ಯಾದಗಿರಿ: ಕೊರೊನಾ ಮುಕ್ತ ಮಾಡಲು ಪ್ರತಿಯೊಬ್ಬರು ಮಾಸ್ಕ್ ಹಾಗೂ ಲಸಿಕೆ ತಪ್ಪದೆ ಹಾಕಿಸಿಕೊಳ್ಳುವ ಮೂಲಕ ಕೊರೊನಾ ಮುಕ್ತಿಗೊಳಿಸಲು ಸಹಕಾರಿಯಾಗುತ್ತದೆ ಎಂದು ಖ್ಯಾತ ಮೂಳೆ ತಜ್ಞ ಡಾ. ಶರಣಬಸಪ್ಪ ಕಾಮರಡ್ಡಿ ಬೆಂಡೆಬೆಂಬಳಿ ಹೇಳಿದರು.
ನಗರದ ವಾರ್ಡ್ ನಂ 10ರಲ್ಲಿ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, ಕೊರೊನಾ ಸಂಕಷ್ಟದಿಂದ ಜನರು ಜೀವನ ನಡೆಸಲು ಸಂಕಷ್ಟದಲ್ಲಿದ್ದಾರೆ. ಅದಕ್ಕಾಗಿ ನನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದೇನೆ. ಮುಂಬರುವ ದಿನಗಳಲ್ಲಿ 3ನೇ ಅಲೆ ಬರುತ್ತಿದೆ ಎಂದು ತಜ್ಞರ ಸಮಿತಿ ಈಗಾಗಲೇ ಸರ್ಕಾರಕ್ಕೆ ವರದಿ ನೀಡಿದೆ. ಎಲ್ಲರೂ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಹಾಗೂ ಅಂತರ ಕಾಪಾಡಿಕೊಳ್ಳಲು ಸಲಹೆ ನೀಡಿದರು.
ಕೊರೊನಾದಿಂದ ಅನೇಕ ಬೀದಿ ಬದಿ ವ್ಯಾಪಾರಿಗಳು, ತಳ್ಳು ಗಾಡಿ ವ್ಯಾಪಾರಿಗಳು, ಹಣ್ಣಿನ ವ್ಯಾಪಾರಿಗಳು ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಸರ್ಕಾರ ಬಡವರಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಫಲಾನುಭವಿಗಳಿಗೆ ತಕ್ಷಣ ಅವರಿಗೆ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಉಪಾಧ್ಯಕ್ಷ ಅವಿನಾಶ ಜಗನ್ನಾಥ, ಸಿದ್ದು ಪಾಟೀಲ, ಸುಭಾಷ ಕೊಳ್ಳಿ, ಭೀಮರೆಡ್ಡಿ ಕುರಕುಂದಿ, ಶಂಕರಲಿಂಗಪ್ಪ ಬೊಳಶೆಟ್ಟಿ, ಶರಣು ಇಡ್ಲೂರ, ರೋಹಾನ್ ವಡಿ, ಮಹೇಶ ಬಾರದನ್, ವಿಶ್ವರಾಧ್ಯ ಇದ್ದರು.