ಯಾದಗಿರಿ: ಆಯುರ್ವೇದ ಚಿಕಿತ್ಸೆಯಿಂದ ಮನುಷ್ಯನ ಎಲ್ಲಾ ರೋಗಗಳನ್ನು ನಿಯಂತ್ರಿಸಿ ವಾಸಿ ಮಾಡಬಹುದು. ಕೋವಿಡ್ ಸಂದರ್ಭದಲ್ಲಿ ಜನರು ಈ ಚಿಕಿತ್ಸೆ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡು ರೋಗದಿಂದ ಮುಕ್ತರಾಗಿದ್ದಾರೆ ಎಂದು ಡಾ. ಮಂಜುನಾಥ ಸಾಸನೂರ ಹೇಳಿದರು.
ನಗರದ ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಆಯುರ್ವೇದ ದಿವಸ ಅಂಗವಾಗಿ ಧನ್ವಂತರಿ ಜಯಂತಿಯಲ್ಲಿ ಧನ್ವಂತರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಪ್ರಾಚೀನ ಕಾಲದಿಂದಲೂ ಋಷಿ ಮುನಿಗಳು, ನಿಸರ್ಗದಲ್ಲಿರುವ ಔಷಧಿ ಸಸ್ಯಗಳನ್ನು ಕಂಡುಹಿಡಿದು ಔಷಧಿ ತಯಾರಿಸಿ ಜನರ ವಿವಿಧ ರೋಗಗಳಿಗೆ ಚಿಕಿತ್ಸೆ ನೀಡಿದ್ದಾರೆ. ಈಗಲೂ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಇದು ಸಹಕಾರಿಯಾಗಿದೆ ಎಂದು ಆಯುರ್ವೇದ ಮಹತ್ವ ವಿವರಿಸಿದರು.
ಈ ಸಂದರ್ಭದಲ್ಲಿ ಡಾ. ಶಿವಲಿಂಗಪ್ಪ ಪಾಟೀಲ, ನಾಗರಾಜ್ ಕೆಂಭಾವಿ, ಶಿಲ್ಪಾ ರಾಣಿ, ಸಂಗಮೇಶ, ಸುಧಾರಾಣಿ, ರಹೇಮಾನ್ ಸೇರಿದಂತೆ ಸಿಬ್ಬಂದಿವರ್ಗ ಇದ್ದರು.