ವಿಜಯಪುರ: ಇಲ್ಲಿನ ಜಲನಗರದ ಶ್ರೀಮತಿ ವಿಜಯಲಕ್ಷ್ಮಿ ಸರ್ವೋತ್ತಮ ದೇಶಪಾಂಡೆಶಿಕ್ಷಣ ಮತ್ತು ಸಾಮಾಜಿಕ ಸಂಸ್ಥೆಯ ವಿಕಲಚೇತನ ಮಕ್ಕಳ ಪುನಶ್ಚೇತನ ಕೇಂದ್ರ(ವಿಎಸ್ಡಿಎಸ್) ಅಂಗವಿಕಲ ಮಕ್ಕಳಿಗೆ ಸ್ವಾವಲಂಭಿ ಬದುಕು ಕಟ್ಟುಕೊಡಲು ಶ್ರಮಿಸುತ್ತಿದೆ.
ಅಂಗವಿಕಲ ಸ್ನೇಹಿ ಪರಿಸರವನ್ನು ಒಳಗೊಂಡಿರುವ ಈ ಕೇಂದ್ರದಲ್ಲಿ ಸದ್ಯ ರಾಜ್ಯ ಮಾತ್ರವಲ್ಲದೇ ನೆರೆಯ ಮಹಾರಾಷ್ಟ್ರವು ಸೇರಿದಂತೆ 40 ಅಂಗವಿಕಲ ಮಕ್ಕಳು ದೈಹಿಕ, ಮಾನಸಿಕ ತರಬೇತಿ ಪಡೆದುಕೊಳ್ಳುತ್ತಿದ್ದಾರೆ.
ಬಹು ಅಂಗವೈಕಲ್ಯ, ಆಟಿಜಂ, ಬುದ್ದಿ ಮಾಂದ್ಯ ಮಕ್ಕಳು, ಮೂಗರು, ಕಿವುಡರು ಸೇರಿದಂತೆ1 ವರ್ಷದಿಂದ 18 ವರ್ಷದ ಅಂಗವಿಕಲಮಕ್ಕಳಿಗೆ ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತಿದೆ.ತರಬೇತಿ ಪಡೆದ 12 ಜನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಕೇಂದ್ರದಲ್ಲಿ ಅಂಗವಿಕಲ ಸ್ನೇಹಿ ವಾತಾವರಣ ಕಾಣಬಹುದಾಗಿದೆ. ಅಂಗವಿಕಲ ಮಕ್ಕಳು ಸುಲಭವಾಗಿ ನಡೆಯಲು, ಕೂರಲು, ನಿಲ್ಲಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ.
ಕೇಂದ್ರದಲ್ಲಿ ಪಕ್ಷಿ, ಫಿಶ್ ಅಕ್ವೇರಿಯಂಗಳು ಜೊತೆಗೆ 128 ಬೇರೆಬೇರೆ ಗಿಡಗಳನ್ನು ಹಚ್ಚಿ ಅಂಗವಿಕಲ ಮಕ್ಕಳಿಗೆ ಪರಿಸರದ ಬಗ್ಗೆ ತಿಳಿಸಲಾಗುತ್ತಿದೆ.
ಕೇಂದ್ರದ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದಸಂಸ್ಥಾಪಕಪ್ರಶಾಂತ ದೇಶಪಾಂಡೆ, 2019 ಜೂನ್ನಲ್ಲಿ ಆರಂಭವಾದ ಸಂಸ್ಥೆಯು ಸರ್ಕಾರದ ಅನುದಾನ ಪಡೆಯದೇ ದಾನಿಗಳ ಪ್ರೋತ್ಸಾಹದಿಂದ ಅಂಗವಿಕಲರ ಏಳಿಗಾಗಿ, ಜೀವನ ಸುಧಾರಣೆಗಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.
ಪ್ರತಿ ಮಗುವಿನ ಅಗತ್ಯಕ್ಕನುಗುಣವಾದ ಬೇರೆ ಬೇರೆ ತರದ ಫಿಜಿಯೋಥೆರಫಿ ನೀಡಲಾಗುತ್ತಿದೆ. ಆಧುನಿಕ ಶೈಲಿಯ 100ಕ್ಕೂ ಹೆಚ್ಚು ಫಿಜಿಯೋಥೆರಫಿ ನೀಡಲಾಗುತ್ತಿದೆ ಎಂದರು.
ಕೇಂದ್ರಕ್ಕೆ ಬರುವ ಬಡ, ನಿರ್ಗತಿಕ ಅಂಗವಿಕಲ ಮಕ್ಕಳು ಸಾಕಷ್ಟು ತೊಂದರೆಯಲ್ಲಿದ್ದು, ಇಂತವರಿಗೆ ನೆರವು ನೀಡಲು ದಾನಿಗಳು ಸಹಕರಿಸಬೇಕು. ಆಸಕ್ತ ದಾನಿಗಳು ಮಕ್ಕಳ ಖರ್ಚು, ವೆಚ್ಚವನ್ನು ಭರಿಸಬಹುದು ಎಂದು ಹೇಳಿದರು.
ಕೇಂದ್ರದಲ್ಲಿ ಸದ್ಯ 40 ಅಂಗವಿಕಲ ಮಕ್ಕಳಿಗೆ ಆರೈಕೆ ಮಾಡಲಾಗುತ್ತಿದೆ. ಈಗಾಗಲೇ ಎಂಟು ಮಕ್ಕಳು ಸಂಪೂರ್ಣ ಸುಧಾರಣೆಗೊಂಡು ಮನೆಗೆ ತೆರಳಿದ್ದಾರೆ ಎಂದರು.
ಕೇಂದ್ರದಲ್ಲಿ ಕೈಯಿಂದ ವ್ಯಾಯಾಮ(ಮೆನುವಲ್ ಥೆರಪಿ) ಮಾಡಿಸಿ ಅಂಗವೈಕಲ್ಯವನ್ನು ಸುಧಾರಣೆ ಮಾಡಲಾಗುತ್ತಿದೆ. ಜೊತೆಗೆ ಯಂತ್ರಗಳ(ಮಷಿನ್) ಸಹಾಯದಿಂದ ಥೆರಫಿ ನೀಡಲಾಗುತ್ತಿದೆ. ಇಬ್ಬರು ಫಿಜಿಯೋಥೆರಫಿಸ್ಟ್ ಸಹ ಇದ್ದಾರೆ. ಅಲ್ಲದೇ, ಎಂಎಸ್ ಆರ್ಥೋ, ಎಂಎಸ್ ಎಂಡಿ ಫಿಜಿಯೋಥೆರಫಿ ವೈದ್ಯರು ಇದ್ದಾರೆ. ಅಂಗವೈಕಲ್ಯ ಸುಧಾರಣೆಗಾಗಿಒಂಬತ್ತು ಬಗೆಯ ಉಪಕರಣಗಳಿಂದ ಫಿಜಿಯೋಥೆರಫಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರದಿಂದ ಯಾವುದೇ ಅನುದಾನ ಪಡೆಯುತ್ತಿಲ್ಲ. ಆದರೆ, ಅಂಗವಿಕಲರ ಕಲ್ಯಾಣ ಇಲಾಖೆ ಅಧಿಕಾರಿ ವಿಠಲ ಉಪಾಧ್ಯೆ ಅವರು, ಸಾಕಷ್ಟು ಸಲಹೆ, ಮಾರ್ಗದರ್ಶನ ನೀಡುವ ಜೊತೆಗೆ ಅಂಗವಿಲಕಲರ ನೆರವಾಗುವ ಉಪಕರಣಗಳನ್ನು ಇಲಾಖೆಯಿಂದ ಒದಗಿಸಿದ್ದಾರೆ ಎಂದು ಸ್ಮರಿಸಿದರು.
ಕೇಂದ್ರಕ್ಕೆ ಅಮೇರಿಕಾದ ರಾಬರ್ಟ್ ಕ್ಲಾರ್ ಮತ್ತು ಘಾನಾ ದೇಶದ ಸಿಗ್ಮಿ ಎಂಬುವವರು ಭೇಟಿ ನೀಡಿ ಕಾರ್ಯವೈಕರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
‘ಮೆದುಳಿನ ಪಾರ್ಶ್ವವಾಯುವಿನಿಂದ ಬಳಲುತ್ತಿರುವ ನನ್ನ ಮಗೆ ನಚಿಕೇತನನನ್ನು ಕೇಂದ್ರಕ್ಕೆ ಒಂದು ತಿಂಗಳಿಂದ ಕರೆದುಕೊಂಡು ಬಂದು ತರಬೇತಿ ಕೊಡಿಸುತ್ತಿದ್ದೇನೆ. ನಿರೀಕ್ಷೆಗೆ ಮೀರಿ ಮಗುವಿನಲ್ಲಿ ಬದಲಾವಣೆಯಾಗಿದೆ’ ಎಂದು ವಿಜಯಪುರ ರಾಜಾಜಿನಗರದ ನಿವಾಸಿ ಮೀನಾಕ್ಷಿ ಸಾಣಿಕ್ಕನವರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಅಗತ್ಯವಿರುವವರು, ದಾನಿಗಳುಕೇಂದ್ರದ ಮೊಬೈಲ್ ಸಂಖ್ಯೆ8495894906, 6361564133ಸಂಪರ್ಕಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.