ಪ್ರಜಾವಾಣಿ ವಾರ್ತೆ
ಸುರಪುರ: ‘ತಮ್ಮ ವಚನ ಸಾಹಿತ್ಯದ ಮೂಲಕ ಸಾಮಾಜಿಕ ಕ್ರಾಂತಿಯನ್ನೇ ಹುಟ್ಟು ಹಾಕಿದ ಮಹಾನ್ ಮಾನವತಾವಾದಿ ಬಸವಣ್ಣನವರ ತತ್ವಾದರ್ಶಗಳು ನಮ್ಮೆಲ್ಲರ ಜೀವನಕ್ಕೆ ದಾರಿ ದೀಪವಾಗಿವೆ’ ಎಂದು ತಹಶೀಲ್ದಾರ್ ನಾಗಮ್ಮ ಕಟ್ಟಿಮನಿ ಹೇಳಿದರು.
ಇಲ್ಲಿಯ ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತ ಶುಕ್ರವಾರ ಹಮ್ಮಿಕೊಂಡಿದ್ದ ಬಸವೇಶ್ವರ ಮತ್ತು ಹೇಮರೆಡ್ಡಿ ಮಲ್ಲಮ್ಮ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
‘ಜಾತಿ ವರ್ಗಗಳ ವ್ಯವಸ್ಥೆ ವಿರುದ್ಧ ಹೋರಾಟ ನಡೆಸಿದ ಬಸವಣ್ಣನವರು ಎಲ್ಲರಲ್ಲೂ ಸಮಾನತೆಯ ಬೀಜ ಮಂತ್ರವನ್ನು ಜಪಿಸುವಂತೆ ಮಾಡುವ ಮೂಲಕ ಅನುಭವ ಮಂಟಪವನ್ನು ಸ್ಥಾಪಿಸಿದರು. ಕಾಯಕವೇ ಕೈಲಾಸ ಎನ್ನುವ ತತ್ವದಲ್ಲಿ ಕಾಯಕನಿಷ್ಠೆಗೆ ಪ್ರಾಧಾನ್ಯತೆ ನೀಡಿ ಪ್ರತಿಯೊಬ್ಬರಲ್ಲೂ ವೃತ್ತಿ ಗೌರವ ಬೆಳೆಸಿದರು’ ಎಂದರು.
‘ಬಸವಣ್ಣನವರು ರಚಿಸಿರುವ ವಚನಗಳು ವಿಶ್ವ ಮಾನ್ಯವಾಗಿವೆ. ಸರಳ ಕನ್ನಡದಲ್ಲಿ ವಚನಗಳ ರಚನೆ ಮಾಡಿ ತಮ್ಮ ಬದುಕಿನ ಸಾರವನ್ನು ತುಂಬಿ ಸಾಮಾನ್ಯರಿಗೂ ಅರ್ಥವಾಗುವಂತೆ ಬರೆದು ಜನರಲ್ಲಿ ಅರಿವು ಮೂಡಿಸಿದರು’ ಎಂದು ತಿಳಿಸಿದರು.
‘ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ ಜೀವನ ಚರಿತ್ರೆ ಎಲ್ಲರಿಗೂ ಪ್ರೇರಣೆಯಾಗಿದೆ. ಸ್ತ್ರೀಕುಲಕ್ಕೆ ಮಾದರಿಯಾಗಿ, ಭಕ್ತಿಯ ಸಾಕಾರ ಮೂರ್ತಿಯಾಗಿರುವ ಮಲ್ಲಮ್ಮಳ ಜೀವನ ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾಗಿದೆ. ಅವರ ತತ್ವಾದರ್ಶಗಳು ಸರ್ವಕಾಲಿಕ ಶ್ರೇಷ್ಠವಾಗಿವೆ. ಸಹನೆಯಲ್ಲಿ ಹೇಮರೆಡ್ಡಿ ಮಲ್ಲಮ್ಮ ಹೆಸರುವಾಸಿಯಾಗಿದ್ದಾರೆ. ಎಷ್ಟೇ ಕಷ್ಟ ತೊಂದರೆಗಳು ಬಂದರೂ ಸಹ ಅದನ್ನು ಎದುರಿಸಿದ ದಿಟ್ಟ ಮಹಿಳೆ’ ಎಂದರು.
ಅಖಂಡ ವೀರಶೈವ ಲಿಂಗಾಯತ ಸಮಾಜದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನರೆಡ್ಡಿ ಅಮ್ಮಾಪುರ, ಚಂದ್ರಶೇಖರ ಡೊಣ್ಣೂರ, ಶಿವರಾಜ ಕಲಕೇರಿ, ಪತ್ರಕರ್ತ ನಾಗಭೂಷಣ ಯಾಳಗಿ ಮಾತನಾಡಿದರು.
ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಸೂಗುರೇಶ ವಾರದ, ಮಲ್ಲಣ್ಣ ಸಾಹುಕಾರ ಜಾಲಿಬೆಂಚಿ, ಶಿವಶರಣಪ್ಪ ಸಾಹು ಹೈಯಾಳ, ಸಂಗಣ್ಣ ಬೆಳ್ಳಿ, ಜಗದೀಶ ಪಾಟೀಲ್ ಸೂಗೂರು, ಶಿವರುದ್ರ ಉಳ್ಳಿ, ಶರಣು ಸಾಹು ಮುಧೋಳ, ಉದಯಕುಮಾರ ಕಟ್ಟಿಗಿ ಅಡ್ಯಾ, ಪ್ರದೀಪ ಕದರಾಪುರ, ಪ್ರಕಾಶ ಬಣಗಾರ, ಸಿದ್ದಣ್ಣಗೌಡ ಹೆಬ್ಬಾಳ, ಪ್ರಕಾಶ ತಂಬಾಕೆ, ಬಸವರಾಜ ಬಿರಾದಾರ್ ಅಮ್ಮಾಪುರ, ಜಗದೀಶ ತಂಬಾಕೆ, ರಾಘವೇಂದ್ರ ಸಗರ ಲಕ್ಷ್ಮೀಪುರ, ರಾಘವೇಂದ್ರ ಬಳಿ ಲಕ್ಷ್ಮೀಪುರ, ಮಲ್ಲಿಕಾರ್ಜುನ ಮುಧೋಳ ಸೇರಿ ಅನೇಕರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.