ಗುರುಮಠಕಲ್: ತಾಲ್ಲೂಕಿನಲ್ಲಿ ನಕಲಿ ಹತ್ತಿ ಬಿತ್ತನೆ ಬೀಜ ಮಾರಾಟದ ಕುರಿತು ಸುದ್ದಿ ಹಬ್ಬಿದ ಕಾರಣ ಕೃಷಿ ಸಹಾಯಕ ನಿರ್ದೇಶಕಿ (ಜಾರಿದಳ) ರೂಪಾ ಎಂ. ಅವರು ಸೋಮವಾರ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಪರೀಕ್ಷೆ ನಡೆಸಿದರು.
ನಂತರ ತಾಲ್ಲೂಕಿನ ಚಿನ್ನಾಕಾರ ಗ್ರಾಮದ ಮನೆಯೊಂದರಲ್ಲಿ ನಕಲಿ ಹತ್ತಿ ಬಿತ್ತನೆ ಬೀಜದ ದಾಸ್ತಾನು ಮಾಡಲಾಗಿದೆ ಎನ್ನುವ ದೂರಿನಂತೆ ಅಲ್ಲಿಗೆ ಭೇಟಿ ನೀಡಿ ಅಲ್ಲಿರುವ ಹತ್ತಿ ಬೀಜದ ಪ್ಯಾಕೇಟುಗಳನ್ನು ಪರಿಶೀಲಿಸಿದ ನಂತರ ‘ಇಷ್ಟೊಂದು (40 ಪ್ಯಾಕೇಟ್) ಹತ್ತಿ ಬೀಜ ಏಕೆ ಮತ್ತು ಎಲ್ಲಿ ಖರೀದಿಸಿದ್ದು’ ಎಂದು ಪ್ರಶ್ನಿಸಿದರು.
ಅದಕ್ಕೆ ‘ನಾಲ್ಕೈದು ಕುಟುಂಬಗಳು ಬಿತ್ತನೆಗಾಗಿ ತರಿಸಿಕೊಂಡಿದ್ದು, ಗುರುಮಠಕಲ್ನಲ್ಲಿ ಖರೀದಿಸಿ ತಂದಿದ್ದೇವೆ’ ಎಂದು ಮಾಹಿತಿ ನೀಡುತ್ತಿದ್ದಂತೆ, ಬೀಜದ ಮಾದರಿಗಳನ್ನು ಆರ್ಟಿಪಿಸಿಆರ್ ಪರೀಕ್ಷೆಯ ಮೂಲಕ ಬಿತ್ತನೆಗೆ ಯೋಗ್ಯವಾಗಿವೆ ಎನ್ನುವುದನ್ನು ಮತ್ತು ಬೀಜದ ಪ್ಯಾಕೇಟಿನ ಮೇಲೆ ಮುದ್ರಿಸಿದ ವಿವರಗಳು ಸರಿಯಾಗಿರುವುದನ್ನು ಖಚಿತಪಡಿಸಿಕೊಂಡರು. ನಂತರ ಹೆಚ್ಚುವರಿ ಪರೀಕ್ಷೆಗಾಗಿ ಬೀಜದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಟ್ಟರು.
‘ಚಿನ್ನಾಕಾರ ಗ್ರಾಮದ ಸಹೋದರರು ಸೇರಿ ಒಟ್ಟು 40 ಪ್ಯಾಕೆಟ್ ಹತ್ತಿ ಬೀಜ ತಮ್ಮ ಜಮೀನಿನಲ್ಲಿ ಬೆಳೆಯಲು ಖರೀದಿಸಿದ್ದಾರೆ. ಬೀಜವನ್ನು ರ್ಯಾಪಿಡ್ ಟೆಸ್ಟ್ ಮೂಲಕ ಪರಿಶೀಲಿಸಿದಾಗ ಅದು ನಕಲಿಯಲ್ಲ ಹಾಗೂ ಪ್ಯಾಕೇಟ್ನಲ್ಲಿನ ಮಾಹಿತಿ ಪರಿಶೀಲಿಸಿದಾಗ ಅದು ಅಧಿಕೃತ ಕಂಪನಿಯ ಬೀಜವೆಂದು ತಿಳಿದಿದೆ. ಆದರೂ ನಿಖರ ಫಲಿತಾಂಶಕ್ಕಾಗಿ ಪರಿಕ್ಷಾ ಕೇಂದ್ರಕ್ಕೆ ಕಳುಹಿಸಿದ್ದೇವೆ’ ಎಂದು ಕೃಷಿ ಸಹಾಯಕ ನಿರ್ದೇಶಕಿ (ಜಾರಿದಳ) ರೂಪಾ ತಿಳಿಸಿದರು.
ಈ ವೇಳೆ ಕೃಷಿ ಸಹಾಯಕ ನಿರ್ದೇಶಕಿ ಶ್ವೇತಾ, ಕೃಷಿ ಅಧಿಕಾರಿ ಮಲ್ಲಿಕಾರ್ಜುನ ವಾರದ ಹಾಗೂ ರೈತ ಸಂಪರ್ಕ ಕೇಂದ್ರ ಗುರುಮಠಕಲ್ನ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.