಕಾಂತ ಪುಟ್ಟಣ್ಣವರ ಮತ್ತು ಸಾಗರ ಸಂಜೀವ್ಗೋಳ ಬಂಧಿತ ಹಂತಕರಾಗಿದ್ದಾರೆ.
ಕೊಲೆಯಾಗಿರುವ ಯಾಕೂಬ್ ಚಾಂದಬಾಷಾ ಕೋಲೂರ ತನ್ನ ಹೆಂಡತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಸಂಶಯಗೊಂಡ ಆರೋಪಿ ಪೈಗಂಬರ್ ರಾಜೇಸಾಬ ಕೋಲೂರ, ಆಗಾಗ ಜಗಳ ಮಾಡುತ್ತಿದ್ದನು. ಇದೇ ಸಿಟ್ಟಿನಿಂದ ಆರೋಪಿಯು ಪೈಗಂಬರ್ ಗೋಕಾಂವಿ ಹಾಗೂ ಅವನ ಗೆಳೆಯರಿಗೆ ₹ 6 ಲಕ್ಷ ಸುಫಾರಿ ಕೊಟ್ಟು ಕೊಲೆ ಮಾಡಿಸಿರುವುದು ವಿಚಾರಣೆಯಿಂದ ಬಹಿರಂಗವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.
ಆರೋಪಿಗಳು ಕಳೆದ ಆಗಸ್ಟ್ 16ರಂದು ಯಾಕೂಬ್ನನ್ನು ಕಾರೊಂದರಲ್ಲಿ ಕೂರಿಸಿಕೊಂಡು ಹೋಗಿ, ಅಂದು ರಾತ್ರಿ 11.30ರ ಸುಮಾರಿಗೆ ಕೊಲ್ಹಾರದ ಕೃಷ್ಣಾ ನದಿಯ ಸೇತುವೆ ಹತ್ತಿರ ಯಾಕೂಬ್ನ ಕುತ್ತಿಗೆಗೆ ವೈರಿನಿಂದ ಬಿಗಿದು ಕೊಲೆ ಮಾಡಿ, ನಂತರ ಆತನ ಹೆಣವನ್ನು ನದಿಗೆ ಎಸೆದು ಪರಾರಿಯಾಗಿದ್ದರು.
ಕೊಲೆಯಾದ ಯಾಕೂಬ್ ಅವರ ತಂದೆ ಚಂದಪಾಷಾ ಕೋಲೂರ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು ₹11,100 ನಗದು ವಶಪಡಿಸಿಕೊಂಡಿದ್ದಾರೆ.
ಡಿವೈಎಸ್ಪಿ ಕೆ.ಸಿ.ಲಕ್ಷ್ಮೀನಾರಾಯಣ, ವಿಜಯಪುರ ಗ್ರಾಮೀಣ ಸಿಪಿಐ ಎಸ್.ಬಿ.ಪಾಲಭಾವಿ, ಬಬಲೇಶ್ವರ ಪಿಎಸ್ಐ ಎಸ್.ಬಿ.ಗೌಡ್ರ ನೇತೃತ್ವದ ತನಿಖಾ ತಂಡವು ಆರೋಪಿಗಳನ್ನು ಸೋಮವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.