ಯಾದಗಿರಿ: ಜಿಲ್ಲೆಯಲ್ಲಿ 2024-25 ನೇ ಸಾಲಿನ ಮುಂಗಾರು ಹಂಗಾಮಿಗೆ ಸಿದ್ಧತೆ ನಡೆದಿದ್ದು, ಬಿತ್ತನೆಗೆ ರೈತರು ಅಣಿಯಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಮೇ ತಿಂಗಳಿನ ವಾಡಿಕೆ ಮಳೆ 41 ಮಿಲಿ ಮೀಟರ್ ಇದ್ದು, 29 ಎಂಎಂ ಮಳೆಯಾಗಿದೆ. ಮುಂಗಾರು ಹಂಗಾಮಿನಲ್ಲಿ 4,01,637 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, ರೈತರು ಭೂಮಿ ಸಿದ್ದತೆಯಲ್ಲಿ ತೊಡಗಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಉತ್ತಮ ಮಳೆಯಾಗಿದ್ದು, ಭೂಮಿ ಸಿದ್ದತೆಗೆ ಅನುಕೂಲವಾಗಿದೆ.
ಮುಂಗಾರು ಬಿತ್ತನೆ ಬೀಜಗಳ ದಾಸ್ತಾನು: ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ತೊಗರಿ, ಹೆಸರು ಮತ್ತು ಭತ್ತ 2,975.45 ಕ್ವಿಂಟಲ್ ಬಿತ್ತನೆ ಬೀಜಗಳ ಬೇಡಿಕೆ ಇದ್ದು, ಜಿಲ್ಲೆಯ 16 ರೈತ ಸಂಪರ್ಕ ಕೇಂದ್ರಗಳ ಮೂಲಕ ರಿಯಾಯ್ತಿ ದರದಲ್ಲಿ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ ಬೀಜ ನಿಗಮ ಮತ್ತು ರಾಷ್ಟ್ರೀಯ ಬೀಜ ನಿಗಮದಲ್ಲಿ 2,683 ಕ್ವಿಂಟಲ್ ಬೀಜಗಳ ದಾಸ್ತಾನು ಲಭ್ಯವಿದ್ದು, ಬಿತ್ತನೆ ಬೀಜಗಳ ಯಾವುದೇ ಕೊರತೆ ಇಲ್ಲ.
ರಸಗೊಬ್ಬರ ದಾಸ್ತಾನು: ಮೇ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೆ ಬೆಳೆಗಳ ಕ್ಷೇತ್ರಕ್ಕನುಗುಣವಾಗಿ ವೈಜ್ಞಾನಿಕವಾಗಿ ಶಿಫಾರಸು ಮಾಡಿದ ಪೋಷಕಾಂಶಗಳ ಆಧಾರದ ಮೇಲೆ ಜಿಲ್ಲೆಗೆ ಬೇಕಾಗುವ ವಿವಿಧ ರಸಗೊಬ್ಬರಗಳ ಬೇಡಿಕೆ 1,22,766 ಮೆಟ್ರಿಕ್ ಟನ್ ಇದ್ದು, ಮೇ ತಿಂಗಳ ಬೇಡಿಕೆ 13,729 ಮೆಟ್ರಿಕ್ ಟನ್ ಇದ್ದು 54,169 ಮೆಟ್ರಿಕ್ ದಾಸ್ತಾನು ಲಭ್ಯವಿದೆ. ಮುಂದಿನ ತಿಂಗಳಲ್ಲಿ ಬೇಡಿಕೆ ಬೇಕಾದಷ್ಟು ಸರಬರಾಜು ಮಾಡಲು ರಸಗೊಬ್ಬರ ಲಭ್ಯವಿದೆ. ಯಾವುದೇ ರೀತಿಯ ಕೊರತೆ ಇಲ್ಲ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.
ಸುರಪುರ ವರದಿ: ಈ ಬಾರಿಯ ಮುಂಗಾರು ಬೇಗನೆ ಪ್ರವೇಶಿಸಿದೆ. ಈಗಾಗಲೇ ತಾಲ್ಲೂಕಿನಲ್ಲಿ ಎರಡು ಮೂರು ಬಾರಿ ಸಾಧಾರಣ ಮಳೆಯಾಗಿದೆ. ರೈತರು ಭೂಮಿ ಹದಗೊಳಿಸಲು ಸಿದ್ಧತೆ ನಡೆಸಿದ್ದಾರೆ.
ತಾಲ್ಲೂಕಿನಲ್ಲಿ ಒಟ್ಟು 63,507 ಹೆಕ್ಟೇರ್ ಕೃಷಿ ಭೂಮಿ ಇದೆ. ಅದರಲ್ಲಿ 46,497 ನೀರಾವರಿ, 17,010 ಖುಷ್ಕಿ ವ್ಯಾಪ್ತಿಗೆ ಒಳಪಟ್ಟಿದೆ. ಕಾಲುವೆ ಕೊನೆ ಭಾಗ, ನೀರಾವರಿ ವಂಚಿತ ಪ್ರದೇಶ ಎಂದು ದಾಖಲೆಯಲ್ಲಿ ನೀರಾವರಿಗೆ ಒಳಪಟ್ಟ ಶೇ 20 ಕ್ಕೂ ಹೆಚ್ಚು ಜಮೀನು ಮಳೆಯನ್ನೆ ಆಶ್ರಯಿಸಿದೆ.
ಕೃಷಿ ಇಲಾಖೆ ಬಿತ್ತನೆ ಬೀಜ ಮತ್ತು ಲಘು ಪೋಷಕಾಂಶ ಗೊಬ್ಬರ ಸಂಗ್ರಹಕ್ಕೆ ಸಿದ್ದತೆ ನಡೆಸಿದೆ. 550 ಕ್ವಿಂಟಲ್ ತೊಗರಿ, 50 ಕ್ವಿಂಟಲ್ ಹೆಸರು, 20 ಕ್ವಿಂಟಲ್ ಸಜ್ಜೆ, 10 ಕ್ವಿಂಟಲ್ ಸೂರ್ಯಕಾಂತಿ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗಿದೆ.
ಕೃಷಿ ಅಧಿಕಾರಿಗಳು ರಸಗೊಬ್ಬರ ಮಾರಾಟ ಅಂಗಡಿಗಳಿಗೆ ಭೇಟಿ ನೀಡಿ ಬಿತ್ತನೆ ಬೀಜದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಗುಣಮಟ್ಟದ ಪರೀಕ್ಷೆಗೆ ಕಳಿಸುತ್ತಿದ್ದಾರೆ. ಕಳಪೆ ಬೀಜ ಮಾರಾಟ ಮಾಡಿದರೆ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.
ಪೂರಕ ವರದಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ, ಭೀಮಶೇನರಾವ ಕುಲಕರ್ಣಿ, ಎಂ.ಪಿ.ಚಪೆಟ್ಲಾಕೃಷಿ ಇಲಾಖೆ ಮುಂಗಾರು ಅವಧಿಗೆ ಸನ್ನದ್ಧವಾಗಿದೆ. ರೈತರು ಅಧಿಕೃತ ಮಾರಾಟಗಾರರಿಂದ ಮಾತ್ರ ಬೀಜ ಖರೀದಿಸಿ ರಸೀದಿ ಪಡೆಯಬೇಕು ಮಲ್ಲಿಕಾರ್ಜುನ ವಾರದ ಕೃಷಿ ಅಧಿಕಾರಿ
ಜಿಲ್ಲೆಯಲ್ಲಿ ಪೂರ್ವ ಮುಂಗಾರಿನ ಉತ್ತಮ ಮಳೆಯಾಗುತ್ತಿದ್ದು ರೈತರಿಗೆ ಬೇಕಾದ ಬೀಜ ಗೊಬ್ಬರಕ್ಕೆ ಯಾವುದೇ ಸಮಸ್ಯೆಯಾಗದಂತೆ ಕೃಷಿ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು. ಅಲ್ಲದೇ ಮಳೆಯಾಶ್ರಿತ ನೀರಾವರಿಗೆ ಬೇಕಾದ ಯೂರಿಯಾ ಡಿಎಪಿ ಕಾಂಪ್ಲೆಕ್ಸ್ ಗೊಬ್ಬರ ಹತ್ತಿ ಬೀಜ ನಕಲಿ ಹಾವಳಿ ತಡೆಯವಲ್ಲಿ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕುಅಶೋಕ ಮಲ್ಲಾಬಾದಿ ರಾಜ್ಯ ಕೃಷಿ ಪ್ರಶಸ್ತಿ ಪುರಸ್ಕೃತ ರೈತ
ರೈತರು ಅಧಿಕೃತ ಮಾರಾಟಗಾರರಲ್ಲಿ ಮಾತ್ರ ಬಿತ್ತನೆ ಬೀಜ ಖರೀದಿಸಿ ಕಡ್ಡಾಯವಾಗಿ ರಸೀದಿ ಪಡೆಯಬೇಕು. ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ಕೃಷಿ ಬಗ್ಗೆ ಮಾಹಿತಿ ಪಡೆಯಬೇಕುಭೀಮರಾಯ ಹವಾಲ್ದಾರ ಸಹಾಯಕ ಕೃಷಿ ನಿರ್ದೇಶಕ
ಕಳೆದ ವರ್ಷ ಬರಗಾಲದಿಂದ ರೈತ ಸಂಕಷ್ಟ ಎದುರಿಸಿದ್ದಾನೆ. ಅದೃಷ್ಟಕ್ಕೆ ಮಳೆ ಬರುತ್ತಿದೆ. ಕೃಷಿ ಇಲಾಖೆ ಸರಿಯಾದ ಸಮಯಕ್ಕೆ ರೈತನ ನೆರವಿಗೆ ಬರಬೇಕುವಿಶ್ವರಾಜ ಒಂಟೂರ ರೈತ ಚಂದಲಾಪುರ
ಕೃಷಿ ಇಲಾಖೆ ಮುಂಗಾರು ಅವಧಿಗೆ ಸನ್ನದ್ಧವಾಗಿದೆ. ರೈತರು ಅಧಿಕೃತ ಮಾರಾಟಗಾರರಿಂದ ಮಾತ್ರ ಬೀಜ ಖರೀದಿಸಿ ರಸೀದಿ ಪಡೆಯಬೇಕುಮಲ್ಲಿಕಾರ್ಜುನ ವಾರದ ಕೃಷಿ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.