ಯರಗೋಳ: ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹತ್ತಿಕುಣಿ ಯೋಜನೆ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿದ್ದು, ಜಲಾಶಯ ತುಂಬಲು ಕ್ಷಣಗಣನೆ ಆರಂಭವಾಗಿದೆ.ಯೋಜನೆ ವ್ಯಾಪ್ತಿಯ ರೈತರ ಮೊಗದಲ್ಲಿ ಸಂತಸ ಮೂಡಿದೆ.
ಮಳೆಯಿಂದಾಗಿ ಜಲಾಶಯಕ್ಕೆ ನಿರಂತರ ನೀರು ಹರಿದು ಬರುತ್ತಿದ್ದು, ಒಳಹರಿವು ಹೆಚ್ಚಳವಾಗಿದೆ. ಜಲಾಶಯ ಯಾವುದೇಸಮಯದಲ್ಲಿ ಅಪಾಯ ಮಟ್ಟ ಮೀರುವ ಹಂತದಲ್ಲಿದ್ದು, ಮುನ್ನೆಚ್ಚರಿಕೆಯಾಗಿ ಹೆಚ್ಚುವರಿ ನೀರನ್ನು ಆಣೆಕಟ್ಟಿನ ಕೋಡಿಯ ಮೂಲಕ ಹಳ್ಳಕ್ಕೆ ಹರಿದು ಬಿಡಲಾಗುವುದು ಎಂದು ಕರ್ನಾಟಕ ನೀರಾವರಿ ನಿಗಮದ ಹತ್ತಿಕುಣಿ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೈಲಾಸನಾಥ ಅನ್ವಾರ ತಿಳಿಸಿದ್ದಾರೆ.
2010, 2013 ಮತ್ತು 2016 ರಲ್ಲಿ ಜಲಾಶಯ ಭರ್ತಿಯಾಗಿತ್ತು. 4 ವರ್ಷಗಳ ನಂತರ ಜಲಾಶಯದ ಗರಿಷ್ಠ ನೀರಿನ ಮಟ್ಟ ತಲುಪಿದ್ದು, ಹೆಚ್ಚುವರಿ ನೀರನ್ನು ಅಣೆಕಟ್ಟಿನ ಕೋಡಿಯ ಮೂಲಕ ನದಿಗೆ ನೀರು ಹರಿ ಬಿಡಲಾಗುವುದು ಎಂದು ಅವರು ಹೇಳಿದ್ದಾರೆ.
ನದಿ ಸುತ್ತಲಿನ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಯಾವುದೇಚಟುವಟಿಕೆಗಳಿಗಾಗಿ ನದಿಯಲ್ಲಿ ಇಳಿಯದಂತೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ.
ಜಲಾಶಯ ಭರ್ತಿಯಾಗುವ ಭರವಸೆಯಿಂದ ಹತ್ತಿಕುಣಿ, ಯಡ್ಡಳ್ಳಿ, ಹೊನಗೇರಾ, ಬಂದಳ್ಳಿ, ಕಟ್ಟಿಗೆಶಾಹಪುರ ಗ್ರಾಮದ ರೈತರು ಸಂತಸದಲ್ಲಿದ್ದಾರೆ. ಯೋಜನೆ ವ್ಯಾಪ್ತಿಯ 2,145 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದ ನೀರಾವರಿಸೌಲಭ್ಯಪಡೆಯಲಿದೆ.
***
ಜಲಾಶಯಕ್ಕೆ ಒಳ ಹರಿವು ಹೆಚ್ಚಳವಾಗಿದೆ. ಯಾವುದೇಸಮಯದಲ್ಲಿ ಜಲಾಶಯ ಭರ್ತಿಯಾಗಬಹುದು. ನದಿ ಪಾತ್ರದಲ್ಲಿರುವ ಜನ ಎಚ್ಚರಿಕೆಯಿಂದ ಇರಬೇಕು
-ವೀರಭದ್ರಪ್ಪ ಯಡ್ಡಳ್ಳಿ, ಅಧ್ಯಕ್ಷ, ಹತ್ತಿಕುಣಿ ಜಲಾಶಯ ನೀರು ಬಳಕೆದಾರರ ಸಹಾಕರ ಸಂಘಗಳ ಮಹಾಮಂಡಳಿ